ಮಂಡ್ಯದಲ್ಲಿ ಮಕ್ಕಳ ಸಾವು : ಸರ್ಕಾರದಿಂದ 1 ಲಕ್ಷ ಪರಿಹಾರ ಘೋಷಣೆ
ಮಂಡ್ಯ, ಫೆಬ್ರವರಿ 12 : ಮಂಡ್ಯದಲ್ಲಿ ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಹಾರ ಘೋಷಣೆ ಮಾಡಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಲಸಿಕೆ ಹಾಕಿದ ನಂತರ ಎರಡು ಮಕ್ಕಳು ಮೃತಪಟ್ಟಿದ್ದವು.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಅವರು ಮಕ್ಕಳ ಕುಟುಂಬ ಸದಸ್ಯರಿಗೆ ತಲಾ 1 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಚಿಂದಗಿರಿದೊಡ್ಡಿ ಗ್ರಾಮದಲ್ಲಿ ಎರಡು ಮಕ್ಕಳು ಸಾವನ್ನಪ್ಪಿದ್ದವು.
ಅಂಗನವಾಡಿ ಕೇಂದ್ರದಲ್ಲಿ 'ಪೆಂಟಾವಲೆಂಟ್' ಚುಚ್ಚುಮದ್ದು ನೀಡಿದ ಬಳಿಕ ಮಕ್ಕಳು ಅಸ್ವಸ್ಥಗೊಂಡಿದ್ದವು. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದವು. ಚುಚ್ಚುಮದ್ದು ನೀಡಿದ್ದರಿಂದಲೇ ಮಕ್ಕಳು ಮೃತಪಟ್ಟಿವೆ ಎಂದು ಜನರು ಆರೋಪಿಸಿ, ಪ್ರತಿಭಟನೆ ನಡೆಸಿದ್ದರು.

'ಮಕ್ಕಳ ಸಾವಿನ ಕುರಿತು ತನಿಖೆ ನಡೆಸಲಾಗುವುದು. ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಔಷಧಿ ಪೂರೈಕೆ ಮಾಡಿದ ಕಂಪನಿ ವಿರುದ್ಧ ಪ್ರಕರಣ ದಾಖಲು ಮಾಡಲಾಗುತ್ತದೆ' ಎಂದು ಸಚಿವ ಎಂ.ಕೃಷ್ಣಪ್ಪ ಹೇಳಿದ್ದಾರೆ.
ಸರ್ಕಾರದಿಂದ 1 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಸಚಿವ ಕೃಷ್ಣಪ್ಪ ಅವರು ವೈಯಕ್ತಿಕವಾಗಿ 50 ಸಾವಿರ, ಜೆಡಿಎಸ್ ಪಕ್ಷದಿಂದ 50 ಸಾವಿರ, ಜೆಡಿಎಸ್ ಮುಖಂಡ ಡಾ.ಎಚ್.ಕೃಷ್ಣ ವೈಯಕ್ತಿಕವಾಗಿ 50 ಸಾವಿರ, ಮುಡಾ ಅಧ್ಯಕ್ಷ ಮುನಾವರ್ ಖಾನ್ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.












Click it and Unblock the Notifications