ಕುಸಿಯುವ ಭೀತಿಯಲ್ಲಿ ಶಿಂಷಾ ನದಿಯ ಸೇತುವೆ, ಸ್ಥಳೀಯರು ಏನ್ ಹೇಳ್ತಾರೆ?
ಮಂಡ್ಯ, ನವೆಂಬರ್.04: ಮಳವಳ್ಳಿ ತಾಲೂಕಿನ ಶಿಂಷಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸ್ವಾತಂತ್ರ್ಯ ಪೂರ್ವದ ಸೇತುವೆ ಶಿಥಿಲಾವಸ್ಥೆಗೆ ತಲುಪಿದ್ದು, ಯಾವಾಗ ಕುಸಿದು ಬೀಳುತ್ತೋ ಎಂಬ ಭಯದಲ್ಲಿಯೇ ಇದರ ಮೇಲೆ ವಾಹನವನ್ನು ಚಲಾಯಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಚಾಲಕರದ್ದಾಗಿದೆ.
ರಾಷ್ಟ್ರೀಯ ಹೆದ್ದಾರಿ-209ರ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿ ಗ್ರಾಮದಲ್ಲಿ ಶಿಂಷಾ ನದಿಗೆ ಮೈಸೂರು ಮಹಾರಾಜರ ಕಾಲದಲ್ಲಿ ಅಂದರೆ 1939ರಲ್ಲಿ ನಿರ್ಮಿಸಲಾಗಿದ್ದು ಎನ್ನಲಾದ ಈ ಸೇತುವೆ ಸುಮಾರು ಎಂಟು ದಶಕಗಳನ್ನು ಸವೆಸಿದ್ದು, ಇದುವರೆಗೆ ಕೋಟ್ಯಂತರ ವಾಹನಗಳು ಈ ಸೇತುವೆ ಮೇಲೆ ಹಾದು ಹೋಗಿವೆ.
ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಈ ಸೇತುವೆಯತ್ತ ಸಂಬಂಧಿಸಿದವರು ನಿರ್ಲಕ್ಷ್ಯ ವಹಿಸಿರುವುದು ಎದ್ದು ಕಾಣುತ್ತಿದೆ. ಪರಿಣಾಮ ಸೇತುವೆ ಮೇಲ್ಭಾಗದಲ್ಲಿ ಹೊಂಡ ಬಿದ್ದಿದೆಯಲ್ಲದೆ, ಬಸ್, ಲಾರಿ ತೆರಳಿದರೆ ಸೇತುವೆ ಅಲ್ಲಾಡಿದ ಅನುಭವವಾಗುತ್ತದೆ.
ಇಷ್ಟಕ್ಕೂ ಈ ಸೇತುವೆಗೆ ತನ್ನದೇ ಆದ ಇತಿಹಾಸವಿದೆ. ಸ್ವಾತಂತ್ರ್ಯಪೂರ್ವದಲ್ಲಿ ಅದರಲ್ಲೂ ಮೈಸೂರು ಮಹಾರಾಜ ಕೃಷ್ಣರಾಜೇಂದ್ರ ಒಡೆಯರ್ ಅವರ ಕಾಲದಲ್ಲಿ ನಿರ್ಮಿಸಿದ್ದು ಎನ್ನಲಾಗಿದೆ. ಈ ಸೇತುವೆ ನಿರ್ಮಾಣಕ್ಕೂ ಮುನ್ನ ಜನ ತೆಪ್ಪದ ಮೂಲಕ ಶಿಂಷಾ ನದಿಯನ್ನು ದಾಟುತ್ತಿದ್ದರಂತೆ.
ಇದನ್ನು ಅರಿತ ಕೃಷ್ಣರಾಜೇಂದ್ರ ಒಡೆಯರ್ ಅವರು ಆ ಕಾಲದಲ್ಲಿಯೇ ಕಬ್ಬಿಣದ ಸರಳು, ಸಿಮೆಂಟ್ ಬಳಸಿ ಸೇತುವೆಯನ್ನು ನಿರ್ಮಾಣ ಮಾಡಿ 29-06-1939ರಲ್ಲಿ ಸೇತುವೆಯನ್ನು ಉದ್ಘಾಟಿಸಿದರು ಎನ್ನುವುದು ಇತಿಹಾಸದಿಂದ ತಿಳಿದು ಬರುತ್ತದೆ.

ಸಂಚಾರಕ್ಕೆ ಪರದಾಡುವ ಸ್ಥಿತಿ ನಿರ್ಮಾಣ
ಈ ಸೇತುವೆ ನಿರ್ಮಾಣದಿಂದಾಗಿ ಬೆಂಗಳೂರಿನಿಂದ ಮಳವಳ್ಳಿ, ಕೊಳ್ಳೇಗಾಲ, ಮೈಸೂರಿಗೆ ತೆರಳಲು ಅನುಕೂಲವಾಗಿದೆ. ಒಂದು ವೇಳೆ ಈ ಸೇತುವೆಯನ್ನು ದುರಸ್ತಿ ಮಾಡದೆ ಹೋದರೆ ಸಂಚಾರಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾದರೆ ಅಚ್ಚರಿಪಡಬೇಕಾಗಿಲ್ಲ.

ಸ್ಥಳೀಯರು ಹೇಳುವುದೇನು?
ಸೇತುವೆಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಒಳಪಟ್ಟಿದ್ದು ಸಂಬಂಧಿಸಿದ ಅಧಿಕಾರಿಗಳು ಇದರತ್ತ ಗಮನಹರಿಸಬೇಕಾಗಿದೆ. ಸೇತುವೆಗೆ ಹಾನಿಯಾದರೆ, ಬೆಂಗಳೂರಿನಿಂದ ಮಳವಳ್ಳಿ, ಕೊಳ್ಳೇಗಾಲ, ಮೈಸೂರಿಗೆ ಹೋಗುವವರು ಹಲಗೂರಿನಿಂದ ಯತ್ತಂಬಾಡಿ ಮಾರ್ಗವಾಗಿ ಅಂತರವಳ್ಳಿ, ದಡಮಹಳ್ಳಿ ಮುಖಾಂತರ ಪುರದದೊಡ್ಡಿ ಮುಖ್ಯರಸ್ತೆಗೆ ಬಂದು ಹೋಗಬೇಕಾಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

ಅಪಾಯ ತಪ್ಪಿದ್ದಲ್ಲ
ಇದೀಗ ಸೇತುವೆಯಲ್ಲಿ ಗುಂಡಿ ಬಿದ್ದಿರುವ ಕಡೆ ಸಿಮೆಂಟ್ ಹಾಕಿ, ಸೇತುವೆ ಕೆಳ ಭಾಗದಲ್ಲಿ ಕಬ್ಬಿಣದ ರಾಡುಗಳನ್ನು ಆಧಾರವಾಗಿಟ್ಟು ಸಿಮೆಂಟ್ ಕಂಬಗಳನ್ನು ಸೇತುವೆ ಕೆಳಭಾಗದಿಂದ ಒತ್ತು ನೀಡಿ ತಾತ್ಕಾಲಿಕವಾಗಿ ಸುರಕ್ಷತೆಯನ್ನು ವಹಿಸಲಾಗಿದೆಯಾದರೂ ಅಪಾಯ ತಪ್ಪಿದ್ದಲ್ಲ ಎಂಬುದನ್ನು ಮರೆಯುವಂತಿಲ್ಲ.

ನೂತನ ಸೇತುವೆ ನಿರ್ಮಾಣ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇತ್ತ ಗಮನಹರಿಸಿದ್ದೇ ಆದರೆ ಹಳೆಯ ಸೇತುವೆಯನ್ನು ಉಳಿಸಿಕೊಳ್ಳಬಹುದಾಗಿದೆ. ಆದರೆ ಇದೀಗ ಹಳೆಯ ಸೇತುವೆ ಪಕ್ಕವೇ ಹೊಸ ಸೇತುವೆ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಅತೀ ಶೀಘ್ರದಲ್ಲೇ ನೂತನ ಸೇತುವೆ ನಿರ್ಮಾಣವಾಗಲಿದೆ. ಅಲ್ಲಿಯವರೆಗೂ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮಕೈಗೊಳ್ಳುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ.
ಹಳೆ ಸೇತುವೆ ದುರಸ್ತಿ ಮಾಡುವುದಕಿಂತ ಹೆಚ್ಚಾಗಿ ಹೊಸ ಸೇತುವೆ ನಿರ್ಮಾಣ ತ್ವರಿತಗತಿಯಲ್ಲಿ ಸಾಗಬೇಕು ಎಂಬುದು ಸ್ಥಳೀಯರು ಮತ್ತು ವಾಹನ ಚಾಲಕರ ಅಭಿಪ್ರಾಯವಾಗಿದೆ.












Click it and Unblock the Notifications