ಮೇಲುಕೋಟೆಯಲ್ಲಿ ಗೆಲ್ಲಲು ಪುಟ್ಟರಾಜು ಹರಸಾಹಸ: ಪತ್ನಿಯಿಂದ ಪ್ರಚಾರ
ಮಂಡ್ಯ, ಏಪ್ರಿಲ್ 12: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣ ರಂಗೇರಿದ್ದು, ಈ ಬಾರಿ ಗೆಲ್ಲಲೇ ಬೇಕೆಂಬ ಹಠಕ್ಕೆ ಬಿದ್ದಿರುವ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಅವರು ಹಲವು ತಂತ್ರಗಳನ್ನು ಮಾಡುತ್ತಿದ್ದಾರೆ. ಇದೀಗ ಅವರಿಗೆ ಪತ್ನಿ ನಾಗಮ್ಮ ಸಾಥ್ ನೀಡಿದ್ದಾರೆ.
ಸಾಮಾನ್ಯವಾಗಿ ಹೆಚ್ಚಿನ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪತ್ನಿಯರು ಪತಿ ಪರವಾಗಿ ಮತಯಾಚನೆಗೆ ಮುಂದಾಗುತ್ತಿದ್ದು, ಮೇಲುಕೋಟೆ ಕ್ಷೇತ್ರದಲ್ಲಿ ಈಗಿನಿಂದಲೇ ಜೆಡಿಎಸ್ ಅಭ್ಯರ್ಥಿ ಸಿ.ಎಸ್. ಪುಟ್ಟರಾಜು ಪರ ಪತ್ನಿ ನಾಗಮ್ಮ ಪುಟ್ಟರಾಜು ಗ್ರಾಮಗಳಿಗೆ ತೆರಳಿ ಮತಯಾಚಿಸುತ್ತಿದ್ದು, ಅವರಿಗೆ ಜಿ.ಪಂ. ಸದಸ್ಯೆ ಅನುಪಮ ಕುಮಾರಿ ಹಾಗೂ ಬೆಂಬಲಿಗರು ಸಾಥ್ ನೀಡಿದ್ದಾರೆ.
ಮೇಲುಕೋಟೆಯಲ್ಲಿ ದರ್ಶನ್ ಅಭಿಮಾನಿ ಮಾಡಿದ ಶಪಥವೇನು?
ಮಂಡ್ಯ ತಾಲೂಕಿನ ಹೊಳಲು ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದ ನಾಗಮ್ಮ ಅವರು ಮತದಾರರಲ್ಲಿ ಮತ ನೀಡುವಂತೆ ವಿನಂತಿ ಮಾಡಿಕೊಳ್ಳತೊಡಗಿದ್ದಾರೆ. ಮತಯಾಚನೆಗೆ ಮುನ್ನ ಹೊಳಲು ಗ್ರಾಮದ ಶ್ರೀ ಬಲಮುರಿ ಗಣೇಶದೇವಾಲಯದ ಆವರಣದಲ್ಲಿ ಜಮಾವಣೆಗೊಂಡ ಕ್ಷೇತ್ರದ ಜೆಡಿಎಸ್ ನಾಯಕರು ಮತ್ತು ಮುಖಂಡರು ಹಾಗೂ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿ, ಗೆಲುವಿಗಾಗಿ ಪ್ರಾರ್ಥಿಸಿದರು.
ಈ ವೇಳೆ ಮಾತನಾಡಿದ ಪತ್ನಿ ನಾಗಮ್ಮ ಪುಟ್ಟರಾಜುರವರು, ಮಾಜಿ ಪ್ರಧಾನಮಂತ್ರಿ ದೇವೇಗೌಡ ಅವರು ರೈತಾಪಿ ಸಮುದಾಯ ಮತ್ತು ಎಲ್ಲಾ ವರ್ಗದ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನೀಡಿದ ಜನಪರ ಯೋಜನೆಗಳು ಜನರ ಮನದಲ್ಲಿ ಇನ್ನೂ ಉಳಿದಿದೆ. ನಾಡಿನ ಜನತೆ ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಮತ್ತೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿ, ಕ್ಷೇತ್ರದ ಶಾಸಕರನ್ನು ಸಚಿವರನ್ನಾಗಿ ಮಾಡಲು ಆಶೀರ್ವದಿಸಬೇಕೆಂದು ಕೋರಿದರು.
ಜಿ.ಪಂ .ಸದಸ್ಯೆ ಅನುಪಮ ಕುಮಾರಿ ಮಾತನಾಡಿ, ದುದ್ದ ಜಿ.ಪಂ. ಕ್ಷೇತ್ರದಲ್ಲಿ ಜನತೆ ಜೆಡಿಎಸ್ ಗೆಲ್ಲಿಸಲು ಸಂಕಲ್ಪ ಮಾಡಿದ್ದಾರೆ. ನಾವು ಮತಯಾಚನೆಗೆ ಹೋದ ಕಡೆಯೆಲ್ಲಾ ಎಲ್ಲರೂ ಪುಟ್ಟರಾಜು ಅವರನ್ನು ಗೆಲ್ಲಿಸುತ್ತೇವೆ ಎಂದು ಹೇಳಿ ಆಶಿರ್ವಾದ ಮಾಡುತ್ತಾರೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಒಂದು ನಡೆಯಿಂದ ಮೇಲುಕೋಟೆಯಲ್ಲಿ ಕೋಮಾ ತಲುಪಿದ ಕಾಂಗ್ರೆಸ್
ಒಟ್ಟಾರೆ ಈ ಕ್ಷೇತ್ರದಲ್ಲಿ ತೀವ್ರ ಪೈಪೋಟಿಯಿದ್ದು, ರೈತ ಸಂಘದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರ ಮೇಲೆ ಅನುಕಂಪದ ಅಲೆ ಮತ್ತು ಕಾಂಗ್ರೆಸ್ ನ ಬೆಂಬಲವಿರುವ ಕಾರಣ ಜೆಡಿಎಸ್ ಅಭ್ಯರ್ಥಿ ಪುಟ್ಟರಾಜು ಅವರಿಗೆ ಗೆಲುವಿಗಾಗಿ ಕಸರತ್ತು ನಡೆಸುವುದು ಅನಿವಾರ್ಯವಾಗಿದೆ. ಹೀಗಾಗಿಯೇ ಅವರ ಪರ ಪತ್ನಿ ನಾಗಮ್ಮ ಮತನೀಡುವಂತೆ ಮತದಾರರ ಮನೆ ಬಾಗಿಲು ತಟ್ಟುತ್ತಿದ್ದಾರೆ.