ಭಾರತ್ ಜೋಡೋ ಯಾತ್ರೆಯಿಂದ ಕಾಂಗ್ರೆಸ್ಗೆ ಭಾರತದ ಸತ್ಯದರ್ಶನವಾಗಲಿದೆ: ಸಿ.ಟಿ. ಮಂಜುನಾಥ್
ಮಂಡ್ಯ, ಸೆಪ್ಟೆಂಬರ್, 08: ರಾಹುಲ್ ಗಾಂಧಿ ಅವರ "ಭಾರತ್ ಜೋಡೋ" ಯಾತ್ರೆಯನ್ನು ಸ್ವಾಗತಿಸಿ. ಈಗಲಾದರೂ ಕಾಂಗ್ರೆಸ್ ಇಂತಹ ಮಹತ್ವದ ಕಾರ್ಯವನ್ನು ಮಾಡಲು ಹೊರಟಿದೆ. ಇದರಿಂದ ಆತ್ಮನಿರ್ಭರ ಭಾರತದ ಸತ್ಯದರ್ಶನ ಆಗಲಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್ ಮಂಡ್ಯದಲ್ಲಿ ತಿಳಿಸಿದ್ದಾರೆ.
ಹಿಂದೆಲ್ಲ ರಾಜ ಮಹಾರಾಜರು ತಮ್ಮ ದೇಶ ಪರ್ಯಟನೆಗೆ ಮಾರುವೇಷದಲ್ಲಿ ತೆರಳಿ ಜನರ ಸಂಕಷ್ಟ ಮತ್ತು ಸುಭಿಕ್ಷೆಯ ಕುರಿತು ಪರಿಚಯ ಮಾಡಿಕೊಳ್ಳುತ್ತಿದ್ದರು. ರಾಹುಲ್ ಗಾಂಧಿಗೆ ಈ ಯಾತ್ರೆಯ ಮೂಲಕ ಪ್ರಸಕ್ತ ಭಾರತದ ಸ್ಥಿತಿಗತಿಯ ಪರಿಚಯ, ಭಾರತ ಮೋದಿ ಅವರ ನೇತೃತ್ವದಲ್ಲಿ ಎಷ್ಟೆಲ್ಲ ಅಭಿವೃದ್ಧಿ ಹೊಂದಿದೆ ಎಂಬುದರ ಅರಿವು ಆಗಬಹುದು. ಯಾತ್ರೆಯ ಮಧ್ಯದಲ್ಲೇ ಅವರಿಗೆ ಅರಿವು ಆಗಬಹುದು ಎಂದು ವ್ಯಗ್ಯವಾಡಿದರು.
ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ; ತಯಾರಿ ಹೇಗಿರಲಿದೆ?
ಕಾಂಗ್ರೆಸ್ಸಿಗರಿಗೆ "ಭಾರತ್ ಜೋಡೋ" ಪಾದಯಾತ್ರೆ ಅತ್ಯಂತ ಅವಶ್ಯಕವಾಗಿತ್ತು. ಅವರಿಗೆ ಇದರಿಂದ ಬದಲಾದ ಭಾರತವನ್ನು ಕಣ್ಣಾರೆ ಕಾಣುವ ಅವಕಾಶ ಸಿಗಲಿದೆ. ಭಾರತದ ಬದಲಾವಣೆ, ಪರಿವರ್ತನೆಗಳು, ಭ್ರಷ್ಟಾಚಾರ ನಿರ್ಮೂಲನೆ, ಡಿಜಿಟಲ್ ಕ್ರಾಂತಿ, ಆತ್ಮನಿರ್ಭರತೆ, ಈ ದೇಶ ಕೋವಿಡ್ ಎದುರಿಸಿರುವ ಬಗ್ಗೆ ಹಾಗೂ ಭಾರತವು ಜಗತ್ತಿನ ರಾಜಕೀಯ ರಂಗದೊಳಗೆ ಇಷ್ಟೊಂದು ಬಲವಾಗಿದೆ ಎನ್ನುವುದರ ಪ್ರತ್ಯಕ್ಷ ಅನುಭವ ರಾಹುಲ್ ಗಾಂಧಿಯವರಿಗೆ ಆಗಲಿದೆ ಎಂದರು.
"ದೇಶದಲ್ಲಿ ನಮಗೆ ಬಲಿಷ್ಠ ವಿರೋಧ ಪಕ್ಷ ಬೇಕಿದೆ"
"ರಾಹುಲ್ ಗಾಂಧಿಯವರು ಮಹತ್ವಾಕಾಂಕ್ಷೆಯ ರಾಜಕೀಯ ಜೀವನದ ಬಹು ಎತ್ತರಕ್ಕೆ ಹೋಗಬೇಕಿದೆ. ಆದಷ್ಟು ಬೇಗ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷ ಪದವಿಯನ್ನು ಏರಬೇಕಿದೆ." ದೇಶದಲ್ಲಿ ಒಂದು ಬಲಿಷ್ಠ ವಿರೋಧ ಪಕ್ಷವೂ ನಮಗೆ ಬೇಕಿದೆ ಎಂದು ತಿಳಿಸಿದರು.
ಪ್ರದೇಶಗಳ ವಿಭಜನೆಗೆ ನೆಹರು ನಿಲುವು ಕಾರಣ
ಮಾಜಿ ಪ್ರಧಾನಿ ನೆಹರು ಅವರು ಮಾಡಿದ ಅನೇಕ ತಪ್ಪು ನಿರ್ಧಾರಗಳಿಂದಾಗಿ, ಭಾರತದಿಂದ ಬೇರೆ ಬೇರೆ ಪ್ರದೇಶಗಳು ದೂರ ಹೋದವು ಎನ್ನುವ ಸತ್ಯದ ಅರಿವು ರಾಹುಲ್ ಗಾಂಧಿಯವರಿಗೆ ಆಗಬೇಕಿದೆ. ಸ್ವಲ್ಪ ಪ್ರಯತ್ನ ಮಾಡಿದ್ದರೂ ಲಾಹೋರ್, ಬಲೂಚಿಸ್ತಾನ ನಮ್ಮ ದೇಶದೊಳಗೇ ಇರುತ್ತಿದ್ದವು. ಇದು ಕಾಂಗ್ರೆಸ್ ಯುವ ಮುಖಂಡನಿಗೆ ಅರ್ಥ ಆಗಬೇಕಿದೆ. ಬಾಂಗ್ಲಾ ದೇಶದ ಉದಯದ ವೇಳೆ ಮನಸ್ಸು ಮಾಡಿದ್ದರೆ ಅನೇಕ ಪ್ರದೇಶಗಳು, ನಾನಕ್ ದೇವರ ಜಾಗ ಭಾರತಕ್ಕೆ ಸೇರಿಸಬಹುದಿತ್ತು. ಅಂದೇ ರಾಷ್ಟ್ರಗಳ ಜೋಡಣೆಯ ಮನಸ್ಸನ್ನು ಮಾಡಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಹುಲ್ ಬಗ್ಗೆ ಮಂಜುನಾಥ್ ಅಭಿಪ್ರಾಯ
500 ವರ್ಷಗಳಿಗೂ ಹೆಚ್ಚು ಕಾಲ ದಾಸ್ಯದಲ್ಲಿದ್ದ ಶ್ರೀರಾಮನ ಜನ್ಮಸ್ಥಳದಲ್ಲಿ ಭವ್ಯ ರಾಮಮಂದಿರ ನಿರ್ಮಿಸುವ ಮೂಲಕ ಎಲ್ಲ ಪ್ರದೇಶವನ್ನೂ ಜೋಡಿಸುವ ಕೆಲಸ ಮಾಡುತ್ತಿದ್ದೇವೆ. ಭಾರತವನ್ನು 3 ಬಾರಿ ಪರ್ಯಟನೆ ಮಾಡಿದ ಆದಿಶಂಕರಾಚಾರ್ಯ ಪ್ರತಿಮೆಯನ್ನು ಕೇದಾರನಾಥದಲ್ಲಿ ಸ್ಥಾಪಿಸಿ ಹಿಂದೂಗಳ ಭಾವನೆಯನ್ನು ಅರಳಿಸುವ ಕೆಲಸವನ್ನು ಮಾಡಿದ್ದೇವೆ. ಕಾಂಗ್ರೆಸ್ನಿಂದ ಕಡೆಗಣಿಸಲ್ಪಟ್ಟ ಸಂವಿಧಾನ ಶಿಲ್ಪಿ ಮಹಾನ್ ನಾಯಕ ಡಾ. ಬಿ.ಆರ್. ಅಂಬೇಡ್ಕರ್ ಅವರ ಪಂಚತೀರ್ಥಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಈ ಮೂಲಕ ಎಲ್ಲ ಮನಸ್ಸುಗಳನ್ನೂ ಜೋಡಿಸುವ ಕೆಲಸವನ್ನು ಮಾಡಿದ್ದೇವೆ. ರಾಹುಲ್ ಗಾಂಧಿ ಅವರಿಗೆ ಈಗ ಜ್ಞಾನೋದಯ ಆಗಿದೆ ಎಂದರು.
"ಭಾರತ ಜೋಡೋ" ಬಗ್ಗೆ ಮಂಜುನಾಥ್ ಹೇಳಿದ್ದೇನು?
ಕಾಂಗ್ರೆಸ್ ಪಕ್ಷದ ಹಳೆಯ ಮತ್ತು ದಶಕಗಳ ಕಾಲ ಇದ್ದ ತನ್ನ ಕಾರ್ಯಕರ್ತರನ್ನು ಮರು ಜೋಡಣೆ ಮಾಡುವ ಪ್ರಯತ್ನವನ್ನು ಮಾಡುತ್ತಿದೆ. ಕಾಂಗ್ರೆಸ್ ಪಕ್ಷವನ್ನು ಹಳೆಯ ನಾಯಕರು ತೊರೆಯುತ್ತಿರುವ ಸಂದರ್ಭದಲ್ಲಿ ಇಂತಹ ಕಾರ್ಯಗಳು ಆಗಬೇಕಿದೆ. ಇದರಿಂದ ರಾಹುಲ್ ಗಾಂಧಿಯವರು "ಭಾರತ ಜೋಡೋ" ಯಾತ್ರೆ ಸಾರ್ಥಕವಾಗುತ್ತದೆ. ಜೊತೆಗೆ ಭಾರತಕ್ಕೆ ಸಮರ್ಥ ವಿರೋಧ ಪಕ್ಷವೂ ಹೊರ ಹೊಮ್ಮಲಿದೆ ಎಂದು ಅಭಿಪ್ರಾಯವನ್ನು ಹೊರಹಾಕಿದರು.