ಈ ಬಾರಿಯಾದರೂ ಮಂಡ್ಯದಲ್ಲಿ ಬಿಜೆಪಿ ಖಾತೆ ತೆರೆಯುತ್ತಾ?
Recommended Video

ಮಂಡ್ಯ, ಫೆಬ್ರವರಿ 05: ಮಂಡ್ಯ ಜಿಲ್ಲೆಯ ಬಿಜೆಪಿ ಖಾತೆ ತೆರೆಯುತ್ತಾ ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರಗಳು ಗೋಚರಿಸಿದಂತೆ ಕಾಣುತ್ತಿಲ್ಲ. ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಮುಖ್ಯಮಂತ್ರಿಯೂ ಆಗಿರುವ ಎಸ್.ಎಂ.ಕೃಷ್ಣ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಂತೆಯೇ ಏನೋ ಆಗಿಬಿಡುತ್ತದೆ ಎಂಬ ಭ್ರಮೆ ಬಿಜೆಪಿಯಲ್ಲಿ ಹುಟ್ಟಿದ್ದು ಸುಳ್ಳೇನಲ್ಲ. ಆದರೆ ಅವರು ಸೇರ್ಪಡೆಯಾಗಿ ಹಲವು ತಿಂಗಳೇ ಕಳೆದುಹೋಗಿದೆ. ಆದರೆ ಅದರಿಂದ ಬಿಜೆಪಿಗೆ ಲಾಭವಾಗಲೀ, ಕಾಂಗ್ರೆಸ್ಗೆ ಹಿನ್ನಡೆಯಾಗಲೀ ಯಾವುದೂ ಗೋಚರಿಸುತ್ತಿಲ್ಲ.
ಮಂಡ್ಯದ ಏಳು ವಿಧಾನಸಭಾ ಕ್ಷೇತ್ರಗಳಿಗೊಂದು ಸುತ್ತು ಹೊಡೆದು ಬಂದರೆ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಸ್ಪರ್ಧೆಗಳಿರುವುದು ಕಂಡು ಬರುತ್ತಿದ್ದು, ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಇಷ್ಟಕ್ಕೂ ಜಿಲ್ಲೆಯಲ್ಲಿ ಬಿಜೆಪಿಯನ್ನು ಮುನ್ನಡೆಸುವಂತಹ ಪ್ರಬಲ ನಾಯಕರ ಕೊರತೆಯೂ ಇದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಸೂಕ್ಷ್ಮವಾಗಿ ಗಮನಿಸಿ ನೋಡಿದರೆ ಮಂಡ್ಯದಲ್ಲಿ ಪಕ್ಷಸಂಘಟನೆ ಮಾಡುವ ಸಂದರ್ಭವೆಲ್ಲ ಹೊರಗಿನಿಂದ ನಾಯಕರು ಬಂದು ಹೋಗುವುದನ್ನು ನಾವು ಕಾಣಬಹುದು. ಮಾಜಿ ಸಂಸದೆ ತೇಜಸ್ವಿನಿ ಗೌಡ, ಸಿ.ಪಿ.ಯೋಗೇಶ್ವರ್ ಮಂಡ್ಯದಲ್ಲಿ ತಮ್ಮ ಛಾಪು ಮೂಡಿಸಿ ಹೋಗಿದ್ದಾರೆಯಾದರೂ ಇಲ್ಲಿನ ಸ್ಥಳೀಯ ಮುಖಂಡರಾದ ಡಾ.ಸದಾನಂದ, ಎಸ್.ಸಿ.ಮಧುಚಂದನ್, ಎಚ್.ಆರ್.ಅರವಿಂದ್, ಸಿ.ಟಿ.ಮಂಜುನಾಥ್ ಮೊದಲಾದ ನಾಯಕರಾರು ಫೋಕಸ್ ಆಗುತ್ತಿಲ್ಲ.

ಗರಿಗೆದರಿದ ರಾಜಕೀಯ ಚಟುವಟಿಕೆ
2018ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯವನ್ನೇ ಉಸಿರಾಗಿಸಿಕೊಂಡಿರುವ ಮಂಡ್ಯ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಾಳಯದಲ್ಲಿ ಚುನಾವಣೆ ಸಂಚಲನ ಸೃಷ್ಟಿಸಿದೆ. ಹಲವು ಟಿಕೆಟ್ ಆಕಾಂಕ್ಷಿಗಳು ಬಿ ಫಾರಂಗಾಗಿ ನಾಯಕರ ಬೆನ್ನು ಹತ್ತಿದ್ದರೆ, ಟಿಕೆಟ್ ಖಚಿತಪಡಿಸಿಕೊಂಡಿರುವ ಅಭ್ಯರ್ಥಿಗಳು ಅಖಾಡಕ್ಕಿಳಿದು ಮತದಾರರ ಮನವೊಲಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ.

ಫಲಕಾರಿಯಾಗದ ತಂತ್ರಗಳು!
2013ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿರುವ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್ ದಿಗ್ವಿಜಯ ಸಾಧಿಸಿ ಭದ್ರಕೋಟೆ ಮಾಡಿಕೊಂಡಿತ್ತು. ಎರಡು ಕ್ಷೇತ್ರಗಳಿಗೆ ತೃಪ್ತಿ ಪಟ್ಟುಕೊಂಡಿತ್ತು. ಒಂದು ಸ್ಥಾನ ರೈತ ಸಂಘದ ಪಾಲಾಗಿತ್ತು. ಇಲ್ಲಿ ಬಿಜೆಪಿ ತಳಮಟ್ಟದಿಂದಲೇ ಸಂಘಟನೆಗೊಳ್ಳಬೇಕಾಗಿದೆ. ಆದರೂ ಬಿಜೆಪಿ ಇಲ್ಲಿ ಗಟ್ಟಿಗೊಳ್ಳುವುದು ಸುಲಭದ ಮಾತಲ್ಲ. ಆದರೂ ಒಂದಷ್ಟು ತಂತ್ರಗಳನ್ನು ಮಾಡುತ್ತಿದ್ದರೂ ಅದು ಫಲಪ್ರದವಾಗುತ್ತಿಲ್ಲ.

ಖಾತೆ ತೆರೆಯುವ ಬಿಜೆಪಿ ಹಠ ಈಡೇರುತ್ತಾ?
ಈ ಬಾರಿ ಬಿಜೆಪಿ ಹೇಗಾದರೂ ಮಾಡಿ ತನ್ನ ಖಾತೆ ತೆರೆಯಲೇ ಬೇಕೆಂಬ ಹಠಕ್ಕೆ ಬಿದ್ದಿದೆ. ಅದಕ್ಕಾಗಿ ಒಂದಷ್ಟು ಕಸರತ್ತುಗಳನ್ನು ಮಾಡುತ್ತಿದೆ. ಅದಕ್ಕೆ ಪ್ರತಿಯಾಗಿ ಜೆಡಿಎಸ್ ನ್ನು ಬದಿಗೊತ್ತಿ ತಾನೇ ಪ್ರಾಬಲ್ಯ ಸಾಧಿಸಬೇಕೆಂದು ಕಾಂಗ್ರೆಸ್ ಮುಂದಾಗಿದೆ. ಜೆಡಿಎಸ್ನ ಬಂಡಾಯ ಶಾಸಕರಾದ ಚೆಲುವರಾಯಸ್ವಾಮಿ ಮತ್ತು ರಮೇಶ್ ಬಂಡಿಸಿದ್ದೇಗೌಡರು ಈಗ ಕಾಂಗ್ರೆಸ್ನೊಂದಿಗೆ ಇರುವುದು ಒಂದಷ್ಟು ಶಕ್ತಿ ಬಂದಂತಾಗಿದೆ. ಎಲ್ಲ ಕಡೆಯಿಂದ ನೋಡಿದರೂ ಮಂಡ್ಯ ಜಿಲ್ಲೆಯ ಏಳು ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹೆಚ್ಚಿನ ಪೈಪೋಟಿ ಕಂಡು ಬರುತ್ತಿದ್ದು, ಇಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿ ಬಿಜೆಪಿ
ಸದ್ಯ 2018ರ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಹೀಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ನ ಪೈಪೋಟಿ ನಡುವೆ ಬಿಜೆಪಿ ಸಮರ್ಥ ಅಭ್ಯರ್ಥಿಗಳ ಆಯ್ಕೆಯಲ್ಲಿ ತೊಡಗಿರುವುದು ಕಂಡು ಬಂದಿದೆ. ಈ ಬಾರಿ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ನೇರವಾಗಿ ಜಿಲ್ಲೆಯೊಳಕ್ಕೆ ನುಗ್ಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಬಿಜೆಪಿಗೆ ಫಲಕೊಡುತ್ತಾ? ಖಾತೆ ತೆರೆಯಲು ಸಹಕಾರಿಯಾಗುತ್ತಾ ಎಂಬುದಕ್ಕೆ ಕಾಲವೇ ಉತ್ತರ ನೀಡಬೇಕಿದೆ.












Click it and Unblock the Notifications