ಸಿಎಂ ಕುಮಾರಸ್ವಾಮಿ ಬೆರಳಿಗೆ ಗಾಯ: ಭದ್ರತೆ ವೈಫಲ್ಯ ಸಾಬೀತು
ಮಂಡ್ಯ, ಅಕ್ಟೋಬರ್ 27: ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿಯವರ ಎಡಗೈನ ಉಂಗುರದ ಬೆರಳಿಗೆ ಗಾಯವಾಗಿದ್ದು, ಸಾರ್ವಜನಿಕರ ಭೇಟಿ ವೇಳೆ ಅಭಿಮಾನಿಯೊಬ್ಬ ಕೈಕುಲುಕಿದಾಗ ಈ ಘಟನೆ ನಡೆದಿದೆ.
ಈಗಾಗಲೇ ಝಡ್ಪ್ಲಸ್ ಶ್ರೇಣಿ ಭದ್ರತೆ ಹೊಂದಿದ್ದರೂ ಕುಮಾರಸ್ವಾಮಿ ಅವರ ಭದ್ರತೆಯಲ್ಲಿ ಲೋಪ ಇರುವುದು ಬೆಳಕಿಗೆ ಬಂದಿದೆ. ಮಂಡ್ಯ ಜಿಲ್ಲೆ ಪಾಂಡವಪುರ ಸರ್ಕಾರಿ ಆಸ್ಪತ್ರೆಗೆ ಶನಿವಾರ ಸಿಎಂ ಕುಮಾರಸ್ವಾಮಿ ಜೆಡಿಎಸ್ ಮೃತ ಕಾರ್ಯಕರ್ತರೊಬ್ಬರನ್ನು ನೋಡಲು ತೆರಳಿದ್ದರು.
ಆ ಸಂದರ್ಭದಲ್ಲಿ ಅಭಿಮಾನಿಯೊಬ್ಬ ಕೈಕುಲುಕಿದಾಗ ಸಿಎಂ ಕೈಬೆರಳಿಗೆ ಗಾಯವಾಗಿದೆ.ಘಟನೆ ನಡೆದಾದ ತಕ್ಷಣಕ್ಕೆ ಸಿಎಂ ಕೈಯಿಂದ ರಕ್ತ ಸುರಿದಾಗ ಕೆಲಕಾಲ ಗಲಿಬಿಲಿ ಉಂಟಾಯಿತು. ಸಿಎಂ ಕೈಯಲ್ಲಿ ರಕ್ತ ಯಾವ ಕಾರಣಕ್ಕೆ ಬಂತು ಎಂಬ ವಿಷಯ ಯಾರಿಗೂ ಹೊಳೆಯಲಿಲ್ಲ ಬಳಿಕ ಅಭಿಮಾನಿಯೊಬ್ಬ ಕೈಕುಲುದ್ದರಿಂದ ಉಂಗುರ ಬೆರಳಿಗೆ ಗಾಯವಾಗಿದೆ ಎಂದು ಗೊತ್ತಾಯಿತು.

ತಕ್ಷಣ ಇಎಂ ಜತೆಗಿದ್ದ ವೈದ್ಯರ ವಿಶೇಷ ತಂಡ ಚಿಕಿತ್ಸೆ ನೀಡಿ, ಉಪ ಶಮನ ಮಾಡಬೇಕಾಯಿತು. ಈ ಘಟನೆ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಇದೊಂದು ಸಾಮಾನ್ಯ ಘಟನೆ ಆಕಸ್ಮಿಕವಾಗಿ ಉಂಟಾಗಿರುವ ಗಾಯ ಎಂದು ಸಮಜಾಯಿಶಿ ನೀಡಿದರು. ಆದರೆ ಪ್ರತಿ ದಿನ ಎರಡರಿಂದ ಮೂರು ಬಾರಿ ಜನಸಾಮಾನ್ಯರ ಜತೆ ನೇರ ಭೇಟಿ ಮಾಡುವ ಕುಮಾರಸ್ವಾಮಿ ಅವರು ಸಾಕಷ್ಟು ಭದ್ರತೆಗಳಿದ್ದರೂ ಅದನ್ನು ಉಲ್ಲಂಘಿಸಿ ಜನರೊಂದಿಗೆ ಬೆರೆಯುತ್ತಾರೆ.
ಇತ್ತೀಚೆಗೆ ಸಿಎಂ ಕುಮಾರಸ್ವಾಮಿ ಆರೋಗ್ಯದಲ್ಲಿ ಸಾಕಷ್ಟು ವ್ಯತ್ಯಾಸಗಳು ಕಂಡುಬರುತ್ತಿರುವುದರಿಂದ ಜನರಿಂದ ಅಂತರ ಕಾಯ್ದುಕೊಳ್ಳಲು ಝಡ್ ಪ್ಲಸ್ ಶ್ರೇಣಿಯ ಭದ್ರತೆಯನ್ನೂ ಕೂಡ ಒದಗಿಸಲಾಗಿದೆ.ಆದಾಗ್ಯೂ ಕೂಡ ಇಂತಹ ಘಟನೆ ನಡೆಯುತ್ತಿದೆ. ಇತ್ತೀಚೆಗೆ ಹೈದರಾಬಾದ್ ಕರ್ನಾಟಕಕ್ಕೆ ಭೇಟಿ ನೀಡಿದ ವೇಳೆ ಸ್ಥಳೀಯ ಸಂಘಟನೆಯೊಂದರ ಕಾರ್ಯಕರ್ತರು ಕುಮಾರಸ್ವಾಮಿಯವರನ್ನು ಬೇಟಿ ಮಾಡುವ ನೆಪದಲ್ಲಿ ಘೇರಾವ್ ಹಾಕಲು ಪ್ರಯತ್ನಿಸಿದ್ದರು. ಆಗಲೂ ಕೂಡ ಭದ್ರತಾ ವೈಫಲ್ಯವಿರುವುದು ಬೆಳಕಿಗೆ ಬಂದಿತ್ತು.












Click it and Unblock the Notifications