ಮದ್ದೂರು ಬಳಿ ಕಾದಾಟದಲ್ಲಿ ಹೆಣ್ಣು ಚಿರತೆ ಸಾವು
ಮದ್ದೂರು, ಜೂನ್ 28: ಎರಡು ಚಿರತೆಗಳ ನಡುವಿನ ಕಾದಾಟದಲ್ಲಿ ಹೆಣ್ಣು ಚಿರತೆಯೊಂದು ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಕೊಪ್ಪ ಹೋಬಳಿ ಕಿರಂಗೂರು ಗ್ರಾಮದಲ್ಲಿ ಗುರುವಾರ ಮಧ್ಯರಾತ್ರಿ ನಡೆದಿದೆ.
ಗ್ರಾಮದ ಶಿವಣ್ಣ ಎಂಬುವವರ ಕಬ್ಬಿನ ಗದ್ದೆಯಲ್ಲಿ ಸುಮಾರು ಎರಡು ವರ್ಷದ ಹೆಣ್ಣು ಚಿರತೆಯ ಶವ ಪತ್ತೆಯಾಗಿದೆ. ಕಿರಂಗೂರು ಗ್ರಾಮದ ಶಿಂಷಾ ನದಿ ಆಸುಪಾಸಿನ ಕಬ್ಬಿನ ಗದ್ದೆಯಲ್ಲಿ ಕಳೆದ ಒಂದು ತಿಂಗಳಿನಿಂದ ಚಿರತೆಗಳು ಬೀಡು ಬಿಟ್ಟಿದ್ದವು. ಚಿರತೆಗಳ ತಂಡ ರಾತ್ರಿ ವೇಳೆ ಗ್ರಾಮಕ್ಕೆ ನುಗ್ಗಿ ಹಸು ಮತ್ತು ಮೇಕೆಗಳನ್ನು ತಿಂದುಹಾಕಿ ಹಾವಳಿ ಮಾಡುತ್ತಿದ್ದವು. ಈ ಬಗ್ಗೆ ಗ್ರಾಮಸ್ಥರ ದೂರಿನ ಮೇರೆಗೆ ಅರಣ್ಯಾಧಿಕಾರಿಗಳು ಚಿರತೆ ಸೆರೆ ಹಿಡಿಯಲು ಕಬ್ಬಿನ ಗದ್ದೆಯಲ್ಲಿ ಬೋನ್ ಇಟ್ಟಿದ್ದರು.
ಮೂಡಿಗೆರೆಯ ಬಿಳಗುಳದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ
ಗುರುವಾರ ರಾತ್ರಿ 5 ರಿಂದ 6 ತಿಂಗಳ ವಯಸ್ಸಿನ ಒಂದು ಗಂಡು ಚಿರತೆ ಹಾಗೂ ಹೆಣ್ಣು ಚಿರತೆ ನಡುವೆ ಪರಸ್ಪರ ಕಾದಾಟ ನಡೆದ ಪರಿಣಾಮ ಹೆಣ್ಣು ಚಿರತೆಯ ಹೊಟ್ಟೆ ಮತ್ತು ಕತ್ತಿನ ಭಾಗದಲ್ಲಿ ಉಂಟಾದ ತೀವ್ರ ರಕ್ತಸ್ರಾವದಿಂದ ರಕ್ತ ಹೆಪ್ಪುಗಟ್ಟಿದ ಹಿನ್ನೆಲೆಯಲ್ಲಿ ಗಾಯಗೊಂಡಿದ್ದ ಚಿರತೆ ಕೊನೆಯುಸಿರೆಳೆದಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ವಲಯ ಅರಣ್ಯಾಧಿಕಾರಿ ಶಶಿಧರ್, ಉಪ ಅರಣ್ಯಾಧಿಕಾರಿ ಎಚ್.ಟಿ.ರವಿ, ಸಿಬ್ಬಂದಿ ರಾಘವೇಂದ್ರ, ಬಸವರಾಜು, ವೆಂಕಟೇಶ್, ಶಿವರಾಮು ಅವರು ಮೃತ ಚಿರತೆ ಶವವನ್ನು ವಶಕ್ಕೆ ಪಡೆದ ನಂತರ ಮದ್ದೂರು ಸಮೀಪದ ಸೋಮನಹಳ್ಳಿಯ ವಲಯ ಅರಣ್ಯಾಧಿಕಾರಿ ಕಚೇರಿಗೆ ತಂದು ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಇಲಾಖೆ ಅಧಿಕಾರಿಗಳ ಅನುಮತಿ ಮೇರೆಗೆ ಕಚೇರಿ ಆವರಣದಲ್ಲಿ ಚಿರತೆ ಶವವನ್ನು ಸುಟ್ಟು ಅಂತ್ಯಕ್ರಿಯೆ ನಡೆಸಿದ್ದಾರೆ.