ನೀರು ಬಿಟ್ರೆ ಸಿಎಂ ಹಿಡ್ಕೊಂಡು ಹೊಡಿತೀವಿ : ಜಿಎಂ ಎಚ್ಚರಿಕೆ
ಮಂಡ್ಯ, ಸೆಪ್ಟೆಂಬರ್ 28 : ಸುಪ್ರೀಂ ಕೋರ್ಟ್ನ ಆದೇಶ ಧಿಕ್ಕರಿಸಬೇಕು, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೇಳಿದ್ದೇವೆ. ಒಂದು ವೇಳೆ ಬಿಟ್ಟರೆ ಅವರನ್ನು ಹಿಡ್ಕೊಂಡು ಹೊಡಿತೀವಿ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ವಿಧಾನಸೌಧದಲ್ಲಿ ಕಾವೇರಿ ವಿಚಾರವಾಗಿ ನಡೆದ ಸರ್ವಪಕ್ಷ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಏಕೆ ನಿರ್ಧಾರ ತೆಗೆದುಕೊಂಡಿಲ್ಲ ಎನ್ನುವುದು ನನಗೆ ಗೊತ್ತಿಲ್ಲ, ಅವರನ್ನೇ ಕೇಳಿ. ಯಾವುದೇ ಕಾರಣಕ್ಕೂ ನೀರನ್ನು ಬಿಡಬಾರದು ಎಂದು ನಾವು ಹೇಳಿದ್ದೇವೆ, ಬಿಟ್ಟರೆ ಚಳವಳಿ ಮಾಡುತ್ತೇವೆ. ನಮಗೆ ಉಳಿದಿರೋದು ಇವೆರಡೇ ದಾರಿ ಎಂದರು.

ಬೆಳೆ ಪರಿಹಾರ ಕೊಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದು, ಈ ಬಗ್ಗೆ ಅಧಿಕಾರಿಗಳಿಂದ ಸಮೀಕ್ಷೆ ನಡೆಸುವುದಾಗಿ ಹೇಳಿದ್ದಾರೆ. ಕೊಡೋ ತನಕ ಕಾಯೋಣ ಎಂದು ಮಾದೇಗೌಡರು ಹೇಳಿದರು.
ಅಂಬರೀಶ್ ಬಗ್ಗೆ ಕೇಳಲೇ ಬೇಡಿ : ಅಂಬರೀಶ್ ಮತ್ತು ರಮ್ಯಾ ಬಗ್ಗೆ ನನ್ನ ಬಳಿ ಕೇಳಲೇ ಬೇಡಿ. ಸಿಎಂ ಅವರನ್ನು ನೀವೇ ಕೇಳಿ, ಅಂಬರೀಶ್, ರಮ್ಯಾ ಎಲ್ಲಿದ್ದಾರೆ ಹಿಡಿದುಕೊಡಿ ಅಂತ. ಅವರನ್ನು ಮಂಡ್ಯಕ್ಕೆ ಬರದೆ ಅವಿತುಕೊಳ್ಳಿ ಎಂದು ನಾನೇಳಿದ್ದೀನಾ? ಎಂದು ಮಾರ್ಮಿಕವಾಗಿ ನುಡಿದರು.
ಸುಪ್ರೀಂಗೆ ತನ್ನ ತಪ್ಪಿನ ಅರಿವಾಗಿದೆ : ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಿಗೆ ತಮ್ಮ ತಪ್ಪಿನ ಅರಿವಾಗಿದ್ದು, ಇದರಿಂದಲೇ ಕೇಂದ್ರದ ಮಧ್ಯಸ್ಥಿಕೆಗೆ ಸೂಚಿಸಿದ್ದಾರೆ ಎಂದು ಮೇಲುಕೋಟೆ ಕ್ಷೇತ್ರದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಹೇಳಿದರು.

ಸರ್ಕಾರ ಕುಡಿಯುವ ನೀರಿನ ಬಗ್ಗೆ ನ್ಯಾಯಾಲಯದಲ್ಲಿ ಮಾತನಾಡುತ್ತಿದೆ. ಕೃಷಿಗೂ ನೀರು ಬೇಕು ಎಂಬುದನ್ನು ಮನವರಿಕೆ ಮಾಡಿಕೊಡಲು ವಿಫಲವಾಗುತ್ತಿದೆ. ನಮಗೆ ನಾಲೆಗಳಿಗೆ ನೀರು ಬೇಕು. ಕೃಷಿ ಜ್ಞಾನ ಪ್ರಕೃತಿ ಜ್ಞಾನ ಇಲ್ಲದವರು ಅವೈಜ್ಞಾನಿಕ ತೀರ್ಪು ನೀಡಬಾರದು. ನೀರು ಬಿಡುವುದು ದನದ ವ್ಯಾಪಾರದ ರೀತಿಯಲ್ಲ ಎಂದು ಛೇಡಿಸಿದರು.
ತಕ್ಷಣವೇ ನಾಲೆಗಳಿಗೆ ನೀರು ಹರಿಸುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದೇನೆ. ನೀರು ಬಿಡುವುದಾಗಿ ಹೇಳಿದ್ದು, ಗುರುವಾರದೊಳಗೆ ನೀರು ಬಿಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಪ್ರಕೃತಿಯಲ್ಲಿ ಇರುವ ಎಲ್ಲಾ ಪ್ರಾಣಿ ರಕ್ಷಣೆಗೆ ನೀರು ಬೇಕು. ವನ್ಯ ಜೀವಿಗಳ ಬಗ್ಗೆ ಯಾಕೆ ನ್ಯಾಯಾಲಯಗಳು ಯೋಚಿಸುತ್ತಿಲ್ಲ. ಕಾವೇರಿ ಸಮಿತಿ, ಕರ್ನಾಟಕ ಪರವಾಗಿ ಇರುವ ವಕೀಲರ ತಂಡ, ನೀರಾವರಿ ತಜ್ಞರ ತಂಡ ಏನು ಮಾಡುತ್ತಿದ್ದಾರೆ. ನೀರು ಬೇಕು ಎನ್ನುವವರು ಕೋರ್ಟ್ಗೆ ಹೋಗುವವರೆಗೂ ಇವರು ಏನು ಮಾಡುತ್ತಿರುತ್ತಾರೆ. ನಮ್ಮಲ್ಲಿ ನೀರಿಲ್ಲ ಎಂಬ ಬಗ್ಗೆ ಮನವರಿಕೆ ಮಾಡಲು ಏಕೆ ತಡಮಾಡುತ್ತಾರೆ ಎಂದು ಪ್ರಶ್ನಿಸಿದರು.
ಅಂಬಿ ದೂರವಿರುವುದು ತಪ್ಪು : ಶಾಸಕನಾದ ಮೇಲೆ ಅಂಬರೀಶ್ ಸಚಿವರಾಗಿರುವುದು. ಸಚಿವ ಸ್ಥಾನ ತಪ್ಪಿತು ಎಂಬ ಕಾರಣಕ್ಕೆ ಜಿಲ್ಲೆಯಿಂದ ದೂರ ಇರುವುದು ಸರಿಯಲ್ಲ. ರಾಜೀನಾಮೆಯಿಂದ ಏನೂ ಪ್ರಯೋಜನವಿಲ್ಲ. ಇಂತಹ ಸ್ಥಿತಿಯಲ್ಲಿ ಅವರು ಜಿಲ್ಲೆಯ ಜನರ ಜೊತೆ ಇರಬೇಕಿತ್ತು ಎಂದರು.
ವಿಜೃಂಭಣೆಯ ದಸರಾ ಬೇಡ : ಭೀಕರ ಬರಗಾಲದ ಹಿನ್ನೆಲೆಯಲ್ಲಿ ವಿಜೃಂಭಣೆಯ ದಸರಾ ಹಬ್ಬ ಮಾಡಬೇಕಾದ ಅವಶ್ಯಕತೆಯಿಲ್ಲ. ಸಾಂಕೇತಿಕವಾಗಿ ಪೂಜೆ ಮಾಡಿ ಆಚರಿಸಲಿ. ಅದನ್ನೇ ದೊಡ್ಡದಾಗಿ, ವೈಭವಯುತವಾಗಿ ದುಂದುವೆಚ್ಚ ಮಾಡುವ ಅವಶ್ಯಕತೆಯಿಲ್ಲ ಎಂದರು.












Click it and Unblock the Notifications