ಮಂಡ್ಯ: ಕುಮಾರಸ್ವಾಮಿ ಆಗಮನಕ್ಕಾಗಿ ಉಪವಾಸ ಕುಳಿತ ವರ!
ಮಂಡ್ಯ, ನವೆಂಬರ್ 30: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತನ್ನ ಮದುವೆಗೆ ಬರಲೇ ಬೇಕೆಂದು ಆಗ್ರಹಿಸಿ ವರನೊಬ್ಬ ಉಪವಾಸ ಕುಳಿತಿರುವ ಘಟನೆಯೊಂದು ಭಾರತೀನಗರ ಸಮೀಪದ ಕೊಕ್ಕರೆ ಬೆಳ್ಳೂರು ಗ್ರಾಮದಲ್ಲಿ ನಡೆದಿದೆ.
ಉಪ ಮುಖ್ಯಮಂತ್ರಿ ಪಟ್ಟದ ಬಗ್ಗೆ ಎಚ್ಡಿಕೆ ಹೇಳಿದ್ದೇನು?
ಗ್ರಾಮದ ನಿವಾಸಿ ರವಿ ಎಂಬಾತನೇ ಇದೀಗ ತನ್ನ ಮದುವೆಗೆ ಹೆಚ್.ಡಿ.ಕುಮಾರಸ್ವಾಮಿ ಬರಲೇ ಬೇಕೆಂದು ಉಪವಾಸ ಸತ್ಯಾಗ್ರಹ ಮಾಡುತ್ತಿರುವ ವರ. ಈತ ಕುಮಾರಸ್ವಾಮಿಯ ಅಭಿಮಾನಿಯಾಗಿದ್ದು, ಮದುವೆಯಲ್ಲಿ ಕುಮಾರಸ್ವಾಮಿ ಅವರಿಂದ ಆಶೀರ್ವಾದ ಪಡೆಯಬೇಕೆಂಬ ಬಯಕೆ ಹೊಂದಿದ್ದು ಅದಕ್ಕಾಗಿ ಇದೀಗ ಉಪವಾಸ ಕುಳಿತಿದ್ದಾನೆ.
ಡಿಸೆಂಬರ್ 1ರಂದು ಈತನ ಮದುವೆ ನಿಶ್ಚಯವಾಗಿದ್ದು, ಎಲ್ಲ ರೀತಿಯ ಏರ್ಪಾಡು ಮಾಡಲಾಗಿದೆ. ಮದುವೆಯ ಆಹ್ವಾನಪತ್ರವನ್ನು ಈಗಾಗಲೇ ಎಲ್ಲ ಸಂಬಂಧಿಕರು ಮತ್ತು ಗೆಳೆಯರಿಗೆ ಹಂಚಿಯಾಗಿದೆ. ತನ್ನ ಮದುವೆಗೆ ಕುಮಾರಸ್ವಾಮಿ ಅವರನ್ನು ಕರೆಯಿಸಿ ಎಂದು ಜೆಡಿಎಸ್ ಮುಖಂಡರಲ್ಲಿ ಮನವಿ ಮಾಡಿಕೊಂಡಿದ್ದಾನೆ. ಆದರೆ ಇದೆಲ್ಲ ಸಾಧ್ಯವಿಲ್ಲ ಎಂದು ಅವರು ತಳ್ಳಿಹಾಕಿದ್ದಾರೆ. ಇದರಿಂದ ನೊಂದ ಆತ ಕುಮಾರಸ್ವಾಮಿ ಅವರ ಗಮನಸೆಳೆಯುವ ಸಲುವಾಗಿ ತನ್ನ ಮನೆಯಲ್ಲಿ ಕುಮಾರಸ್ವಾಮಿ ಅವರ ಭಾವಚಿತ್ರ ಹಾಗೂ ತನ್ನ ಮದುವೆಯ ಆಹ್ವಾನಪತ್ರಿಕೆಯನ್ನಿರಿಸಿಕೊಂಡು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾನೆ.
ಈತನ ಈ ಸತ್ಯಾಗ್ರಹ ಕುಮಾರಸ್ವಾಮಿ ಅವರಿಗೆ ತಲುಪಿ ಅವರು ಮದುವೆ ಬರುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.