ನಮ್ಮಪ್ಪನಾಣೆಗೂ ಬಿಜೆಪಿ ಅಧಿಕಾರಕ್ಕೆ ಬರಲ್ಲ: ಸಿದ್ದರಾಮಯ್ಯ
ಗುಂಡ್ಲುಪೇಟೆ-ನಂಜನಗೂಡು ಉಪಚುನಾವಣೆಯನ್ನು ಮುಂದಿನ ವಿಧಾನಸಭೆ ಚುನಾವಣೆಯ ದಿಕ್ಸೂಚಿ ಎಂದು ಹೇಳಿಕೊಂಡು ಓಡಾಡಿದವರು ಬಿಜೆಪಿಯವರು. ಹಾಗಿದ್ದರೆ ಮುಂದೆ ಅದು ಅಧಿಕಾರಕ್ಕೆ ಬರಲ್ಲ ಎಂದಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಂಡ್ಯ, ಏಪ್ರಿಲ್ 21: 150 ಮಿಷನ್ ನಡಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿರುವ ಬಿಜೆಪಿಗೆ ಟಾಂಗ್ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಂದಿನ 2018ರ ಚುನಾವಣೆಯಲ್ಲಿ ಬಿಜೆಪಿ ನಮ್ಮಪ್ಪನಾಣೆಗೂ ಅಧಿಕಾರಕ್ಕೆ ಬರೊಲ್ಲ ಎಂದಿದ್ದಾರೆ.
ಮಳವಳ್ಳಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣೆಯನ್ನು ಮುಂದಿನ 2018ರ ಚುನಾವಣೆಯ ದಿಕ್ಸೂಚಿ ಅಂತ ನಾವೇನೂ ಹೇಳಿರಲಿಲ್ಲ. ಯಡಿಯೂರಪ್ಪ ಆದಿಯಾಗಿ ಅನೇಕರು ಆ ಮಾತನ್ನು ಹೇಳಿದ್ದರು. ಅವರ ಮಾತನ್ನು ನಂಬುವುದಾದರೆ 2018ರ ಚುನಾವಣಾ ದಿಕ್ಸೂಚಿ ನಮ್ಮ ಕಡೆಗಿದೆ ಎಂದರು.[ಬಿಜೆಪಿಯವರ ಪ್ರತಿಭಟನೆ, ಎಸ್ಪಿಗೆ ಬೈಗುಳ: ಇದು ಸಿಎಂ ಸಿದ್ದರಾಮಯ್ಯ ನ್ಯಾಯ!]
ಮುಂದಿನ ಚುನಾವಣೆಯಲ್ಲಿ ನಂಜನಗೂಡು, ಗುಂಡ್ಲುಪೇಟೆ ಮಾತ್ರವಲ್ಲ. ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬರೊಲ್ಲ. ಮುಂದೆ ಅಧಿಕಾರಕ್ಕೆ ಬರುವುದು ನಮ್ಮ ಸರಕಾರವೇ ಎಂದರು. ಈ ನಡುವೆ ಜನವಾದಿ ಸಂಘಟನೆಯ ಕಾರ್ಯಕರ್ತರು ರೈತರ ಕೃಷಿ ಸಾಲವನ್ನು ಮನ್ನಾ ಮಾಡಬೇಕು ಹಾಗೂ ಬಗರ್ ಹುಕುಂ ಸಾಗುವಳಿ ಸೇರಿದಂತೆ ಮಳವಳ್ಳಿ ತಾಲೂಕಿನ ಸಮಸ್ಯೆ ಬಗೆಹರಿಸುವಂತೆ ಮನವಿಯನ್ನು ಸಲ್ಲಿಸಿದರು.
ಇದಕ್ಕೆ ಉತ್ತರಿಸಿದ ಅವರು, ನನ್ನನ್ನು ಯಾಕೆ ಕೇಳ್ತೀರಿ, ಕೇಂದ್ರ ಸರಕಾರವನ್ನು ಕೇಳ್ರಯ್ಯ. ಸಾಲ ಮನ್ನಾ ಮಾಡೋಕೆ ನಾನು ತಯಾರಿದ್ದೇನೆ. ಆದರೆ ಕೇಂದ್ರ ಸರ್ಕಾರ ಮುಂದೆ ಬರುತ್ತಿಲ್ಲ. ರಾಷ್ಟ್ರೀಕೃತ ಬ್ಯಾಂಕ್ ಗಳಿಂದ 42 ಸಾವಿರ ಕೋಟಿ ರುಪಾಯಿ ಸಾಲ ನೀಡಲಾಗಿದೆ. ಶೇ 22ರಷ್ಟು ಮಾತ್ರ ಸಹಕಾರ ಬ್ಯಾಂಕ್ ನಿಂದ ರೈತರಿಗೆ ಸಾಲ ನೀಡಲಾಗಿದೆ ಎಂದರು.[ಸಿದ್ದರಾಮಯ್ಯ ಕೈಗೆ ಫುಲ್ ಪವರ್ : ದಿಗ್ವಿಜಯ್ ಸಿಂಗ್]
ನಾನು ನರೇಂದ್ರ ಮೋದಿ ಅವರ ಬಳಿ ಹೋಗಿ ಸಾಲ ಮನ್ನಾ ಮಾಡಿ ಎಂದು ಮನವಿ ಮಾಡಿದ್ದೇನೆ. ಆದರೆ ಇವತ್ತಿನ ವರೆಗೂ ಮೋದಿ ಜಪ್ಪಯ್ಯ ಅಂತಿಲ್ಲ ಎಂದು ಹೇಳುವ ಮೂಲಕ ಸಾಲ ಮನ್ನಾ ಮಾಡಲ್ಲ ಎಂಬುದನ್ನು ರೈತರಿಗೆ ಮನದಟ್ಟು ಮಾಡಿದರು.