ಸೋನಿಯಾ ಸಮೋಸಾ, ರಾಹುಲ್ ರಸಗುಲ್ಲಾ, ರಮ್ಯಾ ರವೆ ಉಂಡೆ ಎರಡೇ ರುಪಾಯಿ
Recommended Video

ಮಂಡ್ಯ, ಫೆಬ್ರವರಿ 9: ಸೋನಿಯಾ ಸಮೋಸಾ, ರಾಹುಲ್ ರಸಗುಲ್ಲಾ, ರಮ್ಯಾ ರವೆ ಉಂಡೆ, ಸಿದ್ದು ಸುಕ್ಕಿನುಂಡೆ...ಯಾವುದು ತಗೊಂಡರೂ ಎರಡೇ ರುಪಾಯಿ, ಎರಡೇ ರುಪಾಯಿ. ಹೀಗೆ ಖಾದ್ಯಗಳಿಗೆ ಕಾಂಗ್ರೆಸ್ ಮುಖಂಡರ ಹೆಸರನ್ನು ಇರಿಸಿ, ಮಾರಾಟ ಮಾಡಿದ್ದು ಮಂಡ್ಯದಲ್ಲಿ. ಮಾರಿದವರು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು.
ಪಕೋಡ ಮಾರುವುದಕ್ಕಿಂತ ಭಿಕ್ಷೆ ಬೇಡುವುದು ಲೇಸು ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ನೀಡಿದ ಹೇಳಿಕೆಗೆ ಬಿಜೆಪಿಯಿಂದ ಪ್ರತಿಭಟನೆ ವ್ಯಕ್ತವಾಯಿತು. ಪಕೋಡ- ಟೀ ಮಾರುವುದು, ವ್ಯವಸಾಯ ಮಾಡುವುದು ಒಂದು ಉದ್ಯೋಗ ಎಂದು ಮೋದಿ ಹೇಳಿದ್ದನ್ನು ಕಾಂಗ್ರೆಸ್ ಪ್ರಚೋದಿತ ಕೆಲ ಯುವಕರ ತಂಡ, ಈ ದೇಶದಲ್ಲಿ ಯುವಕರಿಗೆ ಮೋದಿ ಕೈ ಗೆ ಚಿಪ್ಪು ಕೊಡುತ್ತಾರೆ ಎಂದು ಸುಳ್ಳು ಹಬ್ಬಿಸುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.
ಕೇಂದ್ರ ಸರಕಾರವು ಕೌಶಲ ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಂಡು, ದೇಶದ ತರುಣರಿಗೆ ತರಬೇತಿ ನೀಡಿ, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಹೊರಟಿರುವುದು ಕಾಂಗ್ರೆಸ್ಸಿಗರಿಗೆ ಕಾಣಲಿಲ್ಲವೇ ಎಂದು ಪ್ರತಿಭಟನಾನಿರತರು ಪ್ರಶ್ನಿಸಿದರು.

ಇಂಡಿಯನ್ ಪೀನಲ್ ಕೋಡ್ ಬರೆದ ಲಾರ್ಡ್ ಮೆಕಾಲೆ ಎಲ್ಎಲ್ ಬಿ ಪದವಿ ಪಡೆದಿದ್ದರೆ, ಬಲ್ಬ್ ಕಂಡುಹಿಡಿದ ಥಾಮಸ್ ಆಲ್ವಾ ಎಡಿಸನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದರೆ, ಟೈಪ್ ರೈಟರ್ ಕಂಡುಹಿಡಿದ ಲ್ಯಾಥಮ್ ಸೊಲ್ ಟೈಪಿಂಗ್ ಸೀನಿಯರ್ ಪಾಸ್ ಮಾಡಿದ್ದರೆ ಎಂದು ಕೇಳಿದರು.
ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಆಡಳಿತ ಮಾಡಿದ ಕಾಂಗ್ರೆಸ್ ಪಕ್ಷ ಈ ದೇಶದ ಯುವಕರಿಗೆ ಕೊಟ್ಟ ಉದ್ಯೋಗವೆಷ್ಟು? ಮೊದಲು ಕಾಂಗ್ರೆಸ್ಸಿಗರು ಬಹಿರಂಗ ಪಡಿಸಲಿ. ಸ್ವಾಭಿಮಾನಿ ಬದುಕನ್ನು ಬದುಕುತ್ತಿರುವ ಶ್ರಮಿಕರನ್ನು ಈ ಕೂಡಲೇ ಚಿದಂಬರಂ ಕ್ಷಮೆ ಕೇಳಲಿ ಎಂದು ಆಗ್ರಹಿಸಿದರು.












Click it and Unblock the Notifications