ಪಾಪಪ್ರಜ್ಞೆ: ಅಪಘಾತದಲ್ಲಿ ಯುವಕ ಸಾವು, ಮನನೊಂದು ಅಪಘಾತ ಮಾಡಿದ ವ್ಯಕ್ತಿಯೂ ಸಾವಿಗೆ ಶರಣು
ಮಡಿಕೇರಿ, ಫೆಬ್ರವರಿ 12: ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದಲೋ, ಚಾಲಕರ ನಿರ್ಲಕ್ಷ್ಯದಿಂದಲೋ ಇತ್ತೀಚಿಗೆ ರಸ್ತೆ ಅಪಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಜೊತೆಗೆ ಹಿಟ್ ಆ್ಯಂಡ್ ರನ್ ಕೂಡ ಹೆಚ್ಚಾಗುತ್ತಿದೆ. ಅಪಘಾತ ಸಂಭವಿಸಿದಾಗ ತಿರುಗಿ ನೋಡದೇ ಪರಾರಿಯಾಗಲು ಯತ್ನಿಸುವ ಈ ಕಾಲದಲ್ಲಿ ಮಡಿಕೇರಿಯ ವ್ಯಕ್ತಿಯೊಬ್ಬರು ಅಪಘಾತ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಸಾವಿಗೆ ಶರಣಾಗಿದ್ದಾರೆ.
ಕಳೆದ ಶುಕ್ರವಾರ ಫೆಬ್ರವರಿ 9ರಂದು ಮಡಿಕೇರಿ-ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ಮಡಿಕೇರಿ ನಗರ ಸಮೀಪದ ಚೈನ್ ಗೇಟ್ ಸಮೀಪ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಸೋಮವಾರಪೇಟೆ ತಾಲೂಕಿನ ಕಾಂಡನಕೊಲ್ಲಿ ಗ್ರಾಮದ ನಿವಾಸಿ ಗಗನ್ ಸುಬ್ಬಯ್ಯ (23) ಬೈಕ್ಗೆ ಮಡಿಕೇರಿ ತಾಲೂಕಿನ ಹೆರವನಾಡು ಗ್ರಾಮದ ತಮ್ಮಯ್ಯ (57) ಎನ್ನುವವರ ಬೈಕ್ ಡಿಕ್ಕಿಯಾಗಿತ್ತು.

ಗಗನ್ ಓಡಿಸುತ್ತಿದ್ದ ಬೈಕ್ ಕುಶಾಲನಗರ ಕಡೆಯಿಂದ ಬರುತ್ತಿದ್ದ ಲಾರಿಗೆ ಗುದ್ದಿ ಕೆಳಕ್ಕೆ ಬಿದ್ದಿದೆ. ಅಪಘಾತದ ರಭಸಕ್ಕೆ ಗಗನ್ ತಲೆ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮೈಸೂರು ಆಸ್ಪತ್ರೆಗೆ ರವಾನಿಸಲಾಗುತ್ತದೆ. ಆದರೆ ಮೈಸೂರಿನಲ್ಲಿ ಗಗನ್ನ ಬ್ರೈನ್ ಡೆಡ್ ಆಗಿದೆ ಎಂದು ವೈದ್ಯರು ತಿಳಿಸಿದ ಹಿನ್ನೆಲೆಯಲ್ಲಿ ಮತ್ತೆ ಆತನನ್ನು ಮರಳಿ ಮಡಿಕೇರಿ ಆಸ್ಪತ್ರೆಗೆ ಕರೆತರಲಾಗಿತ್ತು.
ತನ್ನಿಂದಲೇ ಅಪಘಾತ ನಡೆದಿದೆ ಎಂದು ತೀವ್ರ ಮನನೊಂದಿದ್ದ ತಮ್ಮಯ್ಯ ಪೊಲೀಸರಿಗೆ ಮಾಹಿತಿ ನೀಡಿ ಮನೆಗೆ ತೆರಳಿದ ಬಳಿಕ ಮಂಕಾಗಿದ್ದರು. ಇನ್ನೂ ಬಾಳಿ ಬದುಕಬೇಕಾಗಿದ್ದ ಯುವಕನ ಸ್ಥಿತಿ ಹೀಗಾಯ್ತು ಎಂದು ನೊಂದುಕೊಂಡಿದ್ದರು. ದುರಾದೃಷ್ಟವಶಾತ್ ಭಾನುವಾರ ಬೆಳಗಿನ ಜಾವ ಗಗನ್ ಸಾವನ್ನಪ್ಪಿದ್ದಾನೆ. ಈ ವಿಚಾರ ತಿಳಿದ ತಮ್ಮಯ್ಯ ತೀವ್ರ ಮನನೊಂದು ತಮ್ಮ ಕಾಫಿ ತೋಟಕ್ಕೆ ತೆರಳಿ ನೇಣಿಗೆ ಶರಣಾಗಿದ್ದಾರೆ.

ಡಿಗ್ರಿ ಮುಗಿಸಿ ಇದೀಗ ಎಂಬಿಎ ಓದುತ್ತಿದ್ದ ಗಗನ್ ಶುಕ್ರವಾರವೂ ಮಡಿಕೇರಿ ಎಫ್ಎಂಸಿ ಕಾಲೇಜಿನಲ್ಲಿ ಕ್ಲಾಸ್ ಮುಗಿಸಿ ತನ್ನ ಬೈಕ್ನಲ್ಲಿ ಬರುತ್ತಿದ್ದ. ಚಿಕ್ಕ ವಯಸ್ಸಲ್ಲೇ ಮಗ ಸಾವನ್ನಪ್ಪಿರುವುದನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ತಮ್ಮಯ್ಯ ಅವರು ಮಗನನ್ನು ಸಿಆರ್ಪಿಎಫ್ ಯೋಧರನ್ನಾಗಿ ಮಾಡಿದ್ದರು. ಇತ್ತೀಚೆಗೆ ಹೊಸ ಮನೆ ಕಟ್ಟಿಸುತ್ತಿದ್ದರು, ಆದರೆ ಹೊಸ ಮನೆ ಗೃಹಪ್ರವೇಶಕ್ಕೂ ಮುನ್ನ ಪಾಪಪ್ರಜ್ಞೆಯಿಂದ ಸಾವಿಗೆ ಶರಣಾಗಿದ್ದಾರೆ.
(ಆತ್ಮಹತ್ಯೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ. ನಿಮಗೆ ಬೆಂಬಲ ಬೇಕಾದರೆ ಅಥವಾ ಯಾರೊಂದಿಗಾದರೂ ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಬೇಕಿದ್ದರೇ ದಯವಿಟ್ಟು ನಿಮ್ಮ ಹತ್ತಿರದ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿ. ಸಹಾಯವಾಣಿಗಳು: ಆಸ್ರ: 022 2754 6669; ಸ್ನೇಹ ಇಂಡಿಯಾ ಫೌಂಡೇಶನ್: +914424640050 ಮತ್ತು ಸಂಜೀವಿನಿ: 011-24311918, ರೋಶ್ನಿ ಫೌಂಡೇಶನ್: ಸಂಪರ್ಕ: 040-66202001, 040-66202000, ಒಂದು ಜೀವನ: ಸಂಪರ್ಕ ಸಂಖ್ಯೆ: 78930 78930, SEVA: ಸಂಪರ್ಕ ಸಂಖ್ಯೆ: 09441778290 )












Click it and Unblock the Notifications