ಕಾಂಗ್ರೆಸ್ ಮತ್ತು ಕುಮಾರಸ್ವಾಮಿ ಬಗ್ಗೆ ಅಂಬರೀಶ್ ಹೊಡೆದ್ರು ಖಡಕ್ ಡೈಲಾಗ್
Recommended Video

ಮಂಡ್ಯ, ಅಕ್ಟೋಬರ್ 05: ತಮ್ಮ ಖಡಕ್ ಡೈಲಾಗ್ಗಳಿಗೆ ಖ್ಯಾತರಾದ ನಟ ಹಾಗೂ ಕಾಂಗ್ರೆಸ್ ಮಾಜಿ ಸಚಿವ ಅಂಬರೀಶ್ ಅವರು ಇಂದು ಸಿಎಂ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಪಕ್ಷದ ಬಗ್ಗೆ ತಮ್ಮದೇ ಧಾಟಿಯಲ್ಲಿ ಖಡಕ್ ಡೈಲಾಗ್ ಹೊಡೆದಿದ್ದಾರೆ.
ಇಂದು ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಪ್ರಸ್ತುತ ರಾಜಕೀಯ ಸನ್ನಿವೇಶಗಳ ಬಗ್ಗೆ ಲೋಕಾಭಿರಾಮವಾಗಿ ಮಾತನಾಡಿದ ಅಂಬರೀಶ್, 'ಕಾಂಗ್ರೆಸ್ಗೆ ಕುಮಾರಸ್ವಾಮಿ ಅವಶ್ಯಕತೆ ಇದೆ, ಆದರೆ ಕುಮಾರಸ್ವಾಮಿಗೆ ಕಾಂಗ್ರೆಸ್ನ ಅವಶ್ಯಕತೆ ಇಲ್ಲ' ಎಂದು ಹೇಳಿದರು.
ಕಾಂಗ್ರೆಸ್ ಅಧಿಕಾರಸ್ಥಾನದಲ್ಲಿ ಇರಬೇಕೆಂದರೆ ಅವರಿಗೆ ಕುಮಾರಸ್ವಾಮಿ ಬೇಕೇ ಬೇಕು ಆದರೆ ಕುಮಾರಸ್ವಾಮಿಗೆ ಆ ಅವಶ್ಯಕತೆ ಇಲ್ಲ ಅವರು ಬೇಕಾದರೆ ಬೇರೆ ಪಕ್ಷದ ಜೊತೆಗೂ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಏರಬಹುದು ಹಾಗಾಗಿ ಕಾಂಗ್ರೆಸ್ ತುಸು ಜಾಗೃತೆಯಾಗಿ ಕುಮಾರಸ್ವಾಮಿ ಅವರೊಂದಿಗೆ ವರ್ತಿಸಬೇಕು ಎಂದು ಅಂಬರೀಶ್ ಅವರು ಎಚ್ಚರಿಕೆ ನೀಡಿದರು.

ಸರ್ಕಾರ ಉರುಳಿಸಿದರೆ ಮನೆಯಲ್ಲಿ ಕೂರಬೇಕಾಗುತ್ತೆ
ಪಕ್ಷದ ಒಳಗಿದ್ದುಕೊಂಡೇ ಸರ್ಕಾರ ಉರುಳಿಸಲು ಯತ್ನಿಸುತ್ತಿರುವವರ ಬಗ್ಗೆಯೂ ಖಡಕ್ ಆಗಿ ಮಾತನಾಡಿದ ಅವರು, ಸರ್ಕಾರ ಬೀಳಿಸಿದರೆ ಮುಂದೆ ಏನಾಗುತ್ತೆ ಎಂಬುದನ್ನು ಅವರು ಒಮ್ಮೆ ಯೋಚಿಸಬೇಕು, ಕೈಲಿರುವ ಅಧಿಕಾರನ್ನು ಬೇರೆಯವರಿಗೆ ಕೊಟ್ಟು ಮನೆಯಲ್ಲಿ ಕೂರುವಂತಾಗಬಾರದು ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಹಾಗೂ ಅವರ ಆಪ್ತರಿಗೆ ಎಚ್ಚರಿಕೆ ನೀಡಿದರು ಅಂಬಿ.

ನೆಹರು ಆದ ಮೇಲೆ ನಾಯಕರು ಹುಟ್ಟಲಿಲ್ಲವೇನು?
ಅಂಬರೀಶ್ ರಾಜಕೀಯದಿಂದ ದೂರ ಸರಿದಿದ್ದರಿಂದ ಮಂಡ್ಯ ಕಾಂಗ್ರೆಸ್ಗೆ ಸೂಕ್ತ ನಾಯಕನಿಲ್ಲದಾಯಿತು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನೆಹರು ಹೋದ ನಂತರ ಕಾಂಗ್ರೆಸ್ನಲ್ಲಿ ಯಾರೂ ನಾಯಕರೇ ಹುಟ್ಟಲಿಲ್ಲವೇ. ಈಗಲೂ ಹಾಗೆ ನಾನಲ್ಲದಿದ್ದರೆ ಮತ್ತೊಬ್ಬರು ನನ್ನ ಸ್ಥಾನ ತುಂಬುತ್ತಾರೆ ಎಂದು ಅಂಬಿ ಹೇಳಿದರು.

ಚುನಾವಣೆ ಟಿಕೆಟ್ ನಿರಾಕರಿಸಿದ್ದ ಅಂಬರೀಶ್
ಕಳೆದ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ ಮಂಡ್ಯದಿಂದ ಟಿಕೆಟ್ ನೀಡಿದ್ದರೂ ಸಹ ಅಂಬರೀಶ್ ಅವರು ಚುನಾವಣೆಗೆ ನಿಲ್ಲಲಿಲ್ಲ. ಸಿದ್ದರಾಮಯ್ಯ ಸೇರಿದಂತೆ ಹಲವರ ಮೇಲೆ ಅಸಮಾಧಾನಗೊಂಡಿದ್ದ ಅಂಬರೀಶ್ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವುದಾಗಿ ಘೋಷಿಸಿದರು. ಹಲವು ಕಾಂಗ್ರೆಸ್ ಮುಖಂಡರು ಅವರ ಮನವೊಲಿಸಿದರಾದರೂ ಅವರು ಯಾವುದಕ್ಕೂ ಬಗ್ಗಲಿಲ್ಲ. ರಾಜ್ಯ ರಾಜಕಾರಣದಿಂದ ಅವರು ದೂರವೇ ಉಳಿದಿದ್ದಾರೆ.

ಅಭಿಷೇಕ್ ರಾಜಕೀಯಕ್ಕೆ ಬರುವುದಿಲ್ಲ
ಮಗ ಅಭಿಷೇಕ್ ರಾಜಕೀಯಕ್ಕೆ ಬರುತ್ತಾರೆಯೇ ಎಂಬ ಪ್ರಶ್ನೆಗೆ ಕಡ್ಡಿ ಮುರಿದಂತೆ ಉತ್ತರಿಸಿದ ಅಂಬರೀಶ್. ನಾನು ಬದುಕಿರುವವರೆಗೂ ಆತ ರಾಜಕೀಯಕ್ಕೆ ಬರುವುದಿಲ್ಲ ಎಂದರು. ರಮ್ಯಾ ಬಗ್ಗೆ ಕೇಳಲಾದ ಪ್ರಶ್ನೆಗೆ, ಅವರ ಕೆಲಸವೇ ಸಾಮಾಜಿಕ ಜಾಲತಾಣ ಮುಖ್ಯಸ್ಥೆಯಾಗಿ ಅವರ ಕೆಲಸವೇ ವಿರೋಧಿಗಳ ಕಾಲೆಳೆದು ತಮ್ಮ ಪಕ್ಷವನ್ನು ಮೇಲಕ್ಕೆ ತೆಗೆದುಕೊಂಡು ಹೋಗುವುದು ಎಂದು ಮಾರ್ಮಿಕವಾಗಿ ಉತ್ತರಿಸಿದರು.

ಮಂಡ್ಯ ಪ್ರಸ್ತುತ ರಾಜಕಾರಣಿಗಳ ಬಗ್ಗೆ ಅಸಮಾಧಾನ
ಈಗಿನ ಮಂಡ್ಯ ರಾಜಕೀಯ ನಾಯಕರ ಬಗ್ಗೆ ಅಸಮಾಧಾನವನ್ನೂ ವ್ಯಕ್ತಪಡಿಸಿದ ಅಂಬರೀಶ್ ಅವರು, ನಾನು ಜಿಲ್ಲೆಗೆ ಮಹಿಳಾ ಕಾಲೇಜು ತಂದೆ, ಹಲವು ಕಡೆಗಳಲ್ಲಿ ರಸ್ತೆಗಳನ್ನು ಹಾಕಿಸಿದೆ. ಮೆಡಿಕಲ್ ಕಾಲೇಜು, ಶಾಲೆಗಳು ತಂದೆ. ವಸತಿ ಸಚಿವನಾಗಿದ್ದಾಗ ಮನೆಗಳನ್ನು ಕೊಡಿಸಿದೆ. ಅಷ್ಟೆ ಅಲ್ಲದೆ, ರಾಜ್ಕುಮಾರ್ ಕಾರ್ಯಕ್ರಮ, ಎಸ್.ಕೃಷ್ಣ ಕಾರ್ಯಕ್ರಮ, ಮಂಡ್ಯ ಅಮೃತಮಹೋತ್ಸವ ಮಾಡಿದೆ ಈಗಿನ ಮುಖಂಡರು ಅಷ್ಟು ಮಾಡಲಿ ನೋಡೋಣ ಎಂದು ಪ್ರಸ್ತುತ ಮುಖಂಡರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಮೃತ ಅಭಿಮಾನಿಯ ಮನೆಗೆ ಬಂದಿದ್ದ ಅಂಬಿ
ಇತ್ತೀಚೆಗೆ ಲಾರಿ ಅಪಘಾತವೊಂದರಲ್ಲಿ ಮೃತಪಟ್ಟ ತಮ್ಮ ಕಟ್ಟಾ ಅಭಿಮಾನಿ ರಫೀಕ್ ಮನೆಗೆ ಭೇಟಿ ನೀಡಿದ್ದ ಅಂಬರೀಶ್ ಅವರು ಬಹುಕಾಲ ಅವರ ಮನೆಯಲ್ಲಿದ್ದು ಮನೆಯವರಿಗೆ ಸಾಂತ್ವಾನ ಹೇಳಿದರು. ಆ ನಂತರ ಬಹಳ ಸಮಯದ ವರೆಗೆ ಸುದ್ದಿಗಾರರೊಂದಿಗೂ ಮಾತನಾಡಿದರು.

ಅಂಬಿ ಗೆಲುವಿನ ಖುಷಿಯಲ್ಲಿ ಅಂಬರೀಶ್
ಅಂಬರೀಶ್ ಅವರು ಬಹು ಸಮಯದ ಬಳಿಕ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಅಂಬಿ ನಿಂಗ್ ವಯಸ್ಸಾಯ್ತೊ ಕಳೆದ ವಾರವಷ್ಟೆ ಬಿಡುಗಡೆ ಆಗಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಅವರು ಪೌರಾಣಿಕ ಪಾತ್ರದಲ್ಲಿ ನಟಿಸಿರುವ ಕುರುಕ್ಷೇತ್ರ ಚಿತ್ರ ಇನ್ನಷ್ಟೆ ಬಿಡುಗಡೆ ಆಗಬೇಕಿದೆ. ಈ ನಡುವೆ ಅಂಬರೀಶ್ ಮಗ ಅಭಿಷೇಕ್ ಸಹ ಚಿತ್ರರಂಗಕ್ಕೆ ನಾಯಕನಾಗಿ ಎಂಟ್ರಿ ನೀಡುತ್ತಿದ್ದಾರೆ.











Click it and Unblock the Notifications