ಮಂಡ್ಯ: ನಿಂತ ಲಾರಿಗೆ ಬಸ್ ಡಿಕ್ಕಿ, 30 ಮಂದಿಗೆ ಗಾಯ
ಮಂಡ್ಯ, ಏಪ್ರಿಲ್. 11 : ಉಡುಪಿಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ಸೊಂದು ಭೀಕರ ಅಪಘಾತಕ್ಕೀಡಾದ ಘಟನೆ ಮಂಡ್ಯ ಜಿಲ್ಲೆಯ ಬೆಳ್ಳೂರು ಕ್ರಾಸ್ ನಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ್ದು, ಬಸ್ ಚಾಲಕ ಸಹಿತ 20 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಉಡುಪಿಯಿಂದ ಸೋಮವಾರ ರಾತ್ರಿ ಹೊರಟ ಭಾರತಿ ಟೂರ್ಸ್ ಆಂಡ್ ಟ್ರಾವೆಲ್ಸ್ ನ ಬಸ್ ಮಂಗಳವಾರ ಮುಂಜಾನೆ 4 ಗಂಟೆ ಸುಮಾರಿಗೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕದಬ ಹಳ್ಳಿಯ ಬೆಳ್ಳೂರು ಕ್ರಾಸ್ ಬಳಿ ನಿಂತಿದ್ದ ಲಾರಿ ಹಿಂಬದಿಗೆ ಡಿಕ್ಕಿ ಹೊಡೆದೆ.
ಘಟನೆಯಲ್ಲಿ ಬಸ್ ನಲ್ಲಿದ್ದ ಕರಾವಳಿ ಮೂಲದ 30 ಮಂದಿ ಗಾಯಗೊಂಡಿದ್ದಾರೆ. ಬಸ್ ಚಾಲಕ ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟಯರ್ ಪಂಚರ್ ಆಗಿದ್ದ ಲಾರಿಯನ್ನು ರಾ. ಹೆ. 75 ರಲ್ಲಿ ರಸ್ತೆ ಬಲಬದಿಯಲ್ಲಿ ಡಿವೈಡರ್ ಪಕ್ಕ ನಿಲ್ಲಿಸಲಾಗಿತ್ತು. ಅತೀ ವೇಗದಲ್ಲಿದ್ದ ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಬಸ್ ನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ.