ಮಂಡ್ಯದಲ್ಲಿ ಸಮುದಾಯದ ನಾಯಕರಿಂದ ಬಹಿರಂಗ ಬೆಂಬಲ:ಯಾರ ನಡೆ ಯಾವ ಕಡೆ?
Recommended Video

ಮಂಡ್ಯ, ಏಪ್ರಿಲ್ 05:ಬೇರೆಡೆಯಲ್ಲಿ ನಡೆಯುತ್ತಿರುವ ಚುನಾವಣೆಗೆ ಹೋಲಿಸಿದರೆ ಮಂಡ್ಯದಲ್ಲಿ ಎಲ್ಲವೂ ವಿಭಿನ್ನ, ವಿಚಿತ್ರವಾಗಿದ್ದು ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ದೋಸ್ತಿಯಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿ ಪ್ರಚಾರ ಮಾಡುತ್ತಿದ್ದರೆ, ತಮ್ಮ ನಾಯಕರಿಗೆ ತಿರುಗಿ ಬಿದ್ದಿರುವ ಕಾಂಗ್ರೆಸ್ ಕಾರ್ಯಕರ್ತರು ಸ್ವತಂತ್ರ ಅಭ್ಯರ್ಥಿ ಸುಮಲತಾ ಪರ ಕಾಂಗ್ರೆಸ್ ಬಾವುಟ ಹಿಡಿದು ಪ್ರಚಾರ ನೀಡುತ್ತಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಜೊತೆಗೆ ಬಿಜೆಪಿಯೂ ಬೆಂಬಲ ನೀಡಿರುವುದರಿಂದ ಸುಮಲತಾ ಅವರ ಚುನಾವಣಾ ಪ್ರಚಾರದಲ್ಲಿ ರೈತ ಸಂಘದ ಹಸಿರು ಶಾಲು, ಬಿಜೆಪಿ ಮತ್ತು ಕಾಂಗ್ರೆಸ್ನ ಬಾವುಟಗಳು ರಾರಾಜಿಸುವ ಮೂಲಕ ಅಚ್ಚರಿ ಹುಟ್ಟಿಸುತ್ತಿವೆ.
ಈಗಾಗಲೇ ಬಿಜೆಪಿ ಬೆಂಬಲ ನೀಡಿರುವ ಕಾರಣ ಯಾವುದೇ ಸಮಸ್ಯೆಯಿಲ್ಲ. ಆದರೆ ಜೆಡಿಎಸ್ ಗೆ ಬೆಂಬಲ ನೀಡಿ ಸರ್ಕಾರ ರಚಿಸಿರುವ ಕಾಂಗ್ರೆಸ್ ನಾಯಕರಿಗೆ ಮಾತ್ರ ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರ ನಡೆ ಮುಜುಗರವನ್ನುಂಟು ಮಾಡುತ್ತಿದೆ.
ಪಕ್ಷಗಳು ಒಂದೆಡೆ ಬೆಂಬಲ ಸೂಚಿಸುತ್ತಿದ್ದರೆ, ಮತ್ತೊಂದೆಡೆ ಜಾತಿ ಸಮುದಾಯದ ನಾಯಕರು ಕೂಡ ತಮ್ಮ ಬೆಂಬಲವನ್ನು ತಮಗಿಷ್ಟ ಬಂದ ಅಭ್ಯರ್ಥಿಗಳಿಗೆ ಬಹಿರಂಗವಾಗಿಯೇ ನೀಡುತ್ತಿರುವುದು ಕಂಡು ಬರುತ್ತಿದೆ. ಮುಂದೆ ಓದಿ...

ಕುರುಬರ ಪಡೆ ಸಂಘಟನೆ ಬೆಂಬಲ
ಸುಮಲತಾ ಅಂಬರೀಶ್ರವರಿಗೆ ಕುರುಬರ ಪಡೆ ಸಂಘಟನೆ ಬೆಂಬಲ ನೀಡಲಿರುವುದಾಗಿ ಸಂಘದ ರಾಜ್ಯಾಧ್ಯಕ್ಷ ವರ್ತೂರು ಸತೀಶ್ ತಿಳಿಸಿದ್ದು, ಎಲ್ಲ ರಾಜಕೀಯ ಪಕ್ಷಗಳು ಮಹಿಳೆಯರು ಚುನಾವಣೆಯಲ್ಲಿ ಸ್ಪರ್ಧಿಸಬೇಕು. ಮಹಿಳೆಯರು ರಾಜಕಾರಣದಲ್ಲಿ ಬೆಳೆಯಬೇಕು. ಹೆಚ್ಚು ಹೆಚ್ಚು ಮಹಿಳೆಯರು ಚುನಾವಣೆಯಲ್ಲಿ ಸ್ಪರ್ಧಿಸುವಂತಾಗಬೇಕು ಎಂದೆಲ್ಲ ಹೇಳುತ್ತಿದ್ದರೂ ಮಹಿಳೆಯರ ಮನೋಬಲ ಕುಗ್ಗಿಸುವ ಕೆಲಸದಲ್ಲಿ ಕೆಲವರು ನಿರತರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಜಾತೀಯತೆಯ ಅಮಲಿನಲ್ಲಿ ತೇಲುತ್ತಿದೆ
ಒಕ್ಕಲಿಗರ ವೇದಿಕೆ ಜಿಲ್ಲಾಧ್ಯಕ್ಷ ನವೀನ್ಕುಮಾರ್ ಮಾತನಾಡಿ, ಜಾತ್ಯಾತೀತ ಪದವನ್ನು ಪಕ್ಷದ ಹೆಸರಿನಲ್ಲಿಯೇ ಸೇರಿಸಿಕೊಂಡಿರುವ ಜಾ.ದಳವು ಜಾತೀಯತೆಯ ಅಮಲಿನಲ್ಲಿ ತೇಲುತ್ತಿದ್ದು, ವಾಮಮಾರ್ಗದಿಂದಾರೂ ಚುನಾವಣೆ ಗೆಲ್ಲುವ ಏಕೈಕ ಉದ್ದೇಶದಿಂದ ಸ್ತ್ರೀನಿಂದನೆಯಂತಹ ಕೀಳು ಮಟ್ಟಕ್ಕೆ ಇಳಿದಿರುವುದಾಗಿ ಆರೋಪಿಸಿದ್ದಾರೆ.
ರಾಜ್ಯದ ಸಂಸದರಲ್ಲಿ ಯಾರ ವಿರುದ್ಧ ಎಷ್ಟು ಕ್ರಿಮಿನಲ್ ಪ್ರಕರಣಗಳಿವೆ?

ಮಾದಿಗ ಮೀಸಲಾತಿ ಹೋರಾಟ ಸಮಿತಿ ಬೆಂಬಲ
ಇನ್ನೊಂದೆಡೆ ನಿಖಿಲ್ ಕುಮಾರಸ್ವಾಮಿಗೆ ಬೆಂಬಲ ನೀಡಿರುವ ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಸಿ.ಕೆ.ಪಾಪಯ್ಯ ಅವರು, ರಾಜ್ಯದಲ್ಲಿ ಆದಿಜಾಂಭವ ಅಭಿವೃದ್ಧಿ ನಿಗಮ ಲೋಕಾರ್ಪಣೆಗೊಳ್ಳಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಾರಣರಾಗಿದ್ದು, ಈ ಹಿನ್ನೆಲೆಯಲ್ಲಿ ಸಮುದಾಯದ ಜನತೆ ಜಾ.ದಳ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಬೆಂಬಲಿಸುವುದಾಗಿ ಹೇಳಿದ್ದಾರೆ. ಇನ್ನೊಂದೆಡೆ ಜಾ.ದಳ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷ ಕೆ.ವಿ.ಅಮರನಾಥ್ ಅವರು ಮಡಿವಾಳ ಜನಾಂಗ ಬೆಂಬಲ ನೀಡುತ್ತಿರುವುದಾಗಿ ಹೇಳಿದ್ದಾರೆ.

ಇದು ಎಷ್ಟರ ಮಟ್ಟಿಗೆ ಉಪಯೋಗವಾಗುತ್ತದೆ?
ಒಟ್ಟಾರೆ ಚುನಾವಣೆಗೆ ಹತ್ತಿರವಾಗುತ್ತಿದ್ದಂತೆಯೇ ಜಾತಿ, ಸಮುದಾಯಗಳು ತಮ್ಮ ಬೆಂಬಲಗಳನ್ನು ಸೂಚಿಸುವ ಮೂಲಕ ತಮ್ಮ ಇರುವನ್ನು ಬಹಿರಂಗಪಡಿಸುತ್ತಿವೆ. ಇದು ಎಷ್ಟರ ಮಟ್ಟಿಗೆ ಚುನಾವಣೆಯಲ್ಲಿ ಉಪಯೋಗವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications