ಕೆ.ಆರ್.ಪೇಟೆ ಶಾಸಕರ ಮೇಲೆ ಹಲ್ಲೆಗೆ ಯತ್ನ, ಮೂವರಿಗೆ ಗಾಯ
ಕೆ.ಆರ್.ಪೇಟೆ (ಮಂಡ್ಯ), ಏಪ್ರಿಲ್ 13: ಕೆ.ಆರ್.ಪೇಟೆ ಶಾಸಕರ ಮೇಲೆ ಹಲ್ಲೆಗೆ ಯತ್ನಿಸಿದವರನ್ನು ತಡೆಯಲು ಬಂದ ಅಂಗರಕ್ಷಕ ಮತ್ತು ಆಪ್ತರಕ್ಷಕ ಸೇರಿ ಮೂವರು ಗಾಯಗೊಂಡಿರುವ ಘಟನೆ ತಾಲೂಕಿನ ಬಂಡಿಹೊಳೆ ಗ್ರಾಮದಲ್ಲಿ ನಡೆದಿದೆ.
ಶಾಸಕ ನಾರಾಯಣಗೌಡ ಅವರ ಅಂಗರಕ್ಷಕ (ಗನ್ಮ್ಯಾನ್) ಪರಮೇಶ್, ಆಪ್ತ ಕಾರ್ಯದರ್ಶಿ ದಯಾನಂದ್ ಹಾಗೂ ತಾಲೂಕು ಜೆಡಿಎಸ್ ವಿದ್ಯಾರ್ಥಿ ಘಟಕದ ಅಧ್ಯಕ್ಷ ಸುನಿಲ್ ಕುಮಾರ್ ಗಾಯಗೊಂಡವರು.
ಇವರು ಶಾಸಕರೊಂದಿಗೆ ಚುನಾವಣೆಯ ಪ್ರಚಾರಕ್ಕೆ ತೆರಳಿದ್ದ ಸಮಯದಲ್ಲಿ ಬಂಡಿಹೊಳೆ ಗ್ರಾಮದ ಯುವಕರ ಗುಂಪೊಂದು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪ್ರಶ್ನಿಸುವಾಗ ಪರಸ್ಪರ ಮಾತಿಗೆ ಮಾತು ಬೆಳೆದು ಶಾಸಕ ನಾರಾಯಣಗೌಡರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಅದನ್ನು ಶಾಸಕರ ಅಂಗರಕ್ಷಕ ಪರಮೇಶ್, ಆಪ್ತ ಕಾರ್ಯದರ್ಶಿ ದಯಾನಂದ್ ಹಾಗೂ ತಾಲೂಕು ಜೆಡಿಎಸ್ ವಿದ್ಯಾರ್ಥಿ ಘಟಕದ ಅಧ್ಯಕ್ಷ ಸುನಿಲ್ ಕುಮಾರ್ ತಡೆಯಲು ಮುಂದಾಗಿದ್ದು ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.

ಬಂಡಿಹೊಳೆ ಗ್ರಾಮದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿನ ಶ್ರೀರಾಮ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಶಾಸಕರು ಹೋಗುತ್ತಿದ್ದರು. ಆಗ ದಾರಿಯಲ್ಲಿ ಶಾಸಕರ ಕಾರನ್ನು ಅಡ್ಡಗಟ್ಟಿದ ಬಂಡಿಹೊಳೆ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಎನ್ನಲಾದ ರಾಜು, ಫಣೀಶ್, ದಿಲೀಪ್, ಕೆಂಪಿರಾ, ದಿನೇಶ್, ಸಂತೋಷ್ ಮತ್ತಿತರರಿದ್ದ ಗುಂಪು ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.
ಗುಂಪಿನಲ್ಲಿದ್ದವರು ಹಲ್ಲೆ ನಡೆಸಿದ್ದಲ್ಲದೆ ಘಟನೆಯನ್ನು ಚಿತ್ರೀಕರಣ ಮಾಡುತ್ತಿದ್ದ ಆಪ್ತ ಕಾರ್ಯದರ್ಶಿ ದಯಾನಂದ್ ಅವರ ಮೊಬೈಲ್ ಕಿತ್ತುಕೊಂಡು ಒಡೆದು ಪುಡಿ ಪುಡಿ ಮಾಡಿದ್ದಾರೆ. ಜೆಡಿಎಸ್ ವಿದ್ಯಾರ್ಥಿ ಸುನಿಲ್ ಕುಮಾರ್ ಅವರ ಚಿನ್ನದ ಚೈನ್ ಕಿತ್ತುಕೊಂಡು ಹಲ್ಲೆ ಮಾಡಿದ್ದಾರೆ. ಶಾಸಕರ ಮೇಲೆ ಹಲ್ಲೆಗೆ ಯತ್ನಿಸಿದಾಗ ತಡೆಯಲು ಹೋದ ಅಂಗರಕ್ಷಕ ಪರಮೇಶ್ ಅವರ ಮೇಲೂ ಗುಂಪು ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.
ಈ ವಿಷಯ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ಇನ್ಸ್ ಪೆಕ್ಟರ್ ಕೆ.ಎನ್.ಗಿರೀಶ್ ಅವರು ಗಲಾಟೆಯನ್ನು ನಿಯಂತ್ರಿಸಿದರು. ಘಟನೆಯ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications