ಹಿಂದಿ ಬರಲಿಲ್ಲ ಅಂದರೆ ದೇಶ ಬಿಟ್ಟು ತೊಲಗಿ ಎಂದ ಮಂಡ್ಯದ ಬ್ಯಾಂಕ್ ಸಿಬ್ಬಂದಿ
ಮಂಡ್ಯ, ಜೂನ್ 23: "ನಾನು ಕನ್ನಡ ಕಲಿಯುವ ಅಗತ್ಯ ಇಲ್ಲ. ಇದು ಹಿಂದೂಸ್ತಾನ. ಇಲ್ಲಿ ಕನ್ನಡದ ಅಗತ್ಯ ಇಲ್ಲ. ನಿಮಗೆ ಹಿಂದಿ ಗೊತ್ತಿಲ್ಲ ಅಂದರೆ ದೇಶ ಬಿಟ್ಟು ತೊಲಗಿ"- ಇದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಕೌಂಟೆಂಟ್ ವೊಬ್ಬ ಕರ್ನಾಟಕ ರಾಜ್ಯದ, ಮಂಡ್ಯ ಜಿಲ್ಲೆಯ ಶಾಖೆಯಲ್ಲಿ ಆಡಿದ ಉದ್ಧಟತನದ ಮಾತುಗಳು.
ಕೆಎಂ ದೊಡ್ಡಿಯ ಎಸ್ ಬಿಐ ಶಾಖೆಯಲ್ಲಿ ನಡೆದ ಈ ಘಟನೆಯಲ್ಲಿ ಕನ್ನಡ ವಿರೋಧಿ ಧೋರಣೆ ತೋರಿದ ಬ್ಯಾಂಕ್ ಉದ್ಯೋಗಿ ಹೆಸರು ಬಹಿರಂಗಗೊಂಡಿಲ್ಲ. ಕನ್ನಡದಲ್ಲಿ ಪ್ರಶ್ನೆ ಕೇಳಿದ್ದಕ್ಜೆ ಉತ್ತರಿಸಲು ಆತ ನಿರಾಕರಿಸಿದ್ದಾನೆ. ಬಿಸಿಬಿಸಿ ಚರ್ಚೆ ನಡೆದ ನಂತರ ಎಲ್ಲ ಗ್ರಾಹಕರು ಸೇರಿ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ದೇಶ ಬಿಟ್ಟು ಹೋಗುವಂತೆ ಹೇಳಲು ನೀನ್ಯಾರು ಎಂದು ಸರಿಯಾಗಿ ದಬಾಯಿಸಿದ್ದಾರೆ. ಶುಕ್ರವಾರ ಗ್ರಾಹಕರೊಬ್ಬರು ಕನ್ನಡದಲ್ಲಿ ಮಾಹಿತಿ ಕೇಳಿದಾಗ ಅಕೌಂಟೆಂಟ್ ಇಂಥ ಪ್ರತಿಕ್ರಿಯೆ ನೀಡಿದ್ದಾನೆ. ಆ ಬ್ಯಾಂಕ್ ಮೂಲಭೂತವಾಗಿ ಸೇವೆ ಒದಗಿಸುತ್ತಿರುವುದು ಕನ್ನಡ ಮಾತನಾಡುವ ರಾಜ್ಯದಲ್ಲಿ.
ಅದರಲ್ಲೂ ಮಂಡ್ಯದಂಥ ಕನ್ನಡ ಭಾಷಿಗರ ಮುಖ್ಯ ನೆಲದಲ್ಲಿ ನಿಂತು ಆ ಭಾಷೆಯಲ್ಲಿ ಮಾತನಾಡಲು ಬರಲಿಲ್ಲ. ಮತ್ತೆ ಹಿಂದಿ ಬರಲಿಲ್ಲ ಅಂದರೆ ದೇಶ ಬಿಟ್ಟು ಹೋಗಿ ಎಂಬ ಧಿಮಾಕಿನ ಮಾತು ಕೂಡ ಆತ ಆಡಿದ್ದಾನೆ. ಈ ರೀತಿ ಮಾತನಾಡುವ ವೇಳೆ ಅಲ್ಲಿದ್ದ ಮತ್ತೊಬ್ಬ ಗ್ರಾಹಕರ ಗಮನಕ್ಕೆ ಈ ಸಂಭಾಷಣೆ ಬಂದಿದೆ.
ಬ್ಯಾಂಕ್ ಸೇವೆ ಸಿಗಬೇಕು ಅಂದರೆ ಕರ್ನಾಟಕದಲ್ಲಿ ಬೇರೆ ಭಾಷೆ ಯಾಕೆ ಮಾತನಾಡಬೇಕು ಎಂದು ಅವರು ಕೇಳಿದ್ದಾರೆ. ಈ ಸನ್ನಿವೇಶದಲ್ಲಿ ಬ್ಯಾಂಕ್ ನ ಇತರ ಸಿಬ್ಬಂದಿ ಬಂದು ಸಮಾಧಾನ ಮಾಡಿದ್ದಾರೆ. ಈ ವೇಳೆ ವಿಡಿಯೋ ಸಹ ಮಾಡಲಾಗಿದ್ದು, ಆಕೌಂಟೆಂಟ್ ನ ನಡವಳಿಕೆ ಬಗ್ಗೆ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮ ಮೆಟ್ರೋ ನಿಲ್ದಾಣದಲ್ಲಿ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿರುವ ಸಂದರ್ಭದಲ್ಲೇ ಇಂಥದ್ದೊಂದು ಘಟನೆ ನಡೆದಿರುವುದು ಚರ್ಚೆಗೆ ಕಾರಣವಾಗಿದೆ.












Click it and Unblock the Notifications