ಬಿಜೆಪಿ ಸೇರ್ಪಡೆ ವಿಚಾರ: ಮಹತ್ವದ ನಿರ್ಧಾರವನ್ನ ಬಹಿರಂಗಪಡಿಸಿದ ಸಂಸದೆ ಸುಮಲತಾ
ಮಂಡ್ಯ, ಜನವರಿ, 06: ಬಿಜೆಪಿ ಸೇರ್ಪಡೆ ವಿಚಾರವಾಗಿ ನಾನು ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಸಾರ್ವಜನಿಕರ ಜೊತೆ ಚರ್ಚಿಸಿಯೇ ತೀರ್ಮಾನ ತೆಗೆದುಕೊಳ್ಳುತ್ತೇನೆ. ಸದ್ಯಕ್ಕೆ ತಟಸ್ಥರಾಗಿ ಉಳಿಯಲು ನಿರ್ಧರಿಸಿದ್ದೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಮಂಡ್ಯದಲ್ಲಿ ತಿಳಿಸಿದರು.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣೆಯಲ್ಲಿ ಅವರ ಅಭಿಮಾನಕ್ಕೆ ನನ್ನ ಫೋಟೋಗಳನ್ನು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹಾಕಿಕೊಂಡಿದ್ದಾರೆ. ಸಚ್ಚಿದಾನಂದಗೆ ನನ್ನ ಬೆಂಬಲವಿದೆ ಅನ್ನುವುದು ಸಿಕ್ರೇಟ್ ಏನಿಲ್ಲ. ನಾನೇ ಬಹಿರಂಗವಾಗಿ ನನ್ನ ಬೆಂಬಲವನ್ನು ಸಚ್ಚಿದಾನಂದಗೆ ಇದೆ ಎಂದು ಹೇಳಿದ್ದೇನೆ ಎಂದರು. ಜನರನ್ನು ಸಂಪರ್ಕಿಸಿ, ಚರ್ಚಿಸಿ ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆಯೋ ಅದಕ್ಕೆ ನಾನು ಬದ್ದವಾಗಿದ್ದೇನೆ. ಸದ್ಯಕ್ಕೆ ಯಾವ ಪಕ್ಷ ಸೇರುವುದು ಬೇಡ ತಟಸ್ಥರಾಗಿರಿ ಎಂದು ಜನ ಹೇಳಿದ್ದಾರೆ ಅಂತಾ ತಿಳಿಸಿದರು.

ಬೇರೆ ಅರ್ಥಗಳನ್ನು ಕಲ್ಪಿಸುವುದು ಬೇಡ
ಸಚ್ಚಿದಾನಂದ ಅವರು ಚುನಾವಣೆಯಲ್ಲಿ ನನ್ನ ಫೋಟೋವನ್ನು ಹಾಕಿದ್ದಾರೆ ಎಂಬ ಮಾತ್ರಕ್ಕೆ ಬೇರೆ ಬೇರೆ ಅರ್ಥಗಳನ್ನು ಕಲ್ಪಿಸುವುದು ಬೇಡ. ಸ್ವಾಭಿಮಾನಿ ಪಡೆ ಪಕ್ಷ ಕಟ್ಟುವ ವಿಚಾರವಾಗಿ ನಗುತ್ತಲೇ ಪ್ರತಿಕ್ರಿಯಿಸಿದ ಸುಮಲತಾ, ದೇವರು ಅಷ್ಟು ಶಕ್ತಿ ಕೊಡಲಿ, ನಿಮ್ಮ ಮಾತು ನಿಜಾ ಆಗಲಿ. ಸದ್ಯ ಆ ರೀತಿಯ ಯಾವುದೇ ಯೋಜನೆ ಇಲ್ಲ ಎಂದು ಹೇಳಿದರು. ಇನ್ನು ನಿನ್ನೆ ಗುರುವಾರ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಬೆಂಗಳೂರು-ಮೈಸೂರು ಹೆದ್ದಾರಿ ಅವೈಜ್ಞಾನಿಕ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ಹಾಗೆಯೇ ಅವರು ಕೂಲಂಕುಶವಾಗಿ ಪರಿಶೀಲಿಸಿ ಬಳಿಕ ಸೂಚನೆ ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದರು.

ಭ್ರಷ್ಟಾಚಾರ ನಡೆಯುತ್ತಿರುವುದು ನೋವಿನ ಸಂಗತಿ
ಮಂಡ್ಯಕ್ಕೆ ಪ್ರವೇಶ ಮತ್ತು ಹೊರಹೋಗುವ ವಿಚಾರವನ್ನೂ ಸಹ ಪ್ರಸ್ತಾಪಿಸಿದ್ದೇನೆ. ಅದಕ್ಕೆ ಅವರು ಖಂಡಿತ ಮಂಡ್ಯದ ಜನತೆಗೆ ಒಳ್ಳೆಯದಾಗುತ್ತದೆ ಅನ್ನುವ ಭರವಸೆ ನೀಡಿದ್ದಾರೆ ಎಂದು ಉತ್ತರಿಸಿದರು. ಇನ್ನು ವಿಧಾನಸೌಧದ ಪಡಸಾಲೆಯಲ್ಲಿ 10.5 ಲಕ್ಷ ರೂಪಾಯಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಕೆಲವು ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದು ನೋವಿನ ಸಂಗತಿಯಾಗಿದೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು, ಈ ಪ್ರಕರಣದ ಹಿಂದೆ ಯಾರಿದ್ದಾರೆಯೋ ಅವರಿಗೆ ಸೂಕ್ತ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು ಎಂದರು.











Click it and Unblock the Notifications