ಎಸಿಬಿ ಬಲೆಗೆ ಉಪನೋಂದಣಾಧಿಕಾರಿ ಮತ್ತು 7 ಮಧ್ಯವರ್ತಿ
ಮಂಡ್ಯ, ಅಕ್ಟೋಬರ್, 18: ಅಕ್ರಮ ಹಣ ವಸೂಲಿ ಮಾಡುತ್ತಿದ್ದ ಶ್ರೀರಂಗಪಟ್ಟಣ ಉಪ ನೋಂದಣಾಧಿಕಾರಿ ಹಾಗೂ ಏಳು ಮಧ್ಯವರ್ತಿಗಳನ್ನು ಭ್ರಷ್ಟಾಚಾರ ನಿಗ್ರಹದಳ ಪೊಲೀಸರು ಬಂಧಿಸಿ, ಅವರಿಂದ ದಾಖಲೆಯಿಲ್ಲದ 83,900 ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.
ಉಪ ನೋಂದಣಾಧಿಕಾರಿ ತ್ಯಾಗರಾಜು, ಮಧ್ಯವರ್ತಿಗಳಾದ ಶಶಿಭೂಷಣ್, ವಿನಯ್, ನಟರಾಜು, ಕಿರಣ್, ರಾಜೀವ್, ಸಿದ್ದರಾಮು, ಗಂಗಾಧರ ಬಂಧಿತ ಆರೋಪಿಗಳು.
ಶ್ರೀರಂಗಪಟ್ಟಣ ಉಪ ನೋಂದಣಾಧಿಕಾರಿ ತ್ಯಾಗರಾಜು ಅವರು ಮಧ್ಯವರ್ತಿಗಳನ್ನು ಮುಂದಿಟ್ಟುಕೊಂಡು ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಎಸಿಬಿ ಡಿವೈಎಸ್ಪಿ ಶೈಲೇಂದ್ರ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು.
ದಾಳಿ ವೇಳೆ ದಾಖಲೆ ಇಲ್ಲದೆ ಮಧ್ಯವರ್ತಿಗಳಿಂದ 83,500 ರೂ., ಉಪ ನೋಂದಣಾಧಿಕಾರಿ ತ್ಯಾಗರಾಜು ಬಳಿ 400 ರೂ. ಹೆಚ್ಚುವರಿಯಾಗಿ ಪತ್ತೆಯಾಯಿತು.
ಹಣಕ್ಕೆ ಸಂಬಂಧಿಸಿದಂತೆ ಪೂರಕ ದಾಖಲೆಗಳನ್ನು ಒದಗಿಸುವಲ್ಲಿ ಸಿಬ್ಬಂದಿ ವಿಫಲರಾದ ಕಾರಣ ಅನಧಿಕೃತ ಹಣ ಎಂದು ಪರಿಗಣಿಸಿ ಎಸಿಬಿ ಅಧಿಕಾರಿಗಳು ಉಪನೋಂದಣಾಧಿಕಾರಿ ತ್ಯಾಗರಾಜು ಸೇರಿದಂತೆ ಒಟ್ಟು ೮ ಮಂದಿಯನ್ನು ಬಂಧಿಸಿದರು.
ಆರೋಪಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎಸಿಬಿ ಡಿವೈಎಸ್ಪಿ ಶೈಲೇಂದ್ರ, ಇನ್ಸ್ಪೆಕ್ಟರ್ಗಳಾದ ವೆಂಕಟೇಶ್, ಪ್ರಶಾಂತ್, ಸಿಬ್ಬಂದಿ ವೆಂಕಟೇಶ್, ಮಹೇಶ್, ಪಾಪಣ್ಣ, ಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.