ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್ಗೆ ಕಾವೇರಿ ಪ್ರಶಸ್ತಿ
ಮಂಡ್ಯ, ಅಕ್ಟೋಬರ್, 13 : ಖ್ಯಾತ ವಿಜ್ಞಾನಿ ಹಾಗೂ ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್ ಅವರಿಗೆ ರಾಷ್ಟ್ರಮಟ್ಟದ ಕಾವೇರಿ ಪ್ರಶಸ್ತಿ ಲಭಿಸಿದೆ. ಇಲ್ಲಿಯ ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದಲ್ಲಿ ನವರಾತ್ರಿಯ ಅಂಗವಾಗಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿವ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಚಿತ್ರ ಸಾಹಿತಿ, ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಕಲಾಯೋಗಿ ಪ್ರಶಸ್ತಿ ನೀಡಲಾಗಿದೆ. ಹಾಗೇ ಕಾಯಕ ಸೇವಾ ಧುರೀಣ ಪ್ರಶಸ್ತಿಯನ್ನು ಸುರೇಶ್ ಆಲಭಾವಿ, ಸಮಾಜ ಸೇವಾ ಪ್ರಶಸ್ತಿಯನ್ನು ಯು.ಎಸ್. ಶೇಖರ್, ಕೃಷಿ ಕ್ಷೇತ್ರ ವೀರಣ್ಣ ಬಿ. ಮಾಳಗಿ, ಆಡಳಿತ ಕ್ಷೇತ್ರದಿಂದ ಗೊರೂರು ಟಿ.ವೆಂಕಟೇಶ್, ಸೇವಾ ಪ್ರಶಸ್ತಿಯನ್ನು ಲಯನ್ ಕೆ. ವಿರೂಪಾಕ್ಷ ಅವರಿಗೆ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್, ಇಸ್ರೋ ಜನಸಾಮಾನ್ಯರಿಗೆ ಉಪಯೋಗವಾಗುವಂತಹ ಕಾರ್ಯಗಳನ್ನು ನಡೆಸುತ್ತಿದ್ದು, ಜನರ ದೈನಂದಿನ ಜೀವನದಲ್ಲಿ ಇಸ್ರೋ ಉಪಯೋಗಗಳು ಬಹಳಷ್ಟಿವೆ ಎಂದು ತಿಳಿಸಿದರು.
ಚಿತ್ರ ಸಾಹಿತಿ, ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿ, ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನ್ನಂಬಾಡಿ ಗ್ರಾಮ ನಮ್ಮ ತಂದೆಯ ಊರು. ಆದರೂ ಯಾರೂ ನನ್ನನ್ನು ಗುರುತಿಸಿ ನನ್ನ ಗ್ರಾಮಕ್ಕೆ ಇಲ್ಲಿಯವರು ಬರುವಂತೆ ಕರೆ ನೀಡದಿರುವುದು ನನಗೆ ನೋವು ತಂದಿದೆ.
ಆದರೆ, ನನ್ನ ತವರಿನ ಪಕ್ಕದ ಚಂದ್ರವನ ಆಶ್ರಮದವರು ನನ್ನನ್ನು ಕರೆದು ಸನ್ಮಾನಿಸಿ, ಪ್ರಶಸ್ತಿ ನೀಡಿರುವುದು ಸಂತಸ ಮೂಡಿಸಿದೆ. ಕನ್ನಂಬಾಡಿ ಕಟ್ಟೆ ಕಟ್ಟುವಾಗ ನಮ್ಮ ಜಮೀನು ಮತ್ತು ಮನೆ ಎಲ್ಲವೂ ನೀರಲ್ಲಿ ಮುಳುಗಿಹೋಯಿತು.
ನಮ್ಮ ತಂದೆಯವರು ಮದುವೆಯಾಗಿ ಕನ್ನಂಬಾಡಿ ಗ್ರಾಮವನ್ನು ತೊರೆದು ಬೆಂಗಳೂರಿಗೆ ಹೋದಾಗಿನಿಂದಲೂ ನನ್ನ ಮನಸು ತವರಿನ ಕರೆಗೆ ಕಾಯುತ್ತಿದೆ. ಈಗಲಾದರೂ ಒಂದು ದಿನ ನನ್ನ ಗ್ರಾಮದವರು ಕರೆದರೆ ನಾನು ಅಲ್ಲಿಗೆ ಹೋಗುವ ಬಯಕೆಯಾಗಿದೆ ಎಂದು ಹೇಳಿದರು.
ನವರಾತ್ರಿ ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಸಿ.ಎಸ್. ಪುಟ್ಟರಾಜು "ಮಠ-ಮಾನ್ಯಗಳು ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರಕ್ಕಿಂತಲೂ ಹೆಚ್ಚು ಒತ್ತು ನೀಡಿರುವುದರಿಂದ ನಮ್ಮ ದೇಶ ಅಭಿವೃದ್ಧಿಯಲ್ಲಿ ಮುಂದಿದೆ" ಎಂದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಎಲ್ಲರಿಗೂ ಆಶೀರ್ವನ ನೀಡಿದರು. ಶ್ವಾಸ ಗುರು ವಚನಾನಂದ ಸ್ವಾಮೀಜಿ, ನೊನವಿನಕೆರೆ ಕಾಡಸಿದ್ದೇಶ್ವರ ಮಠದ ಕರಿವೃಷಭದೇಶೀಕೇಂದ್ರ ಶಿವಯೋಗಿ ಸ್ವಾಮೀಜಿ, ಚಾರಕೂರು ಮಹಾ ಸಂಸ್ಥಾನ ಮಠದ ಡಾ. ವಿಶ್ವ ಸಂತೋಷ ಭಾರತಿ ಶ್ರೀಪಾದ, ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಆಶ್ರಮದ ವತಿಯಿಂದ ಸುಮಾರು ಎರಡು ಸಾವಿರ ಮಹಿಳೆಯರಿಗೆ ಮಡಿಲು ಅಕ್ಕಿ ವಿತರಣೆ ಮಾಡಲಾಯಿತು.