ಮಂಡ್ಯದಲ್ಲೂ ಶುರುವಾಯ್ತು ಹಕ್ಕಿಜ್ವರದ ಆತಂಕ
ಮಂಡ್ಯ, ಡಿಸೆಂಬರ್ 20: ಮಂಡ್ಯ ಜಿಲ್ಲೆ, ಮದ್ದೂರು ತಾಲೂಕಿನ ವಿಶ್ವ ಪ್ರಸಿದ್ಧ ಪಕ್ಷಿಧಾಮ ಕೊಕ್ಕರೆ ಬೆಳ್ಳೂರಿನಲ್ಲಿ ಫೆಲಿಕಾನ್ ಪಕ್ಷಿಗಳ ಸಾವು ಇದೀಗ ಆತಂಕಕ್ಕೆ ಕಾರಣವಾಗಿದೆ.
ಕಳೆದ ಕೆಲವು ದಿನಗಳಿಂದ ಇಲ್ಲಿ ಪಕ್ಷಿಗಳು ಸಾವನ್ನಪ್ಪುತ್ತಿದ್ದು ಈ ಪಕ್ಷಿಗಳ ಸಾವಿನ ಬಗ್ಗೆ ಹಲವು ರೀತಿಯ ಶಂಕೆಗಳು ವ್ಯಕ್ತವಾಗಿದ್ದವು. ಕೆಲವರು ಹಕ್ಕಿ ಜ್ವರದಿಂದ ಪಕ್ಷಿಗಳು ಸಾವನ್ನಪ್ಪುತ್ತವೆ ಎಂಬ ಬಗ್ಗೆಯೂ ವದಂತಿ ಹಬ್ಬಿಸಿದ್ದರು. ಆದರೆ ಫೆಲಿಕಾನ್ (ಹೆಜ್ಜಾರ್ಲೆ)ಗಳ ಸಾವಿಗೆ ಜಂತು ಹುಳುಗಳೇ ಕಾರಣ ಎನ್ನಲಾಗುತ್ತಿದೆ.

ಮತ್ತೆ ಡಿ.18ರ ರಾತ್ರಿ ಎರಡು ಫೆಲಿಕಾನ್ ಪಕ್ಷಿಗಳು ಸಾವನ್ನಪ್ಪಿವೆ. ಈ ಹಿಂದೆ ಸತ್ತ ಪಕ್ಷಿಗಳ
ಕಳೆಬರವನ್ನು ಬೆಂಗಳೂರಿನ ಜೈವಿಕ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿನ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ಪಕ್ಷಿಗಳ ಕರುಳಿನಲ್ಲಿ ಜಂತುಹುಳುಗಳು ಕಂಡು ಬಂದಿದ್ದು, ಇವುಗಳು ಕರಳು ಹಾಗೂ ಹೃದಯಕ್ಕೆ ಹಾನಿ ಉಂಟು ಮಾಡಿದ ಪರಿಣಾಮ ಪಕ್ಷಿಗಳು ಸಾವನ್ನಪ್ಪಿವೆ ಎಂಬ ವರದಿಯನ್ನು ಪಶು ವೈದ್ಯರು ನೀಡಿದ್ದರು.
ಆದರೆ ಇದೀಗ ಮತ್ತೊಂದು ಫೆಲಿಕಾನ್ ಸಾವನ್ನಪ್ಪಿರುವುದು ಹಕ್ಕಿ ಜ್ವರ ಇರಬಹುದೇ ಎಂಬ ಆತಂಕ ಮತ್ತೊಮ್ಮೆ ಗ್ರಾಮಸ್ಥರನ್ನು ಕಾಡತೊಡಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿದ ಪಶು ವೈದ್ಯ ಡಾ.ಸತೀಶ್ ಮೃತ ಫೆಲಿಕಾನ್ ಹಕ್ಕಿಯ ಮರಣೋತ್ತರ ಪರೀಕ್ಷೆ ನಡೆಸಿ ಹೆಚ್ಚಿನ ಪರೀಕ್ಷೆಗಾಗಿ ಪಕ್ಷಿ ಕಳೇಬರವನ್ನು ಬೆಂಗಳೂರಿನ ಜೈವಿಕ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಅಲ್ಲಿಂದ ಮತ್ತೊಮ್ಮೆ ವರದಿ ಬರಬೇಕಿದೆ. ಆ ನಂತರ ಜಂತುಹುಳುಗಳಿಂದ ಸಾವನ್ನಪ್ಪಿದೆಯೇ ಅಥವಾ ಹಕ್ಕಿಜ್ವರದಿಂದ ಸಾವಿಗೀಡಾಗಿವೆಯೇ ಎಂಬುದು ಗೊತ್ತಾಗಲಿದೆ.












Click it and Unblock the Notifications