ಬಸವರಾಜ ಬೊಮ್ಮಾಯಿ ರಾಜ್ಯ ಕಂಡ ಅತ್ಯಂತ ದುರ್ಬಲ ಕಳಪೆ ಸಿಎಂ: ಸಿದ್ದು ಟೀಕೆ
ಮಂಡ್ಯ, ಅಕ್ಟೋಬರ್ 19 : ಬಸವರಾಜ ಬೊಮ್ಮಾಯಿ ಈ ರಾಜ್ಯ ಕಂಡ ಅತ್ಯಂತ ದುರ್ಬಲ ಹಾಗೂ ಕಳಪೆ ಮುಖ್ಯಮಂತ್ರಿ ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಅತ್ಯಾಚಾರ ಮತ್ತು ಕೊಲೆಗೀಡಾದ ಮಂಡ್ಯ ಜಿಲ್ಲೆ ಮಳವಳ್ಳಿಯ ಬಾಲಕಿಯ ಮನೆಗೆ ತೆರಳಲು ಪಟ್ಟಣಕ್ಕೆ ಆಗಮಿಸಿದ್ದ ವೇಳೆ ಖಾಸಗಿ ಹೋಟೆಲ್ನಲ್ಲಿ ಚಹಾ, ಮದ್ದೂರು ವಡೆ ಸೇವಿಸುತ್ತಾ ಸುದ್ದಿಗಾರರೊಂದಿಗೆ ಮಾತನಾಡಿದರು. ಯಾವಾಗಲೂ ಆಡಳಿತ ನಡೆಸುವವರ ಮೇಲೆ ಆರೋಪ ಬಂದರೆ ಜನರಿಗೆ ಸತ್ಯವನ್ನು ಹೇಳಬೇಕು. ನಿಮ್ಮ ಸರಕಾರದಲ್ಲೂ ಇರಲಿಲ್ಲವಾ ಎಂದರೆ ಏನರ್ಥ. ಸರಿ, ಹಾಗಾದರೆ ನಿಮ್ಮದು-ನಮ್ಮದು ಎರಡನ್ನೂ ಸೇರಿಸಿ ತನಿಖೆ ಮಾಡಿಸಿ ಎಂದು ಹೇಳ್ತಿದ್ದೀವಲ್ಲಾ, ಏಕೆ ಮಾಡಿಸುತ್ತಿಲ್ಲ? ಅದಕ್ಕೆಲ್ಲಾ ಧಮ್ ಮತ್ತು ನೈತಿಕತೆ ಬೇಕು ಎಂದರು.
ಬೊಮ್ಮಾಯಿ ಸಂಕಲ್ಪದಂತೆ 150 ಶಾಸಕರನ್ನು ಗೆಲ್ಲಿಸಿ: ಶ್ರೀರಾಮುಲು
ನಮ್ಮ ಸರಕಾರವಿದ್ದ ಸಮಯದಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣಗಳ ತನಿಖೆ ಮಾಡುವ ಅಧಿಕಾರ ಅವರಿಗೆ ಇದೆ. ಇವರು ಅಧಿಕಾರಕ್ಕೆ ಬಂದು ಮೂರು ವರ್ಷ ಆಯಿತು. ಇಲ್ಲಿಯವರೆಗೆ ಏನು ಮಾಡುತ್ತಿದ್ದರು. ಬಿಜೆಪಿ ಸರಕಾರದ 40 ಪರ್ಸೆಂಟ್ ಭ್ರಷ್ಟಾಚಾರ ತೆಗೆದ ಮೇಲೆ ಸುಳ್ಳು ಹೇಳೋಕೆ ಶುರು ಮಾಡಿದ್ದಾರೆ ಎಂದು ಮೂದಲಿಸಿದರು.
40% ಸರಕಾರ ಆರೋಪವನ್ನು ಸುಳ್ಳು ಮಾಡಲಿ
40 ಪರ್ಸೆಂಟ್ ಸರಕಾರ ಎಂದು ನಾವೇನು ಹೇಳಿದ್ದಲ್ಲ. ಕಂಟ್ರಾಕ್ಟರ್ಗಳೇ ಹೇಳಿದ್ದು. ತಾಕತ್ತಿದ್ದರೆ ಅದನ್ನು ಸುಳ್ಳು ಅಂತ ಸಾಬೀತುಪಡಿಸಲಿ. ಬೊಮ್ಮಾಯಿ ಸರಕಾರದ ಅವಧಿಯಲ್ಲಿ ಪಿಎಸ್ಐ ಸೇರಿದಂತೆ ಇನ್ನಿತರ ಹಗರಣಗಳಿಂದ ಭ್ರಷ್ಟಾಚಾರ ತುಂಬಿ ತುಳುಕುವಾಗ ನಿಮ್ಮ ಸರಕಾರದ ಹಗರಣಗಳನ್ನೂ ತನಿಖೆ ನಡೆಸುತ್ತೇವೆ ಎಂದರೆ ಇವರು ಸುಳ್ಳು ಹೇಳುತ್ತಿದ್ದಾರೆಂದು ಜನರಿಗೆ ಗೊತ್ತಾಗೋದಿಲ್ಲವೇ ಎಂದು ಕುಟುಕಿದರು.
ತನಿಖೆ ಮಾಡಿಸಲು ಧಮ್ ಬೇಕು
ಕಾಂಗ್ರೆಸ್ ಹೈಕಮಾಂಡ್ಗೆ ಕರ್ನಾಟಕ ಎಟಿಎಂ ಆಗಿತ್ತು ಎಂದು ಹಿಂದೆ ಯಾವಾಗಲಾದರೂ ಹೇಳಿದ್ರಾ. ವಿಪಕ್ಷದಲ್ಲಿದ್ದಾಗೇನು ಬಾಯಿಗೆ ಕಡುಬು ಸಿಗಿಸಿಕೊಂಡಿದ್ದರಾ? ಆಗಲೇ ಏಕೆ ಹೇಳಲಿಲ್ಲ. ಮೂರು ವರ್ಷ ಅಕಾರದಲ್ಲಿದ್ದ ಸಮಯದಲ್ಲೂ ಆ ಬಗ್ಗೆ ತನಿಖೆ ಮಾಡಿಸಲಿಲ್ಲವೇಕೆ. ಅದಕ್ಕೂ ಧಮ್ ಬೇಕು ಎಂದು ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು.
ಕಾಂಗ್ರೆಸ್ ಅವಧಿಯ ಭ್ರಷ್ಟಾಚಾರ ಹಗರಣಗಳನ್ನು ತನಿಖೆ ನಡೆಸುವುದಾಗಿ ಸುಮ್ಮನೆ ಹೆದರಿಸುತ್ತಾರಷ್ಟೇ. ಅವರ ಕೈಲಿ ಏನೂ ಆಗುವುದಿಲ್ಲ. 40 ಪರ್ಸೆಂಟ್ ಸರಕಾರ ಎಂಬ ಆರೋಪವನ್ನು ಅವರಿಂದ ಅರಗಿಸಿಕೊಳ್ಳಲಾಗುತ್ತಿಲ್ಲ ಅದಕ್ಕೆ ಸುಳ್ಳು ಹೇಳಿಕೊಂಡು, ನಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಎಲ್ಲಿ ಸ್ಪರ್ಧಿಸಬೇಕೆಂದು ನಿರ್ಧರಿಸಿಲ್ಲ
ನಾನು ಎಲ್ಲಿಂದ ಸ್ಪರ್ಧಿಸಬೇಕು ಎಂಬ ಬಗ್ಗೆ ನಾನಿನ್ನೂ ಯೋಚಿಸಿಲ್ಲ. ಡಿಸೆಂಬರ್ ಬಳಿಕ ಅಂತಿಮ ನಿರ್ಧಾರ ಮಾಡುತ್ತೇನೆ. ನನ್ನ ಮಗ ಡಾ.ಯತೀಂದ್ರ ತಂದೆ ಎಂಬ ಅಭಿಮಾನದಿಂದ ಕ್ಷೇತ್ರ ಬಿಟ್ಟುಕೊಡುವುದಾಗಿ ಹೇಳಿಬರಹುದು. ನಾನು ಆ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ನನ್ನನ್ನು ಕೋಲಾರ, ಬಾದಾಮಿ ಸೇರಿದಂತೆ ಹಲವು ಕಡೆಗಳಿಂದ ಸ್ಪರ್ಧಿಸುವಂತೆ ಆಹ್ವಾನ ನೀಡುತ್ತಿದ್ದಾರೆ. ಡಿಸೆಂಬರ್ ಕಳೆದ ಬಳಿಕ ನಾನು ಸ್ಪರ್ಧಿಸುವ ಕ್ಷೇತ್ರವನ್ನು ಅಂತಿಮಗೊಳಿಸುವೆ ಎಂದರು.
ಹತ್ಯೆಯಾದ ಬಾಲಕಿ ಕುಂಟಬಸ್ಥರಿಗೆ ಸಾಂತ್ವನ
ಅತ್ಯಾಚಾರ ಮತ್ತು ಕೊಲೆಗೀಡಾದ ಮಂಡ್ಯ ಜಿಲ್ಲೆ ಮಳವಳ್ಳಿಯ ಬಾಲಕಿಯ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಇಂಥಾ ಘಟನೆಗಳು ಮರುಕಳಿಸದಂತೆ ಸರಕಾರ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಅಪರಾಧಿಗೆ ಗರಿಷ್ಠ ಶಿಕ್ಷೆಯಾಗಬೇಕು. ಆಗ ಮಾತ್ರ ಅತ್ಯಾಚಾರದಂತಹ ರಾಕ್ಷಸಿ ಕೃತ್ಯಗಳನ್ನು ತಡೆಗಟ್ಟಲು ಸಾಧ್ಯ ಎಂದು ತಿಳಿಸಿದರು.
ಮಾಜಿ ಸಚಿವ ಎನ್.ಚಲುವರಾಯಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಶಿವಣ್ಣ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ನಾಗೇಗೌಡ, ಕಾಂಗ್ರೆಸ್ ವಕ್ತಾರ ಎಂ.ಪಿ.ಅಮರ್ಬಾಬು, ಮುಖಂಡರಾದ ಅರುಣ, ಸಿ.ಸಿ.ಮಹೇಶ್, ಗೋಪಿ, ಹೊಂಬಯ್ಯ ಇತರರಿದ್ದರು.