ಮೇಲುಕೋಟೆಯಲ್ಲಿ ದರ್ಶನ್ ಅಭಿಮಾನಿ ಮಾಡಿದ ಶಪಥವೇನು?
ಪಾಂಡವಪುರ, ಏಪ್ರಿಲ್ 10: ಕರ್ನಾಟಕ ವಿಧಾನಸಭೆ ಚುನಾವಣೆ ಘೋಷಣೆಯಾದ ಬಳಿಕ ಪ್ರತಿ ಕ್ಷೇತ್ರದಲ್ಲಿ ಜಿದ್ದಾಜಿದ್ದಿ ಆರಂಭವಾಗಿದೆ. ಪಕ್ಷಗಳು ತಮ್ಮ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದ ಬಳಿಕವಂತೂ ಚುನಾವಣೆ ಕಣ ಇನ್ನಷ್ಟು ರಂಗೇರಲಿದೆ.
ಈ ಮಧ್ಯೆ ತಮ್ಮ ನಾಯಕರ ಗೆಲುವಿಗಾಗಿ ಅಭಿಮಾನಿಗಳು ಹರಕೆ ಹೊರುವುದು, ಉರುಳುಸೇವೆ ಮಾಡುವುದು ಹೀಗೆ ಹತ್ತಾರು ರೀತಿಯ ಹರಕೆ- ಹಾರೈಕೆ ವ್ಯಕ್ತಪಡಿಸುವುದನ್ನು ಕಾಣಬಹುದಾಗಿದೆ.
ಸಿದ್ದರಾಮಯ್ಯ ಒಂದು ನಡೆಯಿಂದ ಮೇಲುಕೋಟೆಯಲ್ಲಿ ಕೋಮಾ ತಲುಪಿದ ಕಾಂಗ್ರೆಸ್
ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಶಾಸಕರಾದ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ನಿಧನದ ಬಳಿಕ ಈ ಕ್ಷೇತ್ರಕ್ಕೆ ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಸ್ಪರ್ಧಿಸಿದ್ದಾರೆ. ಇವರಿಗೆ ಪ್ರತಿಸ್ಪರ್ಧಿಯಾಗಿ ತಮ್ಮ ಪಕ್ಷದಿಂದ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಕಾಂಗ್ರೆಸ್ ಬೆಂಬಲ ನೀಡಿದೆ.
ಈ ಕಾರಣಕ್ಕೆ ದರ್ಶನ್ ಪುಟ್ಟಣ್ಣಯ್ಯ ಜೆಡಿಎಸ್ ನ ಸಿ.ಎಸ್.ಪುಟ್ಟರಾಜು ಎದುರು ಸುಲಭವಾಗಿ ಗೆಲ್ಲುತ್ತಾರೆ ಎಂಬ ಲೆಕ್ಕಾಚಾರ ಕೆಲವರದ್ದಾಗಿದೆ. ಇದೇ ಧೈರ್ಯದಲ್ಲಿ ಕ್ಯಾತನಹಳ್ಳಿಯಲ್ಲಿ ದರ್ಶನ್ ಪುಟ್ಟಣ್ಣಯ್ಯ ಅವರ ಅಭಿಮಾನಿ ಅಂಥೋಣಿ ಎಂಬುವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ದರ್ಶನ್ ಗೆಲುವಿನ ಸುದ್ದಿ ತಿಳಿಯುವ ತನಕ ಗಡ್ಡ ಬೋಳಿಸುವುದಿಲ್ಲ ಎಂಬ ಪಣ ತೊಟ್ಟಿದ್ದಾರಂತೆ.
ಇಷ್ಟಕ್ಕೂ ಈ ಅಂಥೋಣಿ ಯಾರು ಎಂಬುದನ್ನು ನೋಡುವುದಾದರೆ, ಆತ ಪುಟ್ಟಣ್ಣಯ್ಯ ಅವರ ಬಳಿ 35 ವರ್ಷದಿಂದ ಕಾರು ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ದರ್ಶನ್ ರನ್ನು ಎತ್ತಿ, ಆಡಿಸಿದ್ದು, ತನ್ನ ಕಣ್ಣಮುಂದೆ ಆಡಿ ಬೆಳೆದ ಮಗು ಶಾಸಕರಾಗಲೇ ಬೇಕು ಎಂಬುದು ಅವರ ಆಶಯವಾಗಿದೆ.
ಈಗಲೂ ಪುಟ್ಟಣ್ಣಯ್ಯ ಕುಟುಂಬದ ಕಾರು ಚಾಲಕರಾಗಿರುವ ಅಂಥೋಣಿ, ಎಲ್ಲೇ ಹೋದರೂ ದರ್ಶನ್ ಪರ ಪ್ರಚಾರ ನಡೆಸುವುದನ್ನು ಮಾತ್ರ ಮರೆಯುವುದಿಲ್ಲ. ದರ್ಶನ್ ಗೆಲ್ಲೋತನಕ ನಾನು ಕಟಿಂಗ್, ಶೇವಿಂಗ್ ಮಾಡಿಸುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿರುವ ಅಂಥೋಣಿ ಕನಸು ನನಸಾಗುತ್ತದೆಯೇ ಎಂಬುದಕ್ಕೆ ಚುನಾವಣೆ ನಡೆದು, ಫಲಿತಾಂಶ ಬರುವ ತನಕ ಕಾಯಲೇಬೇಕಾಗಿದೆ.