ನಾನಾಗಿದ್ದರೆ ಮಹಿಳೆಯರಿಗೆ ತಿಂಗಳಿಗೆ 10,000 ಕೊಡುತ್ತಿದ್ದೆ- ಕೇಂದ್ರ ಸಚಿವ ಕುಮಾರಸ್ವಾಮಿ
ಮಂಡ್ಯ, ಜನವರಿ 06: ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ತಾಲೂಕುಗಳಿಗೆ ಮೊಬೈಲ್ ವ್ಯಾನ್ಗಳ ವ್ಯವಸ್ಥೆ ಮಾಡಲಾಗುವುದು. ಇದರಿಂದ ಗ್ರಾಮೀಣ ಪ್ರದೇಶದ ಜನತೆಗೆ ಆರೋಗ್ಯ ತಪಾಸಣೆ ಮತ್ತು ಮಧುಮೇಹ, ರಕ್ತದೊತ್ತಡಕ್ಕೆ ಚಿಕಿತ್ಸೆ ನೀಡಲು ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರಿಗೆ ತೆರಳುತ್ತಿದ್ದ ವೇಳೆ ಇಲ್ಲಿನ ವಿಶ್ವೇಶ್ವರಯ್ಯ ವೃತ್ತದಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ಅಭಿನಂದನೆಯನ್ನು ಸ್ವೀಕರಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಆರೋಗ್ಯ ರಕ್ಷಣೆ ಇಂದು ಅತ್ಯಂತ ಪ್ರಮುಖವಾಗಿದೆ. ಆದ್ದರಿಂದ ಗ್ರಾಮೀಣ ಜನತೆಗೆ ಗ್ರಾಮದಲ್ಲೇ ಎಲ್ಲಾ ರೀತಿಯ ಆರೋಗ್ಯ ತಪಾಸಣೆ, ಚಿಕಿತ್ಸೆ ಮತ್ತು ಔಷಧ ಕಲ್ಪಿಸುವುದು ನನ್ನ ಗುರಿಯಾಗಿದೆ. ಅದಕ್ಕಾಗಿ ನಮ್ಮ ಇಲಾಖೆಯಿಂದ ನೆರವು ನೀಡಿ, ಶೀಘ್ರದಲ್ಲೇ ಆರಂಭಿಸಲಾಗುವುದು ಎಂದರು.

ಮಾತು ಮುಂದುವರಿಸಿದ ಅವರು, ಇಂದು ಉದ್ಯೋಗದ ಸಮಸ್ಯೆ ಬಗೆಹರಿಸುವುದು ಸವಾಲಿನ ಕೆಲಸವಾಗಿದೆ. ಹಾಗಾಗಿ ಮಂಡ್ಯ ಜಿಲ್ಲೆಯ ಯುವ ಜನತೆಗೆ ಉದ್ಯೋಗ ಕಲ್ಪಿಸುವ ಸಲುವಾಗಿ ಎಚ್ಎಂಟಿ ಕಾರ್ಖಾನೆ ಮತ್ತು ವೋಲ್ವೋ ಬಸ್ಸಿನ ಸಂಸ್ಥೆಯುವರು ಸೇರಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಮಾಡಿರುವವರಿಗೆ ಆರೇಳು ಸಾವಿರ ವೇತನದ ಜೊತೆಗೆ ತರಬೇತಿ ನೀಡಿ ಉದ್ಯೋಗದ ಭರವಸೆ ಮೂಡಿಸಲಾಗುವುದು ಎಂದರು.
ಭತ್ತ ಖರೀದಿ ಬಗ್ಗೆ ಮಾತನಾಡಿದ ಅವರು, ಭತ್ತ ಖರೀದಿ ಕೇಂದ್ರ ಆರಂಭಿಸುವ ಬಗ್ಗೆ ಮಾತನಾಡಿದ್ದೇನೆ. 15ನೇ ತಾರೀಕಿನಿಂದ ಭತ್ತ ಖರೀದಿಸುವುದಾಗಿ ಹೇಳಿದ್ದಾರೆ. ರೈತರ ಸಮಸ್ಯೆಗಳ ಬಗ್ಗೆ ನನಗೆ ಚೆನ್ನಾಗಿ ಅರಿವಿದೆ. ರೈತರು ಪ್ರಸ್ತುತ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ಅಗತ್ಯವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ನಾನು ರೈತರ ಒಡನಾಟದಲ್ಲಿ ಇರುವವನು. ರೈತರಿಗೆ ಏನು ಕಾರ್ಯಕ್ರಮ ಕೊಡಬೇಕೆಂಬ ಚಿಂತನೆ ನನ್ನದು. ಆ ನಿಟ್ಟಿನಲ್ಲಿ ಕ್ರಮಕೈಗೊಳ್ಳುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ರೈತರು, ಬೇಸಿಗೆಗೆ ಎರಡು ಕಟ್ಟು ನೀರು ಕೊಡಲು ವ್ಯವಸ್ಥೆ ಮಾಡುವಂತೆ ಕೇಂದ್ರ ಸಚಿವರ ಬಳಿ ಮನವಿ ಮಾಡಿದಾಗ, ಈ ಸಂಬಂಧ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇನ್ನು ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ 2 ಸಾವಿರ ರೂಪಾಯಿ ಕೊಡುವುದರ ಬಗ್ಗೆ ದೊಡ್ಡದಾಗಿ ಮಾತನಾಡುತ್ತಿದೆ. ಮತ್ತೊಂದೆಡೆ ಹಾಲಿನ ದರ, ಪ್ರಯಾಣ ದರ ಸೇರಿದಂತೆ ಎಲ್ಲಾ ದರಗಳನ್ನು ಹೆಚ್ಚಳ ಮಾಡುತ್ತಿದೆ. ಜನರ ಮೇಲೆ ಸಲ್ಲದ ತೆರಿಗೆ ವಿಧಿಸಿ, ಹೊರೆ ಹೇರುತ್ತಿದೆ. ದರ ಏರಿಕೆ ಮಾಡಿ ಎರಡು ಸಾವಿರ ರೂಪಾಯಿ ಕೊಡುವುದು ದೊಡ್ಡ ಸಾಧನೆಯೇ? ನಾನು ಮುಖ್ಯಮಂತ್ರಿ ಆಗಿದ್ದು, ಈ ರೀತಿ ಬೆಲೆ ಏರಿಕೆ ಮಾಡಿದ್ದಲ್ಲಿ, ಮಹಿಳೆಯರಿಗೆ ಮಾಸಿಕವಾಗಿ ಹತ್ತು ಸಾವಿರ ರೂಪಾಯಿ ಕೊಡುತ್ತಿದ್ದೆ ಎಂದು ಕಿಡಿಕಾರಿದರು.
ಬೆಲೆ ಹೆಚ್ಚಳದಿಂದ ರೈತರು ಸೇರಿದಂತೆ ಎಲ್ಲಾ ವರ್ಗದ ಜನತೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದರು. ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಹಾಗಲಹಳ್ಳಿ ಚಿಕ್ಕತಿಮ್ಮೇಗೌಡ, ಮುಖಂಡರಾದ ಅಣ್ಣೂರು ನವೀನ್ ಕುಮಾರ್, ಕೆ.ಟಿ.ಸುರೇಶ್, ಗುರುದೇವರಹಳ್ಳಿ ಅರವಿಂದ್, ಅಣ್ಣೂರು ವಿನು ಹೊಂಡಾ ಸಿದ್ದೇಗೌಡ ಹಾಗೂ ಎ.ಟಿ.ಶಂಕರ್ ಮೊದಲಾದವರು ಉಪಸ್ಥಿತರಿದ್ದರು.












Click it and Unblock the Notifications