ಸಿದ್ದರಾಮಯ್ಯ ಒಂದು ನಡೆಯಿಂದ ಮೇಲುಕೋಟೆಯಲ್ಲಿ ಕೋಮಾ ತಲುಪಿದ ಕಾಂಗ್ರೆಸ್
Recommended Video
ಮಂಡ್ಯ, ಏಪ್ರಿಲ್ 9: ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರಭಾವಿ ನಾಯಕ, ಸಂಸದ ಸಿ.ಎಸ್.ಪುಟ್ಟರಾಜು ವಿಧಾನಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿರುವುದರಿಂದ ಅವರನ್ನು ಸೋಲಿಸುವ ಹಠಕ್ಕೆ ಬಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತ ಸಂಘಕ್ಕೆ ಬೆಂಬಲ ನೀಡುವ ಮೂಲಕ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ತಂತ್ರ ರೂಪಿಸಿದ್ದರು.
ಆದರೆ, ಈಗ ಅದು ಉಲ್ಟಾ ಹೊಡೆಯುವ ಲಕ್ಷಣಗಳು ಕಂಡು ಬರುತ್ತಿದೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಅಸಮಾಧಾನಗೊಂಡಿದ್ದು, ಆ ಪೈಕಿ ಕೆಲವರು ಬೇರೆ ಪಕ್ಷಗಳಿಗೆ ವಲಸೆ ಹೋಗುವ ಮೂಲಕ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.
ಮೇಲುಕೋಟೆ ಕ್ಷೇತ್ರದಿಂದ ದರ್ಶನ್ ಪುಟ್ಟಣ್ಣಯ್ಯ ಕಣಕ್ಕೆ
ಹಾಗೆ ನೋಡಿದರೆ 2013ರ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ರೈತ ಸಂಘದ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ ಮತ್ತು ಜೆಡಿಎಸ್ ನ ಸಿ.ಎಸ್.ಪುಟ್ಟರಾಜು ಅವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತು. ಕೊನೆ ಕ್ಷಣದಲ್ಲಿ ಪುಟ್ಟಣ್ಣಯ್ಯ ಅವರು ಗೆಲುವಿನ ಪತಾಕೆ ಹಾರಿಸಿದ್ದರು.
ಬದಲಾದ ರಾಜಕೀಯ ಬೆಳವಣಿಗೆಯಲ್ಲಿ 2014ರ ಲೋಕಸಭಾ ಚುನಾವಣೆಯಲ್ಲಿ ಸಿ.ಎಸ್.ಪುಟ್ಟರಾಜು ಸ್ಪರ್ಧಿಸಿ, ಸಂಸದರಾಗಿ ಆಯ್ಕೆಯಾಗುವ ಮೂಲಕ ಈ ವ್ಯಾಪ್ತಿಯಲ್ಲಿ ಜೆಡಿಎಸ್ ಅನ್ನು ಬಲಪಡಿಸಿದ್ದರು. ಕ್ಷೇತ್ರದಲ್ಲಿ ರೈತ ಸಂಘಕ್ಕೂ ಜೆಡಿಎಸ್ ಗೂ ಆಗಿ ಬರುತ್ತಿರಲಿಲ್ಲ. ಹೀಗಾಗಿ ಹಲವು ಬಾರಿ ಶಾಸಕ ಪುಟ್ಟಣ್ಣಯ್ಯ ಹಾಗೂ ಸಂಸದ ಪುಟ್ಟರಾಜು ಅವರು ಒಂದೇ ಕಾಮಗಾರಿಗೆ ಎರಡೆರಡು ಬಾರಿ ಭೂಮಿಪೂಜೆ ನಡೆಸಿದ ಉದಾಹರಣೆಗಳು ಇದ್ದವು.
ಏಕಾಏಕಿ ಬೆಂಬಲ ನೀಡಿದರು ಸಿದ್ದರಾಮಯ್ಯ
ಇವರಿಬ್ಬರ ಕಿತ್ತಾಟದ ನಡುವೆ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ, ತೀವ್ರ ಪೈಪೋಟಿ ನೀಡಲು ಹಲವು ನಾಯಕರು ಮತ್ತು ಕಾರ್ಯಕರ್ತರು ಪ್ರಯತ್ನ ಮಾಡುತ್ತಲೇ ಬಂದಿದ್ದರು. ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರ ನಿಧನದ ವೇಳೆ ರೈತ ಸಂಘದಿಂದ ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಕಣಕ್ಕಿಳಿಸಲು ಮುಖಂಡರು ತೀರ್ಮಾನ ಕೈಗೊಂಡ ವೇಳೆಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಕಾಏಕಿ ಅವರಿಗೆ ಬೆಂಬಲ ನೀಡಿದರು.
ಬೇರೆ ಪಕ್ಷಗಳತ್ತ ಮುಖ ಮಾಡಿದ ಕಾಂಗ್ರೆಸ್ಸಿಗರು
ಅಲ್ಲದೆ, ಮೇಲುಕೋಟೆ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ಘಂಟಾಘೋಷವಾಗಿ ಹೇಳಿಬಿಟ್ಟರು. ಇದು ಆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಶ್ರಮಿಸಿದ ಹಲವು ಮುಖಂಡರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿ ಬಿಟ್ಟಿತು. ಕೆಲವರು ಮೌನಕ್ಕೆ ಶರಣಾದರೆ, ಮತ್ತೆ ಕೆಲವರು ಬೇರೆ ಪಕ್ಷಗಳತ್ತ ಮುಖ ಮಾಡಿದ್ದಾರೆ.
ಜೆಡಿಎಸ್ ನಿಂದ ಪುಟ್ಟರಾಜು ಕಣಕ್ಕೆ
ಈ ಬಾರಿ ಜೆಡಿಎಸ್ ನಿಂದ ಅಭ್ಯರ್ಥಿಯಾಗಿ ಸಿ.ಎಸ್.ಪುಟ್ಟರಾಜು ಕಣಕ್ಕಿಳಿಯುತ್ತಿದ್ದು, ಅವರಿಗೆ ಪ್ರಬಲ ಪೈಪೋಟಿ ನೀಡುತ್ತಿರುವುದು ರೈತ ಸಂಘದ ನಾಯಕ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ. ಆದರೆ ಸಿ.ಎಸ್.ಪುಟ್ಟರಾಜು ಅವರು ಗೆಲ್ಲಲೇ ಬೇಕಾಗಿರುವುದರಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಅಸಮಾಧಾನವನ್ನು ಸದುಪಯೋಗಿಸಿಕೊಳ್ಳುತ್ತಾ ತಂತ್ರಗಳನ್ನು ಮಾಡುತ್ತಲೇ ಬರುತ್ತಿದ್ದು, ಅತೃಪ್ತ ಕಾಂಗ್ರೆಸ್ ನಾಯಕರನ್ನು ಜೆಡಿಎಸ್ ಗೆ ಸೆಳೆಯುತ್ತಿದ್ದಾರೆ.
ಜೆಡಿಎಸ್ ಸೇರುತ್ತಿರುವ ಕಾಂಗ್ರೆಸ್ಸಿಗರು
ಈಗಾಗಲೇ ಬಹಳಷ್ಟು ಕಾರ್ಯಕರ್ತರು ಜೆಡಿಎಸ್ ಗೆ ಸೇರ್ಪಡೆಗೊಂಡಿದ್ದು, ದಿನ ಕಳೆಯುತ್ತಿದ್ದಂತೆಯೇ ಇನ್ನಷ್ಟು ಮಂದಿ ಜೆಡಿಎಸ್ ತೆಕ್ಕೆಗೆ ಬೀಳುವ ಲಕ್ಷಣಗಳು ಕಂಡು ಬರುತ್ತಿದೆ. ಇದೀಗ ಹೊಳಲು ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಮುಖಂಡ ಎಚ್.ಮಲ್ಲಿಗೆರೆ ಗ್ರಾಮದ ಮಾದೇಗೌಡ ಅವರು ಕಾಂಗ್ರೆಸ್ ಪಕ್ಷ ತೊರೆದು, ಜೆಡಿಎಸ್ ಸೇರ್ಪಡೆಗೊಂಡಿರುವುದು ಇನ್ನಷ್ಟು ಬಲ ಬಂದಂತಾಗಿದೆ.
ಮುಖ್ಯಮಂತ್ರಿ ತೀರ್ಮಾನದಿಂದ ಪಕ್ಷ ಬಿಟ್ಟೆ
ಜೆಡಿಎಸ್ ಪಕ್ಷ ಸೇರ್ಪಡೆ ಸಂದರ್ಭದಲ್ಲಿ ಮಾತನಾಡಿದ ಮಾದೇಗೌಡ, ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತರಿಗೆ ಬೆಲೆ ಇಲ್ಲದಂತಾಗಿದೆ. ಮುಖ್ಯಮಂತ್ರಿಗಳು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಸ್ಪರ್ಧಿಸುವುದಿಲ್ಲ ಎಂದು ಪ್ರಕಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಪಕ್ಷ ತ್ಯಜಿಸಬೇಕಾಗಿದೆ ಎಂದಿದ್ದಾರೆ. ಇದು ಮಾದೇಗೌಡ ಅವರೊಬ್ಬರ ಅಭಿಪ್ರಾಯವಲ್ಲ. ಬಹುತೇಕ ನಾಯಕರು ಇಂತಹ ಮಾತುಗಳನ್ನೇ ಆಡುತ್ತಿದ್ದಾರೆ. ಇದರ ಲಾಭ ಜೆಡಿಎಸ್ ಗೆ ಆಗುತ್ತಾ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.