ಮಳವಳ್ಳಿ ಜನರನ್ನು ಬೆಚ್ಚಿ ಬೀಳಿಸಿದೆ ಕೊರೊನಾ ಕುರಿತ ಈ ಒಂದು ಸಂಗತಿ...
ಮಂಡ್ಯ, ಏಪ್ರಿಲ್ 06: ಮಳವಳ್ಳಿ ತಾಲೂಕಿನಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ ಹಾಗೂ ಲಾಕ್ ಡೌನ್ ಅನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಇದುವರೆಗೆ ಜಿಲ್ಲೆಯ ಜನ ಕೊರೊನಾ ವೈರಸ್ ಭೀತಿಯಿಂದ ಸ್ವಲ್ಪ ಮಟ್ಟಿಗೆ ರಿಲ್ಯಾಕ್ಸ್ ಆಗಿದ್ದರು. ಆದರೆ ಇದೀಗ ದೆಹಲಿ ಮೂಲದ ಹತ್ತು ಮಂದಿ ಮೌಲ್ವಿಗಳ ಜೊತೆ ಸಂಪರ್ಕದಲ್ಲಿದ್ದ ಮಳವಳ್ಳಿ ಪಟ್ಟಣದ 25 ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಿರುವುದು ಮತ್ತೆ ಇಲ್ಲಿನ ಜನರನ್ನು ಭಯಭೀತರನ್ನಾಗುವಂತೆ ಮಾಡಿದೆ.
ಸದ್ಯ ಕೊರೊನಾ ಶಂಕಿತ 25 ಮಂದಿಯನ್ನು ಮಳವಳ್ಳಿ ತಾಲೂಕಿನ ಬಾಚನಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ ಹೋಂ ಕ್ವಾರಂಟೈನ್ ನಲ್ಲಿಡಲಾಗಿದೆ. ದೆಹಲಿ ಮೂಲದ ಹತ್ತು ಮೌಲ್ವಿಗಳು ಮೊದಲು ನಾಗಮಂಗಲಕ್ಕೆ ಬಂದು ಕೆಲ ದಿನಗಳ ಕಾಲ ಇದ್ದು, ನಂತರ ಮಳವಳ್ಳಿ ಪಟ್ಟಣದ ಮಸೀದಿಯೊಂದರಲ್ಲಿ ಒಂದು ವಾರಗಳ ಕಾಲ ತಂಗಿ, ಬನ್ನೂರಿಗೆ ತೆರಳಿ ಅಲ್ಲಿಂದ ಮೈಸೂರಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು ಎನ್ನಲಾಗಿದೆ.
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶುಕ್ರವಾರವೇ ಉಪವಿಭಾಗಾಧಿಕಾರಿ ಸೂರಜ್ ಮತ್ತು ಅಪರ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ನೇತೃತ್ವದಲ್ಲಿ ಹಲವು ಮಸೀದಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಮೌಲ್ವಿಗಳು ಸುಮಾರು ಎಂಟು ದಿನಗಳ ಕಾಲ ಇಲ್ಲೇ ವಾಸವಿದ್ದದ್ದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಅವರ ಸಂಪರ್ಕದಲ್ಲಿದ್ದ ಸ್ಥಳೀಯ 25 ನಿವಾಸಿಗಳನ್ನು ಕರೆತಂದು ಬಾಚನಹಳ್ಳಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ಹೋಂ ಕ್ವಾರೆಂಟೈನ್ ನಲ್ಲಿ ಇಡಲಾಗಿದೆ. ಅವರ ಕಾವಲಿಗೆ ವೈದ್ಯರು ಮತ್ತು ಪೊಲೀಸರ ತಂಡ ನಿಂತಿದೆ.

ಈ ವಿಷಯ ತಿಳಿಯುತ್ತಿದ್ದಂತೆಯೇ ಜನ ಅಂಗಡಿ ಬಾಗಿಲು ಮುಚ್ಚಿ ಮನೆಯಲ್ಲಿಯೇ ಕುಳಿತಿದ್ದಾರೆ. ಮಳವಳ್ಳಿ ಸೇರಿದಂತೆ ಸುತ್ತಮುತ್ತಲಿನ ಊರುಗಳಲ್ಲಿಯೂ ಅಂಗಡಿ ಮುಂಗಟ್ಟು ಮುಚ್ಚಿ ಲಾಕ್ ಡೌನ್ ಬಿಗಿಗೊಳಿಸಲಾಗಿದೆ. ಮನೆಯಿಂದ ಯಾರೂ ಬಾರದಂತೆ ಎಚ್ಚರ ವಹಿಸಲಾಗಿದೆ.












Click it and Unblock the Notifications