ಪಾದಯಾತ್ರೆಯೊಂದಿಗೆ ರೈತರ ಅಹೋರಾತ್ರಿ ಧರಣಿ ಅಂತ್ಯ
ಶ್ರೀರಂಗಪಟ್ಟಣ, ಸೆಪ್ಟೆಂಬರ್ 05 : ಕೃಷ್ಣರಾಜ ಸಾಗರ ಜಲಾಶಯ ವ್ಯಾಪ್ತಿಯ ರೈತರ ಬೆಳೆಗಳಿಗೆ ನೀರು ಕೊಡುವ ನೆಪದಲ್ಲಿ ನೆರೆಯ ತಮಿಳುನಾಡಿಗೆ ನೀರು ಬಿಟ್ಟಿರುವ ರಾಜ್ಯ ಸರ್ಕಾರ ಕೂಡಲೇ ರೈತರ ಬೆಳೆಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ನಡೆಸುತ್ತಿದ್ದ ಧರಣಿ ಪಾದಯಾತ್ರೆಯ ಮೂಲಕ ಬುಧವಾರ ಮುಕ್ತಾಯವಾಗಿದೆ.
ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಅವರ ನೇತೃತ್ವದಲ್ಲಿ ಕೃಷ್ಣರಾಜ ಸಾಗರ (ಕೆಆರ್ಎಸ್) ಜಲಾಶಯದ ಮುಖ್ಯ ದ್ವಾರದಲ್ಲಿ ಸೋಮವಾರದಿಂದ ನಡೆಯುತ್ತಿದ್ದ ಅಹೋರಾತ್ರಿ ಧರಣಿ ಶ್ರೀರಂಗಪಟ್ಟಣಕ್ಕೆ ಪಾದಯಾತ್ರೆ ಮೂಲಕ ತಾತ್ಕಾಲಿಕ ಅಂತ್ಯ ಹಾಡಲಾಗಿದೆ.
ಕೆಆರ್ಎಸ್ ಮುಖ್ಯ ದ್ವಾರದ ಮುಂಭಾಗದಲ್ಲಿ ಜಮಾಯಿಸಿದ ರೈತ ಮುಖಂಡರು ಜಲಾಶಯದಿಂದ ಶ್ರೀರಂಗಪಟ್ಟಣದವರೆಗೆ 19.4 ಕಿ.ಮೀ. ಪಾದಯಾತ್ರೆ ನಡೆಸಿದರು. ರಸ್ತೆ ಉದ್ದಕ್ಕೂ ರೈತರು ಅನಗತ್ಯವಾಗಿ ನೀರು ಕೇಳುತ್ತಿರುವ ತಮಿಳುನಾಡು ಮತ್ತು ನೀರು ಬಿಟ್ಟ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.
ಪಾದಯಾತ್ರೆ ಬೆಂಬಲಿಸಿದ ಕೆಆರ್ಎಸ್ ಮತ್ತು ಶ್ರೀರಂಗಪಟ್ಟಣ ರಸ್ತೆ ಮಧ್ಯದ ಗ್ರಾಮಸ್ಥರು ಮೂವತ್ತಕ್ಕೂ ಹೆಚ್ಚು ಪಾದಯಾತ್ರಿಗಳನ್ನು ಸ್ವಾಗತಿಸಿ ತಂಪಾದ ಪಾನೀಯ, ಹಣ್ಣು-ಹಂಪಲು ನೀಡಿದರು. ಪ್ರತಿಭಟನಾಕಾರರು ಮತ್ತಷ್ಟು ಹುಮ್ಮಸ್ಸಿನಿಂದ ಪಾದಯಾತ್ರೆ ನಡೆಸಿದರು, ಧಿಕ್ಕಾರ ಕೂಗಿದರು.
ಪಾದಯಾತ್ರೆ ಸಂದರ್ಭ ಮಾತನಾಡಿದ ನಂಜುಂಡೇಗೌಡ ಅವರು, ಕಾವೇರಿ ಕೊಳ್ಳದ ರೈತರ ಹಿತ ಕಾಯುವುದಾಗಿ ಸರ್ಕಾರವು ಭರವಸೆ ನೀಡಿದ್ದು, ರೈತರು ಬಿತ್ತಿರುವ ಬೆಳೆ ಒಣಗದಂತೆ ನೋಡಿಕೊಳ್ಳಲು ಕಟ್ಟು ಪದ್ಧತಿಯಲ್ಲಿ ನೀರು ಹರಿಸಬೇಕು. ಬಿತ್ತನೆ ಮಾಡಿರುವ ಬೆಳೆಗಳು ನೀರಿಲ್ಲದೆ ಒಣಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಕರೆಗೆ 50 ಸಾವಿರ ರು. ನೀಡಬೇಕು ಮತ್ತು ರೈತರ ಎಲ್ಲಾ ರೀತಿಯ ಸಾಲವನ್ನು ಮನ್ನಾ ಮಾಡಬೇಕೆಂದು ಆಗ್ರಹಿಸಿದರು.
ವಿಕಲಚೇತನ ಪಾದಯಾತ್ರೆ : ಕಾಲು ಕಳೆದುಕೊಂಡಿರುವ ಅಂಗವಿಕಲ ರೈತ ಕೊಡಿಯಾಲ ಗ್ರಾಮದ ಜವರೇಗೌಡ ಕೆಆರ್ಎಸ್ ಜಲಾಶಯದಿಂದ ಶ್ರೀರಂಗಪಟ್ಟಣದವರೆಗೂ ಕಾವೇರಿ ನೀರಿಗಾಗಿ ಪಾದಯಾತ್ರೆ ಮಾಡುವ ಮೂಲಕ ಜನರ ಗಮನ ಸೆಳೆದರು.
ಬೆಳಗೊಳ, ಹುಲಿಕೆರೆ, ಹೊಸ ಆನಂದೂರು, ಪಿ. ಹೊಸಹಳ್ಳಿ ಹಾಗೂ ಪಾಲಹಳ್ಳಿ ಗ್ರಾಮಗಳ ಮೂಲಕ ಶ್ರೀರಂಗಪಟ್ಟಣಕ್ಕೆ ಪಾದಯಾತ್ರೆ ಬಂದಾಗ, ತಾಲೂಕು ಕಾವೇರಿ ಹಿತ ರಕ್ಷಣಾ ಸಮಿತಿ ಸದಸ್ಯರು ಪ್ರತಿಭಟನಾಕಾರರನ್ನು ಭವ್ಯವಾಗಿ ಸ್ವಾಗತಿಸಿದರು. ಪಾದಯಾತ್ರೆ ಮಾಡುವ ರೈತರಿಗೆ ರಸ್ತೆ ಉದ್ದಕ್ಕೂ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿತ್ತು. [ತಮಿಳುನಾಡಿಗೆ ನೀರು ಬಿಟ್ಟಿದ್ದಕ್ಕೆ ಮಂಡ್ಯ ರೈತರು ಫುಲ್ ಗರಂ]
ಪಾದಯಾತ್ರೆಯಲ್ಲಿ ಪಿಎಸ್ಎಸ್ಕೆ ನಿರ್ದೇಶಕ ಪಾಂಡು, ಬಾಲಣ್ಣ, ರಮೇಶ್, ಜವರೇಗೌಡ, ಕಿರಂಗೂರು ಮಹದೇವು, ನಾಗೇಂದ್ರ, ತಾಲೂಕು ರೈತ ಸಂಘದ ಅಧ್ಯಕ್ಷ ಕೃಷ್ಣೇಗೌಡ, ಕೆಂಪೇಗೌಡ, ರಾಮಚಂದ್ರ, ವಸಂತ್ ಕುಮಾರ್, ಬೆಳಗೊಳ ಸುನೀಲ್, ಮಹದೇವು, ಪಿಲಿಪ್ಸ್, ಭೀಮಣ್ಣ, ಬಾಲಕೃಷ್ಣ, ರವಿ ಸೇರಿದಂತೆ 30ಕ್ಕೂ ಹೆಚ್ಚು ರೈತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.