ಮಂಡ್ಯದ ವರನ ಕೋರಿಕೆ ಓಕೆ ಮಾಡಿದ ಎಚ್ ಡಿಕೆ
ಮಂಡ್ಯ, ಡಿಸೆಂಬರ್ 05 : ತನ್ನ ಮದುವೆಗೆ ಮಾಜಿ ಸಿಎಂ ಕುಮಾರಸ್ವಾಮಿ ಬರಲೇಬೇಕೆಂದು ಪಟ್ಟು ಹಿಡಿದು ಕುಳಿತಿದ್ದ ವರನೊಬ್ಬನ ಮೆನೆಗೆ ಕೊನೆಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ನವ ದಂಪತಿಗಳಿಗೆ ಶುಭ ಹಾರೈಸಿದರು.
ಮಂಡ್ಯ: ಕುಮಾರಸ್ವಾಮಿ ಆಗಮನಕ್ಕಾಗಿ ಉಪವಾಸ ಕುಳಿತ ವರ!
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರು ಗ್ರಾಮದ ನಿವಾಸಿ ರವಿ ಎಂಬಾತನೇ ತನ್ನ ಮದುವೆಗೆ ಎಚ್.ಡಿ.ಕುಮಾರಸ್ವಾಮಿ ಬರಲೇ ಬೇಕೆಂದು ಉಪವಾಸ ಸತ್ಯಾಗ್ರಹ ಕುಳಿತಿದ್ದ. ಈತ ಕುಮಾರಸ್ವಾಮಿ ಅವರಿಂದ ಆಶೀರ್ವಾದ ಪಡೆಯಬೇಕೆಂಬ ಬಯಕೆ ಹೊಂದಿದ್ದ. ಈ ಹಿನ್ನೆಲೆಯಲ್ಲಿ ಮಂಗಳವಾರ ಕುಮಾರಸ್ವಾಮಿ ಮನೆಗೆ ಭೇಟಿ ನೀಡಿ ಅಭಿಮಾನಿಯ ಆಸೆಯನ್ನು ಈಡೇರಿಸಿದರು.
ರವಿಗೆ ತನ್ನ ಅಕ್ಕನ ಮಗಳೊಂದಿಗೆ ಡಿಸೆಂಬರ್ 1ರಂದು ವಿವಾಹ ನಿಗದಿಯಾಗಿತ್ತು. ವಿವಾಹದ ಆಮಂತ್ರಣ ಪತ್ರಿಕೆಯನ್ನು ಎಚ್.ಡಿ.ಕುಮಾರಸ್ವಾಮಿ ಅವರಿಗೂ ತಲುಪಿಸಿದ್ದ. ಆದರೆ, ಕುಮಾರಸ್ವಾಮಿ ಅವರು ಮದುವೆಗೆ ಬರದಿದ್ದರಿಂದ ರವಿ ತಾಳಿ ಕಟ್ಟಲು ನಿರಾಕರಿಸಿದ್ದ.
ಪ್ರತಿಭಟನೆ ಮಾಹಿತಿ ತಿಳಿದು ರವಿಯೊಂದಿಗೆ ಮೊಬೈಲ್ನಲ್ಲಿ ಮಾತನಾಡಿದ್ದ ಎಚ್.ಡಿ.ಕುಮಾರಸ್ವಾಮಿ ಅವರು, ಮದುವೆಗೆ ಬರಲಾಗುವುದಿಲ್ಲ. ಆದರೆ ಮದುವೆಯಾದ ನಂತರ ಮನೆಗೆ ಬರುತ್ತೇನೆ ಎಂದು ಭರವಸೆ ನೀಡಿದ್ದರು.
ತನ್ನ ನೆಚ್ಚಿನ ನಾಯಕನ ಭರವಸೆಯಂತೆ ರವಿ ಪ್ರತಿಭಟನೆ ಕೈಬಿಟ್ಟು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕೊಟ್ಟ ಮಾತಿನಂತೆ ಮಂಗಳವಾರ ಅಭಿಮಾನಿ ಮನೆಗೆ ಕುಮಾರಸ್ವಾಮಿ ಭೇಟಿ ನೀಡಿ ನವ ವಧುವರರಿಗೆ ಶುಭ ಕೋರಿದರು.