ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
ಮಂಡ್ಯ, ಸೆಪ್ಟೆಂಬರ್ 25: ಐತಿಹಾಸಿಕ ಮೈಸೂರು ದಸರಾದ ಮೂಲ ಸ್ಥಾನವಾದ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಮೂರು ದಿನಗಳ ಕಾಲ ನಡೆಯುವ ದಸರಾ ಮಹೋತ್ಸವಕ್ಕೆ ಸೆ.24 ರಂದು ಚಾಲನೆ ನೀಡಲಾಯಿತು.
ಕಿರಂಗೂರು ಬಳಿಯ ಬನ್ನಿಮಂಟಪದಲ್ಲಿ ಸಾಹಿತಿ ಡಾ.ಮರಳ ಸಿದ್ದಪ್ಪ ಅವರು ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆಯೊಂದಿಗೆ ಚಾಲನೆ ನೀಡಿದರು.
In Pics : ಶೋಭನಾ ನಾಟ್ಯಕ್ಕೆ ಮನಸೋತ ಮೈಸೂರಿಗರು
ಬಳಿಕ ಮಾತನಾಡಿ, ದುಷ್ಟ ಶಕ್ತಿಗಳ ವಿರುದ್ಧ ಶಿಷ್ಟ ಶಕ್ತಿಗಳು ಹೋರಾಡುವುದೇ ದಸರಾ ಸಂಕೇತ. ಪ್ರಸ್ತುತ ದಿನಗಳಲ್ಲಿ ಯಾರು ದುಷ್ಟಶಕ್ತಿಗಳು ಎಂಬುದನ್ನು ನಾವು ಗುರುತಿಸಬೇಕು. ದುಷ್ಟ ಶಕ್ತಿಗಳ ವಿರುದ್ಧ ಎಲ್ಲಾ ಶಕ್ತಿಗಳು ಒಗ್ಗೂಡಿ ಅಹಿಂಸಾತ್ಮಕವಾಗಿ ಹೋರಾಟ ಮಾಡುವ ಮೂಲಕ ಯಶಸ್ಸು ಸಾಧಿಸಬೇಕಾಗಿದೆ ಎಂದರು.
ವೇದ ಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ 8 ವೈದಿಕರ ತಂಡ ಪ್ರಥಮವಾಗಿ ನಂದಿ ಕಂಬಕ್ಕೆ ಪೂಜೆ ಸಲ್ಲಿಸಿ ನಂತರ ಮಧ್ಯಾಹ್ನ 3 ಗಂಟೆಯಿಂದ 4ರ ಅಭಿಜಿನ್ ಲಗ್ನದಲ್ಲಿ ಹಲವು ಪೂಜಾಕೈಂಕರ್ಯಗಳು ನಡೆಯುವ ಮೂಲಕ ವಿಧ್ಯುಕ್ತವಾಗಿ ಆರಂಭವಾಯಿತು.
ಧಾರ್ಮಿಕ ಕಾರ್ಯಗಳು
ಗಣಪತಿ ಹೋಮ, ನವಗ್ರಹ ಪೂಜೆ, ಪುಣ್ಯಾಹ, ಶಮಿಪೂಜೆ, ಚಾಮುಂಡಿ ಪೂಜೆ ಹಾಗೂ ನೂತನ ಬನ್ನಿಮಂಟಪಕ್ಕೆ ಬನ್ನಿಪೂಜೆ ಕೂಷ್ಮಾಂಡ ಚೇಧನ, ಮಹಾಭಿಷೇಕ, ಪುಷ್ಪಾರ್ಚನೆ ಸಲ್ಲಿಸಲಾಯಿತು. ನಂತರ ಬನ್ನಿ ವೃಕ್ಷಕ್ಕೆ ಶಾಸಕ ರಮೇಶ್ಬಾಬು ಬಂಡಿಸಿದ್ದೇಗೌಡ ಪೂಜೆ ನೆರವೇರಿಸಿದರು. ಜಿಲ್ಲಾಧಿಕಾರಿ ಎನ್.ಮಂಜುಶ್ರೀ, ಉಪ ವಿಭಾಗಾಧಿಕಾರಿ ಯಶೋಧ, ತಹಸೀಲ್ದಾರ್ ಕೆ.ಕೃಷ್ಣ ಪುರಸಭಾ ಸದಸ್ಯರು ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡಿದ್ದರು.
ರಾಜಬೀದಿಯಲ್ಲಿ ಮೆರವಣಿಗೆ
ಶ್ರೀ ಚಾಮುಂಡೇಶ್ವರಿ ಮೂರ್ತಿ ಹೊತ್ತ ರಥದೊಂದಿಗೆ ಆರಂಭಗೊಂಡ ದಸರಾ ಉತ್ಸವ ಕಳಶಹೊತ್ತ ಮಹಿಳೆಯರು ಹಾಗೂ ವಿವಿಧ ಕಲಾತಂಡಗಳೊಂದಿಗೆ ಕಿರಂಗೂರು ಗ್ರಾಮದ ಮಾರ್ಗವಾಗಿ ಬಾಬುರಾಯನಕೊಪ್ಪಲು, ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸಾಗಿ ಪಟ್ಟಣದ ಕೋಟೆಯ ದ್ವಾರದ ಮೂಲಕ ರಾಜಬೀದಿಗಳಲ್ಲಿ ಮೆರವಣಿಗೆ ಸಾಗಿ ರಂಗನಾಥ ಸನ್ನಿಧಿವರೆಗೆ ಸಾಗಿತು. ಮೆರವಣಿಗೆಯಲ್ಲಿ ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ್ದ ಕಲಾತಂಡಗಳು ಭಾಗವಹಿಸಿದ್ದವು.
ಕಾಣದ ಸಂಭ್ರಮ
ಪ್ರಚಾರದ ಕೊರತೆ, ಜಿಲ್ಲಾಡಳಿತದ ಕೊರತೆಯಿಂದ ಶ್ರೀರಂಗಪಟ್ಟಣ ದಸರಾ ಕಳೆಗುಂದಿದ್ದು ಕಂಡು ಬಂತು. ಮೆರವಣಿಗೆಯಲ್ಲಿ ಹೆಚ್ಚಿನ ಜನ ಕಂಡು ಬರಲಿಲ್ಲ. ಜತೆಗೆ ಒಂದಷ್ಟು ಅವ್ಯವಸ್ಥೆಗಳು ಗೋಚರಿಸಿದವಲ್ಲದೆ, ದಸರಾ ಬನ್ನಿ ಮಂಟದ ಬಳಿ ಕುಡಿಯುವ ನೀರಿನ ಸೌಲಭ್ಯ, ತಾತ್ಕಾಲಿಕ ಸಾಮೂಹಿಕ ಶೌಚಾಲಯಗಳಿಲ್ಲದೆ ಜನರು ಮತ್ತು ಕಲಾವಿದರು ತೊಂದರೆ ಅನುಭಸಬೇಕಾಯಿತು.
ಪೊಲೀಸ್ ಬಂದೋಬಸ್ತ್
ದಸರಾ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಎಎಸ್ ಪಿ ಲಾವಣ್ಯ, ಡಿವೈಎಸ್ ಪಿ ವಿಶ್ವನಾಥ್ ಅವರು ಖುದ್ದು ಹಾಜರಿದ್ದು ಬಂದೋಬಸ್ತ್ ಕಲ್ಪಿಸಿದ್ದರು.