ನವಿಲು ಗರಿಯ ಹಾರ ತಂದ ಸಂಕಷ್ಟ: ದರ್ಶನ್ ಪುಟ್ಟಣ್ಣಯ್ಯಗೆ ಬಂಧನ ಭೀತಿ
ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಪಾಂಡವಪುರದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಅವರ ಅಭಿಮಾನಿಯೊಬ್ಬರು ಬೃಹತ್ ನವಿಲುಗರಿಯ ಹಾರವನ್ನು ಹಾಕಿದ್ದು, ಇದೇ ಕಾರಣಕ್ಕೆ ದರ್ಶನ್ ಹಾಗೂ ಅವರ ಅಭಿಮಾನಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಮಂಡ್ಯ, ಮಾರ್ಚ್ 13: ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಿರುವ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ರೈತ ಸಂಘದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬಂಧನದ ಭೀತಿ ಶುರುವಾಗಿದೆ.
ಕ್ಷೇತ್ರದಾದ್ಯಂತ ಪಾದಯಾತ್ರೆ ಮಾಡುತ್ತಿರುವ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಪಾಂಡವಪುರದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಅವರ ಅಭಿಮಾನಿಯೊಬ್ಬರು ಬೃಹತ್ ನವಿಲುಗರಿಯ ಹಾರವನ್ನು ಹಾಕಿದ್ದು, ಇದೇ ಕಾರಣಕ್ಕೆ ದರ್ಶನ್ ಹಾಗೂ ಅವರ ಅಭಿಮಾನಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಭರವಸೆಯ ಯಾನ ಹೆಸರಿನಲ್ಲಿ ಪಾದಯಾತ್ರೆ ವೇಳೆ ಸ್ಥಳೀಯ ಹಳ್ಳಿಗಳಲ್ಲೇ ರಾತ್ರಿ ದರ್ಶನ್ ಪುಟ್ಟಣ್ಣಯ್ಯ ವಾಸ್ತವ್ಯ ಹೂಡುತ್ತಿದ್ದರು. ಈ ವೇಳೆ ಅವರ ಅಭಿಮಾನಿಯೊಬ್ಬರು ಬೃಹತ್ ನವಿಲುಗರಿಯ ಹಾರವನ್ನು ತಂದು ಹಾಕಿದ್ದರು. ಸಂತೋಷದಿಂದಲೇ ನವಿಲುಗರಿ ಹಾರವನ್ನು ಹಾಕಿಸಿಕೊಂಡಿದ್ದರು. ಆದರೆ ಈಗ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ದರ್ಶನ್ ಪುಟ್ಟಣ್ಣಯ್ಯ ಹಾಗೂ ಅವರ ಬೆಂಬಲಿಗನಿಗೂ ಬಂಧನದ ಭೀತಿ ಎದುರಾಗಿದೆ.
ಅಮೆರಿಕಾ ಸಂಸ್ಕೃತಿಗೂ, ಇಂಡಿಯಾ ಸಂಸ್ಕೃತಿ ಅರಿವಿಲ್ಲದ ದರ್ಶನ್, ಚುನಾವಣೆಗಾಗಿ ಇತ್ತೀಚೆಗೆ ಅಮೆರಿಕಾದಿಂದ ವಾಪಸ್ಸಾಗಿದ್ದರು. ಇದೀಗ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ಯು/ಎಸ್, 51, 1973, ಕಲಂ 3, 2, 5(ಇ) ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ.
ದರ್ಶನ್ ಪುಟ್ಟಣ್ಣಯ್ಯ ರೈತಸಂಘದ ನಾಯಕರಾಗಿದ್ದು, ಮೇಲುಕೋಟೆ ವಿಧಾನಸಭಾ ಕ್ಷೇತ್ರದ ವಿಧಾನಸಭಾ ಚುನಾವಣೆಯ ಅಭ್ಯರ್ಥಿಯಾಗಿದ್ದಾರೆ. ವಿದೇಶದಲ್ಲಿ ವ್ಯಾಸಂಗ ಮುಗಿಸಿರುವ ಅವರು ಮಂಡ್ಯ ಜಿಲ್ಲೆಯ ಮೇಲುಕೋಟೆಯ ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ.
ಸರ್ವೋದಯ ಕರ್ನಾಟಕ ಪಕ್ಷದಿಂದ ಅವರು 2018ರ ಚುನಾವಣಗೆ ಮೇಲುಕೋಟೆಯಲ್ಲಿ ಕಣಕ್ಕಿಳಿದಿದ್ದರು 73,779 ಮತಗಳನ್ನು ಪಡೆದು ಜೆಡಿಎಸ್ನ ಸಿ. ಎಸ್. ಪುಟ್ಟರಾಜು ವಿರುದ್ಧ ಸೋಲು ಕಂಡಿದ್ದರು. ದೇವನೂರು ಮಹಾದೇವ ಮತ್ತು ದಿ. ಕೆ. ಎಸ್. ಪುಟ್ಟಣ್ಣಯ್ಯ ಒತ್ತಾಸೆಯಂತೆ 2005ರಲ್ಲಿ ಆರಂಭವಾದ ಸರ್ವೋದಯ ಕರ್ನಾಟಕ ಪಕ್ಷ ಬಳಿಕ ಸ್ವರಾಜ್ ಇಂಡಿಯಾ ಜೊತೆ ವಿಲೀನವಾಗಿತ್ತು. ಈಗ ಮತ್ತೆ ಪಕ್ಷಕ್ಕೆ ಮರು ಚಾಲನೆ ಮಾಡಲಾಗಿದೆ. ಈ ಬಾರಿಯ ವಿಧಾನಸಭೆ ಚುನಾವಣೆಗೆ 5 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಲಾಗಿದ್ದು, ದರ್ಶನ್ ಪುಟ್ಟಣ್ಣಯ್ಯ ಕೂಡ ಚುನಾವಣಾ ಕಣದಲ್ಲಿದ್ದಾರೆ.












Click it and Unblock the Notifications