ಮಂಡ್ಯದಲ್ಲಿ ಸುರಿದ ಮಳೆಗೆ ಕೆರೆಕಟ್ಟೆಗಳ ಏರಿ ಒಡೆಯುವ ಭಯ

ಮಂಡ್ಯ, ಅಕ್ಟೋಬರ್ 24: ಕಳೆದ ಕೆಲವು ವರ್ಷಗಳಿಂದ ಮಂಡ್ಯ ಜಿಲ್ಲೆಯಲ್ಲಿ ಬರ ಕಾಣಿಸಿಕೊಂಡಿದ್ದರಿಂದ ನದಿ, ಕೆರೆಕಟ್ಟೆಗಳು ನೀರಿಲ್ಲದೆ ಒಣಗಿ ಹೋಗಿದ್ದವು. ಜತೆಗೆ ಕೆಆರ್ ಎಸ್ ಜಲಾಶಯವೂ ಸಮರ್ಪಕವಾಗಿ ಭರ್ತಿಯಾಗದೆ ರೈತರು ಬೆಳೆ ಬೆಳೆಯಲಾಗದೆ ಸಂಕಷ್ಟಕ್ಕೊಳಗಾಗಿದ್ದರು. ಆದರೆ ಇದೀಗ ಜಿಲ್ಲೆಯ ಬಹುತೇಕ ಕಡೆ ಮಳೆಯಾಗುತ್ತಿದ್ದು, ಕೆರೆಕಟ್ಟೆಗಳು ತುಂಬಿ ತುಳುಕುತ್ತಿವೆ. ಇದರಿಂದ ರೈತರ ಮೊಗದಲ್ಲಿ ಸಂತಸ ಕಾಣಿಸಿಕೊಂಡಿದೆ. ಜತೆ ಜತೆಗೆ ಕೆರೆಗಳನ್ನು ನಿರ್ಲಕ್ಷ್ಯ ಮಾಡಿದ್ದರಿಂದ ಏರಿ ಒಡೆದು ಸಾಕಷ್ಟು ತೊಂದರೆಗಳನ್ನು ಅನುಭವಿಸುವಂತಾಗಿದೆ.

 2013ರ ನಂತರ ಭರ್ತಿಯಾಗದ ಕೆಆರ್ ಎಸ್

2013ರ ನಂತರ ಭರ್ತಿಯಾಗದ ಕೆಆರ್ ಎಸ್

ಒಂದು ವರ್ಷದ ಹಿಂದೆ ಜಿಲ್ಲೆಯಲ್ಲಿರುವ ಬಹಳಷ್ಟು ಕೆರೆಗಳು ನೀರಿಲ್ಲದೆ ಆಟವಾಡುವ ಮೈದಾನದಂತಾಗಿದ್ದವು. ಕೆರೆಗಳಲ್ಲಿ ಗಿಡಗಂಟಿ ಬೆಳೆದು ಕೆರೆಗಳು ಮುಚ್ಚಿಯೇ ಹೋಗಿದ್ದವು. ಹೀಗಾಗಿ ಕೆರೆ ಏರಿ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ. ಇನ್ನು ಕೆರೆ ತುಂಬುವ ಮಳೆ ಸುರಿಯುವುದೇ ಇಲ್ಲವೇನೋ ಎಂಬ ನಿರ್ಧಾರಕ್ಕೂ ಜನ ಬಂದುಬಿಟ್ಟಿದ್ದರು. ಅವತ್ತಿನ ಪರಿಸ್ಥಿತಿ ಕೂಡ ಹಾಗೆಯೇ ಇತ್ತು. ಹಲವು ವರ್ಷಗಳಿಂದ ಮಳೆಯೇ ಸಮರ್ಪಕವಾಗಿ ಬಂದಿರಲಿಲ್ಲ. ಹೀಗಿರುವಾಗ ಕೆರೆಕಟ್ಟೆಗಳು ತುಂಬುವುದಾದರೂ ಹೇಗೆ ಎಂದು ಜನ ಕೇಳುತ್ತಿದ್ದರು. 2013ರ ಬಳಿಕ ಕೆಆರ್ ಎಸ್ ಜಲಾಶಯವು ಭರ್ತಿಯಾಗಿರಲಿಲ್ಲ. ಆದರೆ 2017ರಲ್ಲಿ ಹಿಂಗಾರು ಮಳೆ ಸ್ವಲ್ಪ ಸುರಿದಿದ್ದರಿಂದ ಜನ ನಿಟ್ಟುಸಿರು ಬಿಡುವಂತಾಗಿತ್ತು.

 ಮಂಡ್ಯದ ಕೆಲ ಕೆರೆಗಳಿಗೆ ನೀರಿನ ಭಾಗ್ಯ

ಮಂಡ್ಯದ ಕೆಲ ಕೆರೆಗಳಿಗೆ ನೀರಿನ ಭಾಗ್ಯ

ಆ ನಂತರ 2018ರಲ್ಲಿ ಕೊಡಗಿನಲ್ಲಿ ಸುರಿದ ಮಹಾಮಳೆ ಕೊಡಗಿಗೆ ಬಹಳಷ್ಟು ಹಾನಿಯನ್ನುಂಟು ಮಾಡಿತ್ತಾದರೂ ಕೆಆರ್ ಎಸ್ ಜಲಾಶಯವನ್ನು ಭರ್ತಿ ಮಾಡಿದ್ದಲ್ಲದೆ, ಸಾಕಷ್ಟು ನೀರು ಹೊರ ಹರಿಯುವಂತೆ ಮಾಡಿತ್ತು.

ಈ ವೇಳೆ ಮಂಡ್ಯದ ಹಲವು ಕೆರೆಗಳಿಗೆ ನೀರು ತುಂಬಿಸಿ ಎಂಬ ಒತ್ತಾಯವೂ ಕೇಳಿ ಬಂದಿತ್ತು. ಒಂದಷ್ಟು ಕೆರೆಗಳಿಗೆ ನೀರಿನ ಭಾಗ್ಯವೂ ದೊರೆತಿತ್ತು. ಕಳೆದ ವರ್ಷ ಮುಂಗಾರು ಅಬ್ಬರವಿತ್ತಾದರೂ ಹಿಂಗಾರು ಮಳೆ ಸಮರ್ಪಕವಾಗಿ ಸುರಿದಿರಲಿಲ್ಲ. ಆದರೆ ಈ ಬಾರಿ ಮುಂಗಾರು ಮತ್ತು ಹಿಂಗಾರು ಎರಡು ಉತ್ತಮವಾಗಿ ಆಗುತ್ತಿದ್ದು, ಈಗಾಗಲೇ ಹಲವು ಕೆರೆಕಟ್ಟೆಗಳು ಭರ್ತಿಯಾಗಿ ನಳನಳಿಸುತ್ತಿವೆ.

 ಏರಿ ಒಡೆದು ಬೆಳೆಗಳಿಗೆ ಹಾನಿ

ಏರಿ ಒಡೆದು ಬೆಳೆಗಳಿಗೆ ಹಾನಿ

ಹಲವು ವರ್ಷಗಳಿಂದ ಕೆರೆಗಳಲ್ಲಿ ನೀರು ತುಂಬದ ಕಾರಣ ಅವುಗಳತ್ತ ನಿರ್ಲಕ್ಷ್ಯ ವಹಿಸಲಾಗಿತ್ತು. ಹೀಗಾಗಿ ಬಹಳಷ್ಟು ಕೆರೆಗಳ ಏರಿಗಳು ಶಿಥಿಲಗೊಂಡಿದ್ದು, ಭಾರೀ ಪ್ರಮಾಣದಲ್ಲಿ ನೀರು ಕೆರೆಗೆ ಹರಿದು ಬರುತ್ತಿದ್ದು, ಕೆಲವು ಕೆರೆಗಳ ಏರಿ ಮೇಲೆ ನೀರು ಹರಿಯುತ್ತಿದೆ. ಇನ್ನು ಕೆಲವು ಕೆರೆಗಳ ಏರಿಯೇ ಒಡೆದು ಹೋಗುತ್ತಿದ್ದು, ಕೆರೆಯಲ್ಲಿದ್ದ ನೀರು ಖಾಲಿಯಾಗುವುದರೊಂದಿಗೆ ತಳಭಾಗದಲ್ಲಿದ್ದ ರಸ್ತೆ ಮತ್ತು ಜಮೀನುಗಳು ಜಲಾವೃತಗೊಂಡು ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸುವಂತಾಗಿದೆ.

ಈ ನಡುವೆ ನಾಗಮಂಗಲ ತಾಲೂಕಿನಾದ್ಯಂತ ಸುರಿದ ಭಾರೀ ಮಳೆಗೆ ಬಹುತೇಕ ಕೆರೆಗಳು ತುಂಬಿದ್ದು ಬಿಂಡಿಗನವಿಲೆ ಹೋಬಳಿಯ ಬೋನಗೆರೆ ಗ್ರಾಮದ ಕೆರೆ ಮಾತ್ರ ನೀರಿಲ್ಲದೆ ಖಾಲಿಯಾಗಿದೆ. ಇದಕ್ಕೆ ಕೆರೆ ಏರಿ ನೀರಿನ ರಭಸಕ್ಕೆ ಒಡೆದು ಹೋಗಿರುವುದೇ ಕಾರಣವಾಗಿದೆ. ಕೆರೆಯ ಏರಿ ಶಿಥಿಲಗೊಂಡಿದ್ದು ಒಮ್ಮೆಲೆ ನೀರು ತುಂಬಿದ್ದರಿಂದ ಹೆಚ್ಚುವರಿ ನೀರು ಹರಿದು ಹೋಗಲು ಅವಕಾಶವಿಲ್ಲದೆ, ನೀರಿನ ಒತ್ತಡ ಹೆಚ್ಚಾಗಿ ಏರಿ ಒಡೆದಿದೆ. ಕೆರೆಯಲ್ಲಿ ಸಂಗ್ರಹವಾಗಿದ್ದ ಅಪಾರ ಪ್ರಮಾಣದ ನೀರು ವ್ಯರ್ಥವಾಗಿದೆ. ಜತೆಗೆ ನೂರಾರು ಎಕರೆ ಜಮೀನು ಜಲಾವೃತಗೊಂಡಿದ್ದು, ಇಲ್ಲಿ ಬೆಳೆದಿದ್ದ ಬೆಳೆ ನೆಲಕಚ್ಚಿದೆ.

 ಕೆರೆ ಏರಿ ದುರಸ್ತಿಯೊಂದೇ ದಾರಿ

ಕೆರೆ ಏರಿ ದುರಸ್ತಿಯೊಂದೇ ದಾರಿ

ಕೆರೆಯಲ್ಲಿದ್ದ ಮೀನುಗಳು ನೀರಿನಲ್ಲಿ ಕೊಚ್ಚಿಹೋಗಿದ್ದು ಕೆಲವರು ಅವುಗಳನ್ನು ಹಿಡಿಯವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಬೋಗಾದಿ ವ್ಯಾಪ್ತಿಯ ಮಾದಿಹಳ್ಳಿ ರಸ್ತೆಯ ಮುಖ್ಯ ಸೇತುವೆಗೆ ಹಾನಿಯಾಗಿದ್ದರೆ ರಸ್ತೆಯ ಡಾಂಬರು ಕಿತ್ತು ಹೋಗಿದೆ.

ಬಹಳಷ್ಟು ವರ್ಷಗಳ ಮೇಲೆ ಕೆರೆ ತುಂಬಿತ್ತು. ಇದರಿಂದ ಸುತ್ತಮುತ್ತಲಿನ ರೈತರು ಖುಷಿಪಟ್ಟಿದ್ದರು. ಆದರೆ ಕೆರೆ ಏರಿ ಒಡೆದು ನೀರು ಖಾಲಿಯಾಗಿರುವುದರಿಂದ ಆತಂಕಗೊಳ್ಳುವಂತಾಗಿದೆ. ಸಂಬಂಧಿಸಿದವರು ಇತ್ತ ಗಮನಹರಿಸಿ ಕೆರೆ ಏರಿಯನ್ನು ದುರಸ್ತಿಗೊಳಿಸುವುದು ಅಗತ್ಯವಾಗಿದೆ. ಈ ಕೆಲಸ ಆದಷ್ಟು ಶೀಘ್ರವಾದರೆ ಮುಂದಿನ ದಿನಗಳಲ್ಲಿ ಒಂದಷ್ಟು ಮಳೆ ಸುರಿದರೆ ಕೆರೆಯಲ್ಲಿ ನೀರು ಸಂಗ್ರಹವಾಗಲು ಅನುಕೂಲವಾಗಬಹುದೇನೋ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+