ಬಂಡಿಹೊಳೆಯಲ್ಲಿನ ಸಿಎಂ ಗ್ರಾಮವಾಸ್ತವ್ಯ ಬಿಚ್ಚಿಟ್ಟ ನೆನಪುಗಳು...!

ಮಂಡ್ಯ, ಜೂನ್ 12: ವಿರೋಧ ಪಕ್ಷಗಳ ಟೀಕೆಗಳ ನಡುವೆಯೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮೈಕೊಡವಿಕೊಂಡು ಗ್ರಾಮವಾಸ್ತವ್ಯಕ್ಕೆ ಸಿದ್ಧರಾಗಿದ್ದಾರೆ. ಮೇಲಿಂದ ಮೇಲೆ ಹಿನ್ನಡೆಯಾಗುತ್ತಿರುವ ಪಕ್ಷವನ್ನು ಬಲವರ್ಧನೆಗೊಳಿಸಲು ಮತ್ತು ತಮ್ಮ ಸಿಎಂ ಖುರ್ಚಿಯನ್ನು ಗಟ್ಟಿಗೊಳಿಸಲು ಅವರಿಗಿರುವ ಒಂದೇ ಒಂದು ದಾರಿ ಎಂದರೆ ಅದು ಗ್ರಾಮ ವಾಸ್ತವ್ಯ ಮಾತ್ರ.

ಕರ್ನಾಟಕದಲ್ಲಿ ಗ್ರಾಮವಾಸ್ತವ್ಯದ ಮೂಲಕ ಹೊಸ ಪ್ರಯೋಗ ಸೃಷ್ಟಿ ಮಾಡಿದ್ದ ಕುಮಾರಸ್ವಾಮಿ ಅವರು ಬಳಿಕ ಅದನ್ನು ಮರೆತುಬಿಟ್ಟರು. ಆದರೆ ಇದನ್ನೇ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ನಾಯಕರು ಮುಂದುವರೆಸಿದರು. ಅಷ್ಟರಲ್ಲಾಗಲೇ ಅದು ಕೇವಲ ಗಿಮಿಕ್, ಅದರಿಂದ ಯಾವ ಪ್ರಯೋಜನವಾಗಿಲ್ಲ ಎಂಬ ಆರೋಪಗಳು ಕೇಳಿ ಬರತೊಡಗಿದವು. ಅಷ್ಟೇ ಅಲ್ಲ, ಗ್ರಾಮ ವಾಸ್ತವ್ಯದ ಬಳಿಕ ಅಲ್ಲಿನ ಗ್ರಾಮಗಳು ಉದ್ಧಾರವಾಗಿದ್ದಕ್ಕೆ ಪುರಾವೆಗಳು ಕಡಿಮೆಯೇ.

 ಮಂಡ್ಯ ಜನರ ಸೆಳೆದ ಗ್ರಾಮವಾಸ್ತವ್ಯ

ಮಂಡ್ಯ ಜನರ ಸೆಳೆದ ಗ್ರಾಮವಾಸ್ತವ್ಯ

ಇವತ್ತು ಮಂಡ್ಯ ಜಿಲ್ಲೆಯನ್ನು ಜೆಡಿಎಸ್ ನ ಭದ್ರಕೋಟೆ ಎಂದು ಹೇಳಲಾಗುತ್ತಿದೆ. ಅಲ್ಲಿ ಸುಮಾರು 12 ವರ್ಷಗಳ ಹಿಂದೆ ಬಿಜೆಪಿಯೊಂದಿಗೆ ಸೇರಿ ಟ್ವೆಂಟಿ 20 ಸರ್ಕಾರ ಮಾಡಿದ್ದಾಗ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಕೆ.ಆರ್.ಪೇಟೆ ತಾಲ್ಲೂಕಿನ ಬಂಡಿಹೊಳೆ ಗ್ರಾಮದ ನಾಗಮ್ಮ ಮತ್ತು ಶ್ರೀನಿವಾಸಶೆಟ್ಟಿ ಎಂಬುವವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು.

ಅವತ್ತಿನ ದಿನಗಳಿಗೆ ಹೋಗಿದ್ದೇ ಆದರೆ, ಅವತ್ತು ಸಿಎಂ ವಾಸ್ತವ್ಯ ಹೂಡಿದ್ದಾಗ ಏನೆಲ್ಲ ನಡೆಯಿತು? ಇವತ್ತು ಸಿಎಂ ವಾಸ್ತವ್ಯ ಹೂಡಿದ್ದ ಮನೆಯ ಕುಟುಂಬ ಹೇಗಿದೆ? ಊರು ಅಭಿವೃದ್ಧಿಯಾಗಿದೆಯಾ? ಹತ್ತಾರು ಪ್ರಶ್ನೆಗಳಿಗೆ ಉತ್ತರವೇ ಸಿಗುವುದಿಲ್ಲ.

 ಅವತ್ತು ಏನು ಹೇಳಿದ್ದರು?

ಅವತ್ತು ಏನು ಹೇಳಿದ್ದರು?

2007ನೇ ಜೂನ್ 16ರಂದು ಬಂಡಿಹೊಳೆ ಗ್ರಾಮಕ್ಕೆ ರಾತ್ರಿ 1.30ಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಾಗಮ್ಮ-ಶ್ರೀನಿವಾಸಶೆಟ್ಟಿ (ಮೊಗಣ್ಣ) ಎಂಬ ಬಡ ಕುಟುಂಬದ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ಆ ಕುಟುಂಬಕ್ಕೆ ಎರಡು ಎಕರೆ ದರಖಾಸ್ತು ಜಮೀನು ಮಂಜೂರು ಮಾಡಿಸಿಕೊಡುವುದಾಗಿ, ಮಕ್ಕಳಿಗೆ ಸೂಕ್ತ ಉದ್ಯೋಗ ನೀಡುವ, ಮಗಳಿಗೆ ಅಂಗಡಿ ಇಟ್ಟುಕೊಂಡು ಜೀವನ ನಡೆಸಲು ಅಗತ್ಯ ಆರ್ಥಿಕ ನೆರವು ಒದಗಿಸುವ ಭರವಸೆ ನೀಡಿದ್ದರಂತೆ.

ಇವತ್ತು ಏನಾಗಿದೆ? ಸಿಎಂ ಗ್ರಾಮವಾಸ್ತವ್ಯ ಹೂಡಿದ ವೇಳೆ ನೀಡಿದ ಭರವಸೆ ಇವತ್ತಿಗೂ ಈಡೇರಿದಂತೆ ಕಾಣುತ್ತಿಲ್ಲ. ಇವತ್ತಿಗೂ ಅವರ ಕುಟುಂಬದ ಸ್ಥಿತಿ ಸುಧಾರಿಸಿಲ್ಲ. ನಾಗಮ್ಮ-ಶ್ರೀನಿವಾಸಶೆಟ್ಟಿ ದಂಪತಿಯ ಇಬ್ಬರು ಪುತ್ರರಾದ ವೆಂಕಟೇಶ್ ಮತ್ತು ರವಿಕಿರಣ್ ಎಂಬುವರು ಎಸ್.ಎಸ್.ಎಲ್.ಸಿ. ತನಕ ವಿದ್ಯಾಭ್ಯಾಸ ಮಾಡಿದ್ದು ಜೀವನ ನಿರ್ವಹಣೆಗಾಗಿ ಗ್ರಾಮದಲ್ಲಿ ಕೃಷಿ ಕಾರ್ಮಿಕರಾಗಿ ಕೂಲಿ ಮಾಡುತ್ತಿದ್ದಾರೆ. ಮಗಳು ಲೀಲಾವತಿ ಎಂಬಾಕೆಯನ್ನು ತಾಲೂಕಿನ ಮಾಕವಳ್ಳಿ ಗ್ರಾಮದ ಬಡ ವರನಿಗೆ ಕೊಟ್ಟು ವಿವಾಹ ಮಾಡಿದ್ದು, ಆಕೆಯು ಜೀವನ ನಿರ್ವಹಣೆಗಾಗಿ ಕೂಲಿ ಮಾಡುತ್ತಿದ್ದಾಳೆ. ಆಕೆಗೆ ಅಂಗಡಿ ಇಟ್ಟುಕೊಡುವ ಭರವಸೆ ಈಡೇರಿಲ್ಲ.

 ಹೊಸ ಮನೆ ಬದಲಿಗೆ ಬಣ್ಣ ಬಳಿದರು...

ಹೊಸ ಮನೆ ಬದಲಿಗೆ ಬಣ್ಣ ಬಳಿದರು...

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಾವು ವಾಸ್ತವ್ಯ ಹೂಡಿದ್ದ ಮನೆಯನ್ನು ಸಂಪೂರ್ಣ ಕೆಡವಿ ಉತ್ತಮ ಗುಣಮಟ್ಟದಲ್ಲಿ ಹೊಸ ಮನೆ ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದರು. ಆದರೆ ಯಾರೂ ಹೊಸ ಮನೆ ನಿರ್ಮಿಸಿಕೊಡಲಿಲ್ಲ. ಬದಲಿಗೆ ಹಳೆ ಮನೆಯನ್ನೇ ರಿಪೇರಿ ಮಾಡಿಸಿ ಬಣ್ಣ ಹೊಡೆಸಿಕೊಟ್ಟಿದ್ದಾರಂತೆ. ಸಿಎಂ ವಾಸ್ತವ್ಯ ಹೂಡಿದ್ದ ವೇಳೆ ತಮ್ಮ ಜೊತೆಯಲ್ಲಿ ತಂದಿದ್ದ ಒಂದು ಫ್ಯಾನ್, ಎಂಟು ಊಟದ ತಟ್ಟೆಗಳು, ಎಂಟು ಲೋಟಗಳು ಹಾಗೂ ಮಂಚ, ಹಾಸಿಗೆಯನ್ನು ಬಿಟ್ಟು ಹೋಗಿದ್ದು ಅದಷ್ಟು ಅವರಿಗೆ ದೊರೆತಿದೆ. ಅದನ್ನು ಹೊರತು ಪಡಿಸಿ ಇನ್ನೇನು ಹೇಳಿಕೊಳ್ಳುವ ಬದಲಾವಣೆಯಾಗಿಲ್ಲ ಎನ್ನಲಾಗುತ್ತಿದೆ.

 ಅನುದಾನ ವಾಪಾಸ್ ಹೋಯ್ತಂತೆ!

ಅನುದಾನ ವಾಪಾಸ್ ಹೋಯ್ತಂತೆ!

12ವರ್ಷಗಳ ಹಿಂದೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಂಡಿಹೊಳೆ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡಿದ್ದಾಗ ನೀಡಿದ್ದ ಭರವಸೆಯಂತೆ ಸುವರ್ಣ ಗ್ರಾಮ ಯೋಜನೆಗೆ ಅಡಿಯಲ್ಲಿ ಗ್ರಾಮಕ್ಕೆ 1ಕೋಟಿ ರೂ. ಬಿಡುಗಡೆಯಾಗಿದ್ದು, ಇದರಲ್ಲಿ ಗ್ರಾಮವು ಸಿಮೆಂಟ್ ಕಾಂಕ್ರೀಟ್ ರಸ್ತೆಯನ್ನು ಕಂಡಿದೆ. ಉತ್ತಮ ಚರಂಡಿಗಳು ನಿರ್ಮಾಣವಾಗಿವೆ. ಆದರೆ ಬೀದಿ ದೀಪ ಸೇರಿದಂತೆ ಇನ್ನಿತರ ಅಭಿವೃದ್ಧಿಗೆ ಬಳಸಬೇಕಾದ ಹಣವನ್ನು ಬಳಸದ ಕಾರಣ ಒಂದು ಕೋಟಿಯಲ್ಲಿ 35 ಲಕ್ಷ ರೂ. ಮಾತ್ರ ಬಳಕೆಯಾಗಿ ಉಳಿದ 65 ಲಕ್ಷ ರೂ. ವಾಪಸ್ ಹೋಗಿದೆ ಎನ್ನಲಾಗುತ್ತಿದೆ.

ಉದ್ದೇಶಗಳು ಈಡೇರುವಂತಿರಲಿ: ಹಿಂದಿನ ಗ್ರಾಮವಾಸ್ತವ್ಯಕ್ಕೆ ಹೋಲಿಸಿದರೆ ಈ ಬಾರಿ ಒಂದಷ್ಟು ಬದಲಾವಣೆಗಳು ಸಿಎಂ ಗ್ರಾಮ ವಾಸ್ತವ್ಯದಲ್ಲಿ ಕಂಡು ಬರಬಹುದು. ಹಿಂದಿನ ತಪ್ಪುಗಳು ಮತ್ತೆ ಮರುಕಳಿಸುವ ಸಾಧ್ಯತೆಗಳು ಕಡಿಮೆಯಾಗಬಹುದು. ಎಲ್ಲವನ್ನು ಕಾದು ನೋಡಬೇಕಷ್ಟೆ. ಮುಂದೆ ನಡೆಯುವ ಗ್ರಾಮವಾಸ್ತವ್ಯಗಳು ಹತ್ತರ ಜತೆ ಹನ್ನೊಂದಾಗದೆ ಉದ್ದೇಶಗಳು ಈಡೇರುವಂತಿದ್ದರೆ ಅಷ್ಟೇ ಸಾಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+