ತಾಕತ್ತಿದ್ದರೆ ಬಿಎಸ್ ವೈ ಚರ್ಚೆಗೆ ಬರಲಿ ಎಂದು ತೊಡೆ ತಟ್ಟಿದ ಎಚ್ ಡಿಕೆ
ನಾಗಮಂಗಲ, ಮೇ 25: ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ಹಾಗೂ ಬಿಎಸ್ ಯಡಿಯೂರಪ್ಪ ಪರಸ್ಪರರು ಸವಾಲುಗಳನ್ನು ಹಾಕಿಕೊಳ್ಳುವುದು ಹೊಸದಲ್ಲ. ಈ ಬಾರಿ ಮತ್ತೊಂದು ಸಲ ಕುಮಾರಸ್ವಾಮಿ ತೊಡೆ ತಟ್ಟಿದ್ದಾರೆ. 'ಯಡಿಯೂರಪ್ಪ ಅವರಿಗೆ ತಾಕತ್ತಿದ್ದರೆ ನನ್ನ ಎದುರಿಗೆ ಚರ್ಚೆಗೆ ಬರಲಿ' ಎಂದು ಗುರುವಾರ ಪಂಥಾಹ್ವಾನ ನೀಡಿದ್ದಾರೆ.
ಆದಿಚುಂಚನಗಿರಿಯಲ್ಲಿ ಅಮಾವಾಸ್ಯೆ ನಿಮಿತ್ತ ಕಾಲಭೈರವೇಶ್ವರ ಸ್ವಾಮಿಗೆ ಪೂಜೆ ಮಾಡಿಸಿದ ನಂತರ ಮಾಧ್ಯಮದವರ ಜತೆ ಮಾತನಡಿದ ಅವರು, ನಾನು ಮುಖ್ಯಮಂತ್ರಿಯಾಗಿ ಮಾಡಿದ ಕೆಲಸಗಳ ಬಗ್ಗೆ ಟೀಕಿಸುವುದಕ್ಕೆ ಯಾರಿಗೂ ನೈತಿಕತೆ ಇಲ್ಲ. ಇನ್ನು ನಮ್ಮ ಕುಟುಂಬದ ವಿರುದ್ಧ ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ ವೆಂಕಟೇಶ್ ಗೌಡ ಹಿಂದೆ ಯಾರ್ಯಾರಿದ್ದಾರೆ ಅನ್ನೋದು ಗೊತ್ತಿದೆ ಎಂದಿದ್ದಾರೆ.
ಜಂತಕಲ್ ಗಣಿ ಹಗರಣದಲ್ಲಿ ಏನೂ ಇಲ್ಲ. ಆದರೆ ನನ್ನ ವಿರುದ್ಧ ಟೀಕೆ ಮಾಡಲಿಕ್ಕೆಂದೇ ಒಬ್ಬರನ್ನು ನೇಮಿಸಿಕೊಂಡ ಹಾಗಿದೆ. ನನ್ನ ವಿರುದ್ಧ ಪತ್ರಿಕೆಗಳ ಬಳಿ ಟೀಕಿಸುತ್ತಿದ್ದವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ, ಸಚಿವರಾಗಿ ಕೂಡ ಮಾಡಲಾಗಿತ್ತು. ಈ ವೆಂಕಟೇಶ್ ಕೂಡ ಅದೇ ಕನಸಿನಲ್ಲಿ ಯಡಿಯೂರಪ್ಪ ಮಾತಿನಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ದಲಿತರ ಮನೆಗಳಿಗೆ ಹೋಗಿಬಿಟ್ಟರೆ ಆಗಲಿಲ್ಲ. ಅವರ ಸಮಸ್ಯೆಗಳನ್ನೂ ಪರಿಹರಿಸಬೇಕು. ಪ್ರಚಾರಕ್ಕಷ್ಟೇ ಹೋಗಿಬಂದರೆ ಜನರು ಕ್ಷಮಿಸುವುದಿಲ್ಲ ಎಂದಿರುವ ಕುಮಾರಸ್ವಾಮಿ, ಎಐಸಿಸಿ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಸಭೆಗಳನ್ನು ನಡೆಸುತ್ತಿರುವುದು ಗಮನಿಸಿದರೆ ಡಿಸೆಂಬರ್ ನಲ್ಲೇ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯುವಂತಿದೆ ಎಂಬ ಮಾತನ್ನೂ ಹೇಳಿದ್ದಾರೆ.