ಕೆಆರ್ಎಸ್ನಲ್ಲಿ ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ಚುರುಕು
ಮಂಡ್ಯ, ನವೆಂಬರ್ 8: ವಿಶ್ವವಿಖ್ಯಾತ ಕೆಆರ್ಎಸ್ ಅಣೆಕಟ್ಟೆ ಹಾಗೂ ಬೃಂದಾವನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾನುವಾರದಿಂದ ನಿರಂತರವಾಗಿ ಚಿರತೆ ಪ್ರತ್ಯಕ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಚಿರತೆ ಸೆರೆ ಹಿಡಿಯಲು ಅಧಿಕಾರಿಗಳು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.
ಶ್ರೀರಂಗಪಟ್ಟಣ ಆರ್ಎಫ್ಒ ಅನಿತಾ ಹಾಗೂ ಪಾಂಡವಪುರ ಆರ್ಎಫ್ಒ ಪುಟ್ಟಸ್ವಾಮಿ ಸಿಬ್ಬಂದಿಗಳ ಜೊತೆ ಸ್ಥಳದಲ್ಲೆ ಮೊಕ್ಕಾಂ ಹೂಡಿ, ಚಿರತೆ ಸೆರೆಗೆ ಅಣೆಕಟ್ಟೆ ಮುಖ್ಯದ್ವಾರದ ಎಡಭಾಗದಲ್ಲಿ ಹೆಚ್ಚುವರಿ ಬೋನ್ ಸೇರಿದಂತೆ ಕೃಷ್ಣರಾಜಸಾಗರ ಅಣೆಕಟ್ಟೆಯ ಬೃಂದಾವನದಲ್ಲಿ ಒಟ್ಟು ನಾಲ್ಕು ಬೋನ್ ಇರಿಸಿದ್ದಾರೆ. ಜೊತೆಗೆ ಚಿರತೆ ಚಲನವಲನಗಳ ವೀಕ್ಷಣಗೆ 4 ಟ್ರಾಪ್ ಕ್ಯಾಮಾರ, ಚಿರತೆ ಕಂಡರೆ ಬಲೆ ಹಾಕಲು ಎರಡು ಬಲೆ ಸೇರಿದಂತೆ ವಾಹನಗಳ ಸಮೇತ ಹಾಜರಿದ್ದರೆ ಚಿರತೆ ಮಾತ್ರ ಇವರಿಗೆ ಚಳ್ಳೆ ಹಣ್ಣು ತಿನ್ನಿಸಿ ದಿನ ಒಂದುಕಡೆ ಓಡಾಟ ನಡೆಸಿ ಅಧಿಕಾರಿಗಳ ನಿದ್ದೆಗೆಡಿಸಿದೆ.
ಅಲ್ಲದೇ ಕಾವೇರಿ ನೀರಾವರಿ ನಿಗಮ ವತಿಯಿಂದ ಬೃಂದಾವನದ ವಿವಿಧ ಸ್ಥಳದಲ್ಲಿ ಚಿರತೆ ಓಡಾಟ ಮಾಡಿದ ಸ್ಥಳಗಳಲ್ಲಿ ಬೆಳದಿದ್ದ ಗಿಡ-ಗುಂಟೆಗಳನ್ನು ಕಾವೇರಿ ನೀರಾವರಿ ನಿಗಮದ ವತಿಯಿಂದ ಜೆಸಿಬಿ ಬಳಸಿ ತೆರವು ಕಾರ್ಯಾಚರಣೆ ಮುಂದುವರೆದಿದೆ.

ಪ್ರವಾಸಿಗರು ನಿರಾಸೆಯುಂಟಾಗಿದೆ ಎಂದು ಶಾಸಕ ಆಕ್ರೋಶ
ಶಾಸಕ ರವೀಂದ್ರ ಶ್ರೀಕಂಠಯ್ಯ ಪ್ರತಿಕ್ರಿಯಿಸಿ, ವಿಶ್ವ ಪ್ರಖ್ಯಾತ ಬೃಂದಾವನದಲ್ಲಿ ಕಳೆದ 20 ದಿನಗಳಿಂದ ಚಿರತೆ ಕಾಣಿಸಿಕೊಂಡಿದ್ದು, ಅಧಿಕಾರಿಗಳ ನಿರ್ಲಕ್ಷದಿಂದಾಗಿ ದೇಶ ಹಾಗೂ ಹೊರ ದೇಶಗಳಿಂದ ಆಗಮಿಸಿದ್ದ ಪ್ರವಾಸಿಗರು ನಿರಾಸೆಯಿಂದ ಹಿಂದಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಚಿರತೆಯನ್ನ ಶೀಘ್ರ ಸೆರೆ ಹಿಡಿಯುವ ಕಾರ್ಯದಕ್ಷತೆ ಮತ್ತು ಚಾಣಕ್ಯತನ ಇರುವ ಅಧಿಕಾರಿಗಳ ಅವಶ್ಯಕತೆ ಇದೆ, ಕೇವಲ ನಾವು ಕಾರ್ಯಾಚರಣೆ ಮಾಡುತ್ತೇವೆ ಎನ್ನುವ ಅಧಿಕಾರಿಗಳಿಂದ ಚಿರತೆ ಸೆರೆ ಹಿಡಿಯಲು ಸಾಧ್ಯವಿಲ್ಲ. ಇದರಿಂದ ಕಾಲ ಹರಣ ಜೊತೆಗೆ ಮತ್ತಷ್ಟು ದಿನ ಬೃಂದಾವನ ಮುಚ್ಚುವ ಪರಿಸ್ಥಿತಿ ಎದ್ದು ಕಾಣುತ್ತಿದೆ. ಈ ಸಂಬಂಧ ಕಾರ್ಯಚರಣೆ ಚುರುಕುಗೊಳಿಸುವಂತೆ ನಿಗಮದ ಎಂ.ಡಿ. ಶಂಕರೇಗೌಡ ಅವರ ಬಳಿ ಚರ್ಚಿಸಿದ್ದೇನೆ. ಜೊತೆಗೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸುವುದಾಗಿ ತಿಳಿಸಿದರು.

ಶೀಘ್ರ ಬೃಂದಾವನ ಪ್ರವೇಶಕ್ಕೆ ಮುಕ್ತ ಅವಕಾಶ
ಜಿಲ್ಲಾಧಿಕಾರಿ ಡಾ. ವೇಣುಗೋಪಾಲಸ್ವಾಮಿ ಈ ಸಂಬಂಧ ಪ್ರತಿಕ್ರಿಯೆ ನೀಡಿ, ಕೆಆರ್ಎಸ್ ಅಣೆಕಟ್ಟೆ ಹಾಗೂ ಬೃಂದಾವನ ಬಳಿ ಚಿರತೆ ಸುಳಿದಾಡುತ್ತಿರುವ ಸಂಬಂಧ ಸ್ಥಳೀಯ ತಹಸೀಲ್ದಾರ್ ಅವರಿಂದ ಮಾಹಿತಿ ಪಡೆದಿದ್ದೇನೆ. ಹಿರಿಯ ಅರಣ್ಯಾಧಿಕಾರಿಗಳ ಜೊತೆಗೆ ಚರ್ಚಿಸಿ ಶೀಘ್ರ ಚಿರತೆ ಸೆರೆ ಹಿಡಿದು ಪ್ರವಾಸಿಗರಿಗೆ ಬೃಂದಾವನ ಪ್ರವೇಶಕ್ಕೆ ಮುಕ್ತ ಅವಕಾಶಕ್ಕೆ ಅಗತ್ಯ ಕ್ರಮ ವಹಿಸಲಾಗುವುದು.

ಅರಣ್ಯ ಇಲಾಖೆ ಮಾಹಿತಿ ಮೇರೆಗೆ ಪ್ರವಾಸಿಗರಿಗೆ ನಿರ್ಬಂಧ
ಕಾ.ನೀ.ನಿಗಮ ಮಂಡ್ಯ ವೃತ್ತಅಧೀಕ್ಷಕ ಅಭಿಯಂತರ ಆನಂದ್ ಮಾತನಾಡಿ, ಬೃಂದಾವನದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷಗೊಂಡ ಹಿನ್ನಲೆಯಲ್ಲಿ ಎಂ.ಡಿ. ಮತ್ತು ಇಲಾಖೆ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಬೃಂದಾವನದಲ್ಲಿ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ ಮತ್ತು ಅಣೆಕಟ್ಟೆ ಸುತ್ತಮುತ್ತ ಅನಾವಶ್ಯಕವಾಗಿ ಬೆಳದಿದ್ದ ಗಿಡ-ಗುಂಟೆಗಳನ್ನು ತೆರವುಗೊಳಿಸುವ ಕಾರ್ಯಚರಣೆ ನಡೆಯುತ್ತಿದೆ. ಅರಣ್ಯ ಇಲಾಖೆ ಮಾಹಿತಿ ಮೇರೆಗೆ ಮುಂದಿನ ನಿರ್ದೇಶನದ ತನಕ ಬೃಂದಾವನ ಪ್ರವೇಶ ನಿರ್ಬಂಧ ಮಾಡಿದ್ದು, ಕಾರ್ಯಾಚರಣೆ ಚುರುಕು ಮಾಡುವಂತೆ ತಿಳಿಸಲಾಗಿದೆ.

20ದಿನಗಳಿಂದ ಐದಾರು ಬಾರಿ ಪ್ರತ್ಯಕ್ಷ
ವಿಶ್ವ ವಿಖ್ಯಾತಿ ಪಡೆದಿರುವ ಕೆಆರ್ಎಸ್ ಅಣೆಕಟ್ಟಿನ ಬೃಂದಾವನ ಗಾರ್ಡನ್ನಲ್ಲಿ ಕಳೆದ 20 ದಿನಗಳಿಂದ ಐದಾರು ಬಾರಿ ಚಿರತೆ ಕಾಣಿಸಿಕೊಂಡಿದೆ. ಇದು ಪ್ರವಾಸಿಗರು ಹಾಗೂ ಸಿಬ್ಬಂದಿಗಳ ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ ಕಳೆದ ವಾರ ಕೆಆರ್ ನಗರದಲ್ಲಿ ಪಟ್ಟಣದೊಳಗೆ ಪ್ರವೇಶಿಸಿದ್ದ ಚಿರತೆ ಅನೇಕರ ಮೇಲೆ ದಾಳಿ ಮಾಡಿದ್ದರಿಂದ ಬೃಂದಾವನ ಹಾಗೂ ಅಣೆಕಟ್ಟಿ ಸುತ್ತಾ ಮುತ್ತಲಿನ ಜನರಲ್ಲಿ ಭೀತಿ ನಿರ್ಮಾಣವಾಗಿದೆ.












Click it and Unblock the Notifications