ಮಂಡ್ಯ: ಕ್ವಾರೆಂಟೈನ್ ಕೇಂದ್ರದಿಂದ ಮನೆಗೆ ಕೊರೊನಾ ವೈರಸ್ ಸೋಂಕಿತ!
ಮಂಡ್ಯ, ಜೂನ್.07: ಕೊರೊನಾ ವೈರಸ್ ಸೋಂಕಿತ ಬಗ್ಗೆ ಜಿಲ್ಲಾಡಳಿತವು ತೋರಿದ ನಿರ್ಲಕ್ಷ್ಯ ಇಡೀ ಗ್ರಾಮವನ್ನೇ ಆತಂಕಕ್ಕೆ ದೂಡಿದ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಹನುಗನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.
Recommended Video
ಎರಡು ದಿನಗಳ ಹಿಂದೆಯಷ್ಟೇ ಕ್ವಾರೆಂಟೈನ್ ಕೇಂದ್ರದಿಂದ ಬಿಡುಗಡೆಯಾದ 27 ವರ್ಷದ ಯುವಕನಿಗೆ ಕೊರೊನಾ ವೈರಸ್ ಸೋಂಕು ತಗಲಿದೆ. ಶನಿವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ಈ ಅಂಶ ದೃಢಪಟ್ಟಿದೆ.
ಕಳೆದ ತಿಂಗಳು ಮಹಾರಾಷ್ಟ್ರದ ಮುಂಬೈನಿಂದ ಆಗಮಿಸಿದ 27 ವರ್ಷದ ಯುವಕನನ್ನು ಮಂಡ್ಯ ಜಿಲ್ಲೆಯ ಕ್ವಾರೆಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಮೊದಲ ಬಾರಿ ವೈದ್ಯಕೀಯ ತಪಾಸಣೆ ನಡೆಸಿದಾಗ ಯುವಕನಲ್ಲಿ ಯಾವುದೇ ಸೋಂಕು ಕಾಣಿಸಿಕೊಂಡಿರಲಿಲ್ಲ.

ಎರಡನೇ ಬಾರಿಯೂ ನೆಗೆಟಿವ್ ಫಲಿತಾಂಶ:
ಮಂಡ್ಯ ಜಿಲ್ಲಾ ಕ್ವಾರೆಂಟೈನ್ ಕೇಂದ್ರದಲ್ಲಿ 14 ದಿನಗಳ ಕಾಲ ದಿಗ್ಬಂಧನದಲ್ಲಿದ್ದ 27 ವರ್ಷದ ಯುವಕನಿಗೆ ಎರಡನೇ ಬಾರಿ ರಕ್ತ ಮತ್ತು ಗಂಟಲು ದ್ರವ್ಯದ ತಪಾಸಣೆ ನಡೆಸಲಾಯಿತು. ಈ ವೇಳೆಯಲ್ಲೂ ಫಲಿತಾಂಶವು ನೆಗೆಟಿವ್ ಎಂದು ಬಂದಿತ್ತು. ಹೀಗಾಗಿ ಯುವಕನನ್ನು ಕ್ವಾರೆಂಟೈನ್ ಕೇಂದ್ರದಿಂದ ಬಿಡುಗಡೆ ಮಾಡಲಾಗಿತ್ತು.
ಕ್ವಾರೆಂಟೈನ್ ನಿಂದ ಬಿಡುಗಡೆಯಾಗಿ 2 ದಿನಕ್ಕೆ ಪಾಸಿಟಿವ್!
ಕ್ವಾರೆಂಟೈನ್ ಕೇಂದ್ರದಿಂದ ಬಿಡುಗಡೆಗೂ ಮೊದಲು ಮೂರನೇ ಬಾರಿ ವೈದ್ಯಕೀಯ ತಪಾಸಣೆಗೆ ಗಂಟಲು ಮತ್ತು ರಕ್ತದ ಮಾದರಿಯನ್ನು ತೆಗೆದುಕೊಳ್ಳಲಾಗಿತ್ತು. ವೈದ್ಯಕೀಯ ತಪಾಸಣೆ ವರದಿ ಬರುವುದಕ್ಕೂ ಮೊದಲೇ ಕ್ವಾರೆಂಟೈನ್ ಕೇಂದ್ರದಿಂದ ಯುವಕನನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಶನಿವಾರ ಬಂದ ವರದಿಯಲ್ಲಿ 27 ವರ್ಷದ ಯುವಕನಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ. ಅಧಿಕಾರಿಗಳು ಮಾಡಿರುವ ತಪ್ಪಿಗೆ ಇಂದು ಪಾಂಡವಪುರ ತಾಲೂಕಿನ ಹನುಗನಹಳ್ಳಿ ಗ್ರಾಮಸ್ಥರು ಆತಂಕದಲ್ಲೇ ದಿನ ಕಳೆಯುವಂತಾಗಿದೆ.












Click it and Unblock the Notifications