ಮಂಡ್ಯದಲ್ಲಿ ಚೆಲುರಾಯಸ್ವಾಮಿ ಆಟ, ದಳಪತಿಗಳಿಗೆ ಸಂಕಟ...
ಮಂಡ್ಯ, ಏಪ್ರಿಲ್ 05:ಜೆಡಿಎಸ್ ನಿಂದ ಸಿಡಿದೆದ್ದು ಕಾಂಗ್ರೆಸ್ ಸೇರಿ ಅಲ್ಲಿ ರಾಜಕೀಯ ಜೀವನ ಕಂಡು ಕೊಂಡಿದ್ದ ಮಾಜಿ ಸಚಿವ ಚೆಲುವರಾಯಸ್ವಾಮಿ ಅವರಿಗೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.
ಆದರೆ ಇದೀಗ ಲೋಕಸಭಾ ಚುನಾವಣೆಯಲ್ಲಿ ತಾವು ಯಾರನ್ನು ದ್ವೇಷಿಸಿ ಹೊರಬಂದರೋ ಅದೇ ನಾಯಕನ ಪುತ್ರನಿಗೆ ಬೆಂಬಲ ನೀಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿರುವುದು ನಿಜಕ್ಕೂ ರಾಜಕಾರಣದ ಅಚ್ಚರಿಯೇ ಸರಿ.
ಜೆಡಿಎಸ್ ನಿಂದ ಹೊರಬಂದು ಕಾಂಗ್ರೆಸ್ನಲ್ಲಿ ನೆಲೆ ಕಂಡುಕೊಂಡ ಶಾಸಕರ ಪೈಕಿ ಹೆಚ್ಚಿನವರು ಕಳೆದ ಚುನಾವಣೆಯಲ್ಲಿ ಸೋತು ಇವತ್ತು ಯಾವುದೇ ಅಧಿಕಾರವಿಲ್ಲದೆ ಮನೆ ಸೇರಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಮತ್ತು ದೇವೇಗೌಡರ ಕುಟುಂಬವನ್ನು ಕಟು ಶಬ್ದಗಳಲ್ಲಿ ಟೀಕೆ ಮಾಡಿದ್ದ ಜಮೀರ್ ಅಹಮದ್ ಮತ್ತೆ ಒಂದಾಗಿ ದೋಸ್ತಿ ಸರ್ಕಾರದಲ್ಲಿ ಸಚಿವ ಸ್ಥಾನಗಿಟ್ಟಿಸಿಕೊಳ್ಳುವಲ್ಲಿಯೂ ಯಶಸ್ವಿಯಾಗಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಆದರೆ ಇಲ್ಲಿ ಉಭಯ ಸಂಕಟದಿಂದ ಪರದಾಡಬೇಕಾದ ಪರಿಸ್ಥಿತಿ ಬಂದಿರುವುದು ಮಾತ್ರ ಚೆಲುವರಾಯಸ್ವಾಮಿ ಅವರಿಗೆ ಎನ್ನುವುದೇ ದುಃಖದ ಸಂಗತಿಯಾಗಿದೆ. ಈಗಾಗಲೇ ರಾಜ್ಯ ಕಾಂಗ್ರೆಸ್ ನಾಯಕರು ಮತ್ತು ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಅವರೇ ಚೆಲುವರಾಯಸ್ವಾಮಿ ಅವರನ್ನು ಕರೆದು ಜೆಡಿಎಸ್ ಗೆ ಬೆಂಬಲ ನೀಡಿ ಜೆಡಿಎಸ್ ಪರ ಪ್ರಚಾರ ಮಾಡುವಂತೆ ಸೂಚಿಸಿದ್ದಾರೆ. ಆದರೆ ಚೆಲುವರಾಯಸ್ವಾಮಿ ಏನು ಮಾಡುತ್ತಿದ್ದಾರೆ. ಮುಂದೆ ಓದಿ...

ಚುನಾವಣಾ ಪ್ರಚಾರ ಮಾಡುತ್ತಾರಾ?
ಸಿಎಂ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನ ಯಾವ ನಾಯಕರೂ ಚೆಲುವರಾಯಸ್ವಾಮಿ ಅವರನ್ನು ಭೇಟಿ ಮಾಡಿ ತಮ್ಮ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಚುನಾವಣಾ ಪ್ರಚಾರಕ್ಕೆ ಬರುವಂತೆ ಆಹ್ವಾನಿಸಿಲ್ಲ. ಹೀಗಿರುವಾಗ ಕೇವಲ ಕೈ ನಾಯಕರ ಮಾತಿಗೆ, ಒತ್ತಡಕ್ಕೆ ಮಣಿದು ಒಂದು ವೇಳೆ ಚೆಲುವರಾಯಸ್ವಾಮಿ ಚುನಾವಣಾ ಪ್ರಚಾರಕ್ಕೇನಾದರೂ ಹೋದರೆ ಅದು ಅವರ ಘನತೆಗೆ ಆಗುವ ಧಕ್ಕೆ ಎಂದರೂ ತಪ್ಪಾಗಲಾರದು.

ಇಬ್ಬರೂ ರಾಜಕೀಯ ವೈರಿಗಳಾಗಿದ್ದಾರೆ
ನಾಗಮಂಗಲ ಕ್ಷೇತ್ರದಲ್ಲಿ ಮೊದಲಿನಿಂದಲೂ ಶಾಸಕ ಸುರೇಶ್ ಗೌಡ ಮತ್ತು ಚೆಲುವರಾಯಸ್ವಾಮಿ ನಡುವೆ ರಾಜಕೀಯವಾಗಿ ಜಿದ್ದಾಜಿದ್ದಿಯಿದೆ. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಚೆಲುವರಾಯಸ್ವಾಮಿ ವಿರುದ್ಧ ಗೆಲುವು ಸಾಧಿಸಿರುವ ಸುರೇಶ್ ಗೌಡ ಅವರು ತಮ್ಮ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕೆಂಬ ತೀರ್ಮಾನಕ್ಕೆ ಬಂದಿದ್ದಾರೆ. ಜತೆಗೆ ರಾಜ್ಯದಲ್ಲಿ ದೋಸ್ತಿ ಸರ್ಕಾರವಿದ್ದರೂ ಕೂಡ ಈ ಕ್ಷೇತ್ರದಲ್ಲಿ ಇಬ್ಬರೂ ಕೂಡ ರಾಜಕೀಯ ವೈರಿಗಳಾಗಿಯೇ ಉಳಿದು ಹೋಗಿದ್ದಾರೆ.

ಚಲುವರಾಯಸ್ವಾಮಿಗೆ ಟಾಂಗ್
ಈ ನಡುವೆ ಮಂಡ್ಯದಲ್ಲಿ ಸ್ವತಂತ್ರ ಅಭ್ಯರ್ಥಿ ಪರ ಕಾಂಗ್ರೆಸ್ ಸ್ಥಳೀಯ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಬಾವುಟ ಹಿಡಿದು ಪ್ರಚಾರ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ಶಾಸಕ ಸುರೇಶ್ ಗೌಡ ಅವರು ಮೈತ್ರಿ ಧರ್ಮ ಪಾಲಿಸುವುದು ಕಾಂಗ್ರೆಸ್ ಕರ್ತವ್ಯವಾಗಿದೆ. ಜಿಲ್ಲೆಯಲ್ಲಿ ಮೂಲ ಕಾಂಗ್ರೆಸ್ ನಾಯಕರು ಜೆಡಿಎಸ್ ಪರವಾಗಿದ್ದಾರೆ. ಇವತ್ತು ಸುಮಲತಾ ಪರ ಇರುವವರು ವಲಸೆ ಕಾಂಗ್ರೆಸ್ಸಿಗರಾಗಿದ್ದಾರೆ ಎನ್ನುವ ಮೂಲಕ ಚಲುವರಾಯಸ್ವಾಮಿಗೆ ಟಾಂಗ್ ನೀಡಿದ್ದಾರೆ. ತಮ್ಮ ರಾಜಕೀಯ ಅಸ್ಥಿತ್ವದ ನೆಪದಲ್ಲಿ ವೈಯಕ್ತಿಕ ಹಿತಾಶಕ್ತಿಗಾಗಿ ವಿರುದ್ಧವಾಗಿ ಕೆಲಸಮಾಡುತ್ತಿದ್ದಾರೆ. ಎಲ್ಲೋ ಕುಳಿತು ಹೇಳುವವರ ಮಾತನ್ನ ಜನರು ಕೇಳುವಷ್ಟು ದಡ್ಡರಲ್ಲ, ನಮ್ಮ ಪಕ್ಷ ಏಕಾಂಗಿಯಾಗಿಯೇ ಚುನಾವಣೆ ಎದುರಿಸುವಷ್ಟು ಶಕ್ತಿಯುತವಾಗಿದೆ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಅವರನ್ನು ಟಾರ್ಗೆಟ್ ಮಾಡಿ ಮಾತನಾಡಿದ್ದಾರೆ.

ಮೌನವಾಗಿರುವ ಚಲುವರಾಯಸ್ವಾಮಿ
ಯಾವಾಗ ಜೆಡಿಎಸ್ ಶಾಸಕ ಸುರೇಶ್ ಗೌಡ ಅವರು ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ ವಿರುದ್ಧ ಮಾತನಾಡಿದರೋ ಚೆಲುವರಾಯಸ್ವಾಮಿ ಬೆಂಬಲಿಗರು ರೊಚ್ಚಿಗೆದ್ದಿದ್ದು, ಕೇವಲ ಕಾಂಗ್ರೆಸ್ ಬಾವುಟ ಮಾತ್ರವಲ್ಲದೆ ಚೆಲುವರಾಯಸ್ವಾಮಿ ಅವರ ಭಾವಚಿತ್ರವಿರುವ ಬ್ಯಾನರ್ ಹಿಡಿದು ಸುಮಲತಾ ಅವರ ಪರವಾಗಿ ನಡೆಯುತ್ತಿರುವ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಒಟ್ಟಾರೆ ಚೆಲುವರಾಯಸ್ವಾಮಿ ಅವರು ಬಹಿರಂಗವಾಗಿ ಏನನ್ನೂ ಹೇಳದೆ ಮೌನವಾಗಿಯೇ ಇದ್ದಾರೆಯಾದರೂ ಅವರೇನು ಮಾಡಬೇಕೋ ಅದನ್ನೇ ಮಾಡುತ್ತಿದ್ದಾರೆ ಎನ್ನವುದಂತು ಸತ್ಯ.












Click it and Unblock the Notifications