ಮಂಡ್ಯ: ಮದ್ದೂರು ಬಳಿ ಮಾಜಿ ಶಾಸಕರ ಬೆಂಬಲಿಗನ ಹತ್ಯೆ
ಮಂಡ್ಯ, ನವೆಂಬರ್ 30: ಮಂಡ್ಯ ಜಿಲ್ಲೆಯಲ್ಲಿ ಗ್ಯಾಂಗ್ ವಾರ್ ಗಳು ತಲೆ ಎತ್ತಿದ್ದು, ಒಂದಲ್ಲ ಒಂದು ಕಾರಣಕ್ಕೆ ಹೆಣ ಬೀಳುತ್ತಲೇ ಇದೆ. ಇದೀಗ ಮಾಜಿ ಶಾಸಕ ಕೆ.ಸುರೇಶ್ ಗೌಡ ಎಂಬುವರ ಬೆಂಬಲಿಗ ಎನ್ನಲಾಗುತ್ತಿರುವ ಹುಡುಗನ ಮೇಲೆ ದುಷ್ಕರ್ಮಿಗಳು ಮಚ್ಚು ಬೀಸಿ ಕೊಲೆಗೈದಿದ್ದಾರೆ.
ಬೆಂಗಳೂರು ಡಬಲ್ ಮರ್ಡರ್: ಮೊಮ್ಮಗ, ಮತ್ತಿಬ್ಬರ ಬಂಧನ
ಮದ್ದೂರು ತಾಲೂಕಿನ ಕೌಡ್ಲೆ ಸಮೀಪದ ಕೆ.ಜಿ.ಕೊಪ್ಪಲು ಗ್ರಾಮದ ಬಳಿ ನಿನ್ನೆ (ನ.29) ಈ ಘಟನೆ ನಡೆದಿದ್ದು, ಜನ ಭಯಭೀತರಾಗಿದ್ದಾರೆ. ಹತ್ಯೆಗೀಡಾದ ಯುವಕ ಕೊಪ್ಪ ಹೋಬಳಿ ಕೆ.ಮಲ್ಲಿಗೆರೆ ಗ್ರಾಮದ ರಮೇಶ್ ಎಂಬುವರ ಪುತ್ರ ಸಂತೋಷ್(24).
ಈತ ಮದ್ದೂರು ತಾಲೂಕಿನ ಕೊಪ್ಪ ಹೋಬಳಿ ಕೌಡ್ಲೆ ಸಮೀಪದ ಕೆ.ಜಿಕೊಪ್ಪಲು ಗ್ರಾಮದ ಬಳಿ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ ಇಂಡಿಕಾ ಕಾರಿನಲ್ಲಿ ಆಗಮಿಸಿದ ಐದು ಮಂದಿ ಯುವಕರ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದೆ. ಪರಿಣಾಮ ತೀವ್ರಗಾಯಗೊಂಡಿದ್ದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತ ಸಂತೋಷ್ ಮಾಜಿ ಶಾಸಕ ಕೆ. ಸುರೇಶ್ ಗೌಡ ಅವರ ಬೆಂಬಲಿಗನಾಗಿದ್ದು ವಿಷಯ ತಿಳಿದ ಸುರೇಶ್ ಗೌಡ ಸ್ಥಳಕ್ಕಾಗಮಿಸಿ ಪೊಲೀಸ್ ಅಧಿಕಾರಿಗಳೊಡನೆ ಘಟನೆ ಸಂಬಂಧ ಚರ್ಚಿಸಿದ್ದಾರೆ. ಈತನ ಕೊಲೆಯ ಹಿಂದೆ ಯಾರ ಕೈವಾಡವಿದೆ ಏತಕ್ಕಾಗಿ ಕೊಲೆ ಮಾಡಲಾಗಿದೆ ಎಂಬುದು ಪೊಲೀಸರ ತನಿಖೆಯಿಂದಷ್ಟೆ ತಿಳಿದು ಬರಬೇಕಿದೆ.
ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.
ಘಟನಾ ಸ್ಥಳಕ್ಕೆ ಎಸ್ಪಿ ಜಿ. ರಾಧಿಕಾ, ಎಎಸ್ಪಿ ಲಾವಣ್ಯ, ಡಿವೈಎಸ್ಪಿ ಮಲ್ಲಿಕ್, ಸಿಪಿಐ ಕೆ. ಪ್ರಭಾಕರ್ ಭೇಟಿ ನೀಡಿದ್ದರು. ಕೊಪ್ಪ ಪೊಲೀಸ್ ಠಾಣಾ ಪಿಎಸ್ ಐ ಶಿವಮಂಜು ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.