ಮುಂಬೈನಿಂದ ಮಂಡ್ಯಕ್ಕೆ ಶವ ತಂದಿದ್ದ ಕುಟುಂಬದವರಲ್ಲಿ ಕೊರೊನಾ!
ಮಂಡ್ಯ, ಮೇ 01: ಮಂಡ್ಯ ಜಿಲ್ಲೆಯಲ್ಲಿ ಒಂದೇ ದಿನ ಎಂಟು ಜನರಿಗೆ ಕೊರೊನಾ ವೈರಸ್ ಪಾಸಿಟಿವ್ ಇರುವುದು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಇಪ್ಪತ್ತಾರಕ್ಕೆ ಮುಟ್ಟಿದೆ.
ಮುಂಬೈನಲ್ಲಿ ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಶವ ತಂದು ಮೇಲುಕೋಟೆ ಬಳಿಯ ಕೊಡಗಳ್ಳಿಯಲ್ಲಿ ಏಪ್ರಿಲ್ 24ರಂದು ಸಂಸ್ಕಾರ ಮಾಡಲಾಗಿತ್ತು. ಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಮಹಿಳೆಗೆ ಸೋಂಕು ಇರುವುದು ದೃಢಪಟ್ಟಿದೆ. ಜೊತೆಗೆ ಮೃತಪಟ್ಟ ವ್ಯಕ್ತಿಯ ಮಗ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಎರಡೂವರೆ ವರ್ಷದ ಮೊಮ್ಮಗನಲ್ಲಿ ಸೋಂಕು ಪತ್ತೆಯಾಗಿದೆ. ಈ ಒಂದು ಸಂಗತಿ ಇನ್ನಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ವ್ಯಕ್ತಿಯ ಶವಸಂಸ್ಕಾರ ಮೇಲುಕೋಟೆ ಬಳಿ ನಡೆದಿತ್ತು
ಮುಂಬೈನ ಸಾಂತಾಕ್ರೂಸ್ ನಿವಾಸಿಯಾಗಿದ್ದ ವ್ಯಕ್ತಿ ಹೃದಯಾಘಾತದಿಂದ ಏಪ್ರಿಲ್ 23ರಂದು ಮೃತಪಟ್ಟಿದ್ದರು. ಅವರ ಶವವನ್ನು ಮಹಾರಾಷ್ಟ್ರದ ಆಂಬುಲೆನ್ಸ್ ಮೂಲಕ ತಂದು ಮೇಲುಕೋಟೆ ಬಳಿಯ ಬಿ.ಕೊಡಗಳ್ಳಿ ಗ್ರಾಮದಲ್ಲಿ ಏಪ್ರಿಲ್ 24ರಂದು ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಶವಸಂಸ್ಕಾರದಲ್ಲಿ ಪಾಲ್ಗೊಂಡ ಎಲ್ಲರನ್ನೂ ತಕ್ಷಣವೇ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ಒಂದೇ ದಿನ 8 ಕೇಸ್; ಆರೆಂಜ್ ಝೋನ್ ನಿಂದ ರೆಡ್ ಝೋನ್ ಗೆ ಮಂಡ್ಯ
ವ್ಯಕ್ತಿಯ ನಾಲ್ವರು ಕುಟುಂಬ ಸದಸ್ಯರಿಗೆ ಸೋಂಕು
ಏ. 28ರಂದು ಆಂಬುಲೆನ್ಸ್ ನಲ್ಲಿ ಬಂದಿದ್ದ ಎಲ್ಲರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ನಾಲ್ವರಲ್ಲಿ ಸೋಂಕು ದೃಢಪಟ್ಟದ್ದು, ಆಂಬುಲೆನ್ಸ್ ನಲ್ಲಿ ಪ್ರಯಾಣಿಸಿದ್ದ ಮೃತ ವ್ಯಕ್ತಿಯ ಪತ್ನಿಗೆ ನೆಗೆಟಿವ್ ಬಂದಿದೆ. ಮೃತಪಟ್ಟ ವ್ಯಕ್ತಿಯ ಮಗ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಎರಡೂವರೆ ವರ್ಷದ ಮೊಮ್ಮಗನಲ್ಲಿ ಸೋಂಕು ಪತ್ತೆಯಾಗಿದೆ.
ಹೃದಯಾಘಾತ ಕಾರಣ ಎಂದಿದ್ದ ಮುಂಬೈ ಪಾಲಿಕೆ
ಈ ವ್ಯಕ್ತಿಯು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಬೃಹತ್ ಮುಂಬೈ ಮಹಾನಗರ ಪಾಲಿಕೆ ದೃಢೀಕರಿಸಿದೆ. ಪಾಲಿಕೆ ಪಾಸ್ ಪಡೆದು ಮಹಾರಾಷ್ಟ್ರದ ಆಂಬುಲೆನ್ಸ್ ನಲ್ಲಿ ಶವ ಸಾಗಣೆ ಮಾಡಲಾಗಿದೆ. ಆದರೆ ಈ ವ್ಯಕ್ತಿ ಕುಟುಂಬದ ನಾಲ್ವರಲ್ಲಿ ಕೊರೊನಾ ಕಂಡುಬಂದಿರುವುದರಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಧಿಕಾರಿ, ದಾಖಲಾತಿಯ ಪರಿಶೀಲಿಸಲಾಗುವುದು. ಈ ಬಗ್ಗೆ ವರದಿ ನೀಡುವಂತೆ ಮಹಾರಾಷ್ಟ್ರ ಪಾಲಿಕೆಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು ಶಿಷ್ಟಾಚಾರ ಪಾಲನೆ ಮಾಡಿದ್ದು, ಸಂಸ್ಕಾರದಲ್ಲಿ ಪಾಲ್ಗೊಂಡ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ರಾತ್ರೋರಾತ್ರಿ ಸೀಲ್ ಡೌನ್ ಆಯ್ತು ಮಂಡ್ಯದ ಪೇಟೆ ಬೀದಿ
ಮಂಡ್ಯದಲ್ಲಿ ಇಪ್ಪತ್ತಾರು ಕೊರೊನಾ ಪ್ರಕರಣ
ಮಂಡ್ಯ ಜಿಲ್ಲೆಯಲ್ಲಿ ಇಂದು ಒಂದೇ ದಿನ ಎಂಟು ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಮಳವಳ್ಳಿ ಪಟ್ಟಣವೊಂದರಲ್ಲೇ 19 ಮಂದಿಗೆ ಕೊರೊನಾ ಬಂದಿದೆ. ಮಂಡ್ಯ ಜಿಲ್ಲೆಯ ಸೋಂಕಿತರ ಸಂಖ್ಯೆಯಲ್ಲಿ ಇದ್ದಕ್ಕಿದ್ದಂತೆ ಏರಿಕೆಯಾಗಿದ್ದು, ಮತ್ತೆ ಭೀತಿ ಹುಟ್ಟಿಸಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 26ಕ್ಕೆ ಏರಿದ್ದರಿಂದಾಗಿ ಆರೆಂಜ್ ಝೋನ್ ನಲ್ಲಿದ್ದ ಮಂಡ್ಯ ಈಗ ರೆಡ್ ಝೋನ್ ಗೆ ಸೇರಿದೆ.