ಸಿದ್ದರಾಮಯ್ಯ ವಿರುದ್ಧದ ಸಿಟ್ಟನ್ನೆಲ್ಲ ಹೊರಹಾಕಿದ ದೇವೇಗೌಡರು
ಮಂಡ್ಯ, ನವೆಂಬರ್ 27: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರೊಂದಿಗಿರುವ ಏಳು ಮಂದಿ ಬಂಡಾಯ ಶಾಸಕರಿಂದ ಜೆಡಿಎಸ್ ಪಕ್ಷವನ್ನು ನಿರ್ನಾಮ ಮಾಡುವುದು ಅಸಾಧ್ಯ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹರಿಹಾಯ್ದಿದ್ದಾರೆ.
ಕೆಪಿಎಂಇ ಕಾಯ್ದೆ ಬಗ್ಗೆ ದೇವೇಗೌಡ ಹೇಳಿದ್ದು ಹೀಗೆ
ನಾಗಮಂಗಲದ ಬೆಳ್ಳೂರಿನಲ್ಲಿ ಜೆಡಿಎಸ್ ಪಕ್ಷದ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿ, ರಾಜಕೀಯವಾಗಿ ಯಾರಿಗಾದರೂ ದೇವೇಗೌಡ ದ್ರೋಹ ಬಗೆದಿದ್ದಾರೆ ಎಂದರೆ ನನ್ನ ರಾಜಕೀಯಕ್ಕೆ ನಿವೃತ್ತಿ ಹೇಳುತ್ತೇನೆ. ಸಿದ್ದರಾಮಯ್ಯನವರು ಹೋದಲ್ಲೆಲ್ಲ ದೇವೇಗೌಡರು ನನ್ನನ್ನು ಮುಖ್ಯಮಂತ್ರಿಯಾಗಲು ಬಿಡಲಿಲ್ಲ ಎಂದು ಆರೋಪಿಸುತ್ತಿದ್ದು, ಜೆಡಿಎಸ್ ನಿರ್ನಾಮ ಮಾಡುವುದಾಗಿ ಹೇಳುತ್ತಿದ್ದಾರೆ ಎಂದರು.
ಸಿದ್ದರಾಮಯ್ಯನವರನ್ನು ಒಮ್ಮೆ ಡಿಸಿಎಂ ಮಾಡಿದೆ. ಅದು ಜನತೆಯ ಬೆಂಬಲದಿಂದ ಸಾಧ್ಯವಾಗಿದೆ. ಅಂದಿನ ಪರಿಸ್ಥಿತಿಯಲ್ಲಿ 32 ಲಿಂಗಾಯತ ಶಾಸಕರಿದ್ದವರನ್ನು ಬಿಟ್ಟು, ನಾಲ್ಕು ಜನ ಶಾಸಕರಿದ್ದ ಕುರುಬ ಸಮುದಾಯದವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಸಾಧ್ಯವಿರಲಿಲ್ಲ. ಸೋನಿಯಾ ಗಾಂಧಿ ಬೇಡವೆಂದಿದ್ದದರೂ ಒಮ್ಮೆ ಡಿಸಿಎಂ ಮಾಡಿದ್ದೇವೆ. ಹಾಗೆ ಬೆಳೆಸಿದವರನ್ನು ಈಗ ನಿಕೃಷ್ಟವಾಗಿ ಕಾಣುತ್ತಿದ್ದಾರೆ ಎಂದು ದೂರಿದರು.
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ: ಎಚ್.ಡಿ.ದೇವೇಗೌಡ
ನಾನು ಹೋದರೂ ಜೆಡಿಎಸ್ ಪಕ್ಷವನ್ನು ಜನತೆಯೇ ಕಟ್ಟಿ ಬೆಳೆಸುತ್ತಾರೆ. ಅದು ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧವಾಗಿ ಪ್ರಾಂತೀಯ ಪಕ್ಷವಾಗಿರುತ್ತದೆ. ಯಾರಿಂದಲೂ ಜೆಡಿಎಸ್ ನಿರ್ನಾಮ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಇಂದಿರಾಗಾಂಧಿ ಮತ್ತು ಸೋನಿಯಾ ಗಾಂಧಿ ಮನೆ ಬಾಗಿಲಿಗೆ ಹೋಗಿ ರಾಜಕಾರಣ ಮಾಡಿದವನಲ್ಲ ನಾನು. 4 ವರ್ಷ ಸುಮ್ಮನಿದ್ದವರು ಈಗ ಸಾವಿರಾರು ಕೋಟಿ ರುಪಾಯಿಯ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡುತ್ತಿದ್ದಾರೆ. ದೇಶದ ಸಂಪತ್ತನ್ನು ಈಗಿನ ರಾಜಕಾರಣಿಗಳು ಲೂಟಿ ಮಾಡಲು ಹೊರಟಿದ್ದಾರೆ. ಈ ರಾಜ್ಯಕ್ಕೆ ಕಾವೇರಿ ನೀರಿನ ವಿಚಾರದಲ್ಲಿ ಅನ್ಯಾಯವಾದಾಗ ಉಪವಾಸ ಕುಳಿತು, ಈ ವಯಸ್ಸಿನಲ್ಲೂ ರೈತರ ಪರ ಹೋರಾಡಿದವನು ನಾನು. ಸಿದ್ದರಾಮಯ್ಯ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.