ಮತಾಂತರಕ್ಕೆ ಯತ್ನ ಆರೋಪ: ಐವರನ್ನು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು
ಮಂಡ್ಯ, ನವೆಂಬರ್ 12 : ಕರ ಪತ್ರ ಹಂಚಿಕೆ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಪ್ರಚೋದಿಸುತ್ತಿದ್ದ ಐವರು ಯುವಕರನ್ನು ಸ್ಥಳೀಯರು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ. ದೊಡ್ಡಿ ಸಮೀಪದ ಅಣ್ಣೂರು ಗ್ರಾಮದ ಚರ್ಚ್ ಬಳಿ ಜರುಗಿದೆ.
ಶುಕ್ರವಾರ ಈ ಘಟನೆ ನಡೆದಿದ್ದು , ಮಳವಳ್ಳಿ ತಾಲೂಕು ಕ್ಯಾತನಹಳ್ಳಿ ಗ್ರಾಮದ ಇ.ಎನ್. ಕುಮಾರ ನಾಗೇಶ (26) ಮೈಸೂರು ಮಂಡಿ ಮೊಹಲ್ಲಾದ ಸುಮಂತ್ (28), ಕ್ಯಾತನಹಳ್ಳಿಯ ಇ.ಎನ್. ವಿಜಯ್ಗೌಡ (23) ಮಳವಳ್ಳಿ ತಾಲೂಕು ಕಂದೇಗಾಲದ ಕೆ.ಆರ್. ಹೇಮಂತ್ ಕುಮಾರ್ (25) ಹಾಗೂ ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ತಾಲೂಕಿನ ಸೋಂಪುರ ಗ್ರಾಮದ ಎಸ್.ಸಿ. ಸಂದೀಪ್ (23) ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Breaking: ಮತಾಂತರ ನಿಷೇಧ ಕಾಯ್ದೆ ವಿಧಾನ ಪರಿಷತ್ತಿನಲ್ಲಿ ಧ್ವನಿಮತ ಮೂಲಕ ಅಂಗೀಕಾರ
ಮದ್ದೂರು ತಾಲೂಕು ಸಿಎ ಕೆರೆ ಹೋಬಳಿಯ ದೇವೇಗೌಡನದೊಡ್ಡಿ ಗ್ರಾಮದ ಬಿಆರ್ ಅಭಿಷೇಕ್ಗೌಡ ನೀಡಿದ ದೂರಿನನ್ವಯ ಕೆ.ಎಂ. ದೊಡ್ಡಿ ಪೊಲೀಸರು ಐವರು ಆರೋಪಿಗಳ ವಿರುದ್ಧ ಐಪಿಸಿ 153(ಎ), 153(ಬಿ), 295 (ಎ) ಹಾಗೂ 143ರನ್ವಯ ಮತಾಂತರ ನಿಷೇಧ ಕಾಯಿದೆ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರುದಾರ ಅಭಿಷೇಕ್ ಗುರುವಾರ ಬೆಳಗ್ಗೆ ಸುಮಾರು 9 ಗಂಟೆ ಸಮಯದಲ್ಲಿ ತಮ್ಮ ದ್ವಿಚಕ್ರ ವಾಹನದಲ್ಲಿ ಕೆ.ಎಂ. ದೊಡ್ಡಿಗೆ ತೆರಳುತ್ತಿದ್ದರು. ಅಣ್ಣೂರು ಗ್ರಾಮದ ಮಾರ್ಗ ಮಧ್ಯೆ ಬರುವ ಚೆರ್ಚ್ ಬಳಿ ಅಭಿಷೇಕ್ಗೌಡ ತೆರಳುತ್ತಿದ್ದ ಬೈಕನ್ನು ಅಡ್ಡಗಟ್ಟಿದ ಐವರು ಆರೋಪಿಗಳು ಪರಿಚಯ ಮಾಡಿಕೊಂಡು, ನಂತರ ಮತಾಂತರಕ್ಕೆ ಪ್ರಚೋದಿಸಿದ್ದಾರೆ.
ಹಿಂದೂ ದೇವರುಗಳಾದ ಹನುಮಂತ, ಕಾಲಭೈರವೇಶ್ವರ, ತಿರುಪತಿ ತಿಮ್ಮಪ್ಪ, ಶ್ರೀಕೃಷ್ಣ, ಶ್ರೀರಾಮ ದೇವರ ವಿರುದ್ಧ ಅವಹೇಳನಕಾರಿ ನಿಂಧನೆ ಮಾಡಿ ಇಂತಹ ದೇವರುಗಳಿಂದ ಋನೂ ಉದ್ದಾರವಾಗುವುದಿಲ್ಲ. ಹೀಗಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ಪ್ರಚೋದನೆ ಮಾಡಿದ್ದಾರೆ. ಅಲ್ಲದೆ, ಆದಿಚುಂಚನಗಿರಿ ಶ್ರೀ, ಸಿದ್ದಗಂಗಾಶ್ರೀಗಳು, ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಕನಕದಾಸರು ಮಾನವತಾ ವಾದಿಗಳಾಗಿದ್ದಾರೆ. ಇವರ ವಚನಗಳು ಹಾಗೂ ಉಪದೇಶಗಳಿಂದ ಹಿಂದೂಗಳಾದ ನಿಮಗೆ ಯಾವುದೇ ಲಾಭವಿಲ್ಲ ಎಂದು ಕರಪತ್ರ ನೀಡಿ ಮತಾಂತರಗೊಳ್ಳುವಂತೆ ಪ್ರಚೋದನೆ ಮಾಡಿದ ಆರೋಪಿಗಳು, ನಿಮ್ಮ ಗ್ರಾಮಸ್ಥರೆಲ್ಲರೂ ಒಟ್ಟಾಗಿ ಬಂದರೆ ಚೆರ್ಚ್ನಲ್ಲಿ ಮತಾಂತರ ಮಾಡಲಾಗುವುದು ಎಂದು ಸಲಹೆ ನೀಡಿದ್ದರು.
ಈ ವೇಳೆ ಸ್ಥಳದಲ್ಲಿದ್ದ ಶಿವರಾಮು, ರಂಜಿತ್, ನಂದೀಶ್ ಹಾಗೂ ಸಂತೋಷ್ ಎಂಬ ಸ್ಥಳೀಯರು ಹಿಂದೂ ದೇವರುಗಳು ಮತ್ತು ಮಠಾಧೀಶರನ್ನು ಅವಹೇಳನ ಮಾಡಿದ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಉಭಯ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದ ಬಳಿಕ ಐವರು ಆರೋಪಿಗಳನ್ನು ಮತಾಂತರಕ್ಕೆ ಪ್ರಚೋದನೆ ಮಾಡಿದ ಆರೋಪದ ಮೇರೆಗೆ ಐವರನ್ನು ಹಿಡಿದು ಕೆ.ಎಂ. ದೊಡ್ಡಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಪೊಲೀಸರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದ ನಂತರ ಮದ್ದೂರು ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕರ್ನಾಟಕ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದ್ದು, ಇದರ ಪ್ರಕಾರ ಯಾವುದೇ ಧರ್ಮದವರು ಮತ್ತೊಂದು ಧರ್ಮದವರನ್ನು ಬಲವಂತ, ವಂಚನೆ, ಒತ್ತಾಯ, ಆಮಿಷ ನೀಡಿ ಮತಾಂತರ ಮಾಡುವುದನ್ನು ನಿಷೇಧಿಸಲಾಗಿದೆ. ಬಲವಂತದ ಮತಾಂತರಕ್ಕೆ 3 ರಿಂದ 5 ವರ್ಷ ಜೈಲು, 25 ಸಾವಿರ ದಂಡ ವಿಧಿಸಲಾಗಿದೆ. ಅಪ್ರಾಪ್ತರು, ದಲಿತರ ಮತಾಂತರಕ್ಕೆ 3 ರಿಂದ 10 ವರ್ಷ ಶಿಕ್ಷೆ, 50 ಸಾವಿರ ದಂಡ, ಮತಾಂತರಕ್ಕೆ ಬಲಿಯಾದವರಿಗೆ ಆಪಾದಿತನಿಂದ 5 ಲಕ್ಷ ಪರಿಹಾರ, ಅಪರಾಧ ಪುನರಾವರ್ತನೆ ಆದಲ್ಲಿ ಐದು ವರ್ಷ ಜೈಲು ಶಿಕ್ಷೆ ಹಾಗೂ 2 ಲಕ್ಷ ದಂಡವನ್ನು ವಿಧಿಸಲಾಗಿದೆ.
ಈ ಕಾಯ್ದೆಯಲ್ಲಿ ಸಮ್ಮತದ ಮತಾಂತರಕ್ಕೂ ಅವಕಾಶವಿದ್ದು, ಮತಾಂತರವಾಗುವವರು 30 ದಿನ ಮೊದಲೇ ಜಿಲ್ಲಾಧಿಕಾರಿಗೆ ತಿಳಿಸಬೇಕು. ಮತಾಂತರಗೊಂಡ ವ್ಯಕ್ತಿ 20 ದಿನದೊಳಗೆ ಡಿಸಿ ಮುಂದೆ ಹಾಜರಾಗಬೇಕು ಎಂದು ವಿವರಿಸಿದೆ.