ಗೋಣಿಕೊಪ್ಪ ಆಸ್ಪತ್ರೆಯಲ್ಲಿ ಧೂಳು ಹಿಡಿದ ಎಕ್ಸ್ ರೇ ಯಂತ್ರ
ಮಡಿಕೇರಿ, ಆಗಸ್ಟ್ 22: ಕೃಷಿ ಕಾರ್ಮಿಕರೇ ಹೆಚ್ಚು ಇರುವ ಕೊಡಗಿನಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಕಾಣಿಸಿಕೊಂಡರೆ ಪರದಾಡುವ ಸ್ಥಿತಿ ಬಂದೊದಗಿದೆ. ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಜನರ ಆರೋಗ್ಯದ ದೃಷ್ಠಿಯಿಂದ ಸರ್ಕಾರ ಆರೋಗ್ಯ ಕೇಂದ್ರಗಳನ್ನು ತೆರೆದಿದೆಯಾದರೂ ಹೆಚ್ಚಿನ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರೇ ಇಲ್ಲ.

ಈ ಎಲ್ಲದರ ಪರಿಣಾಮ ರೋಗ ಉಲ್ಭಣಗೊಂಡು ಮೈಸೂರಿಗೋ, ಮಂಗಳೂರಿಗೋ ಹೋಗಬೇಕಾದ ಪರಿಸ್ಥಿತಿ ಬಂದೊದಗಿದೆ. ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಆಸ್ಪತ್ರೆಗಳನ್ನು ಕಟ್ಟಿಸಿದ್ದರೂ ಕೆಲವು ಕಡೆ ವೈದ್ಯರು ಸೇರಿದಂತೆ ಅಗತ್ಯ ಸಿಬ್ಬಂದಿ ನೇಮಕ ಮಾಡದ ಕಾರಣದಿಂದ ಅವು ರೋಗಿಗಳ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಗೋಣಿಕೊಪ್ಪದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಟೆಕ್ನಿಷಿಯನ್ ಇಲ್ಲದೆ ಮೂಲೆ ಸೇರಿರುವ ಎಕ್ಸರೇ ಯಂತ್ರವೇ ಇದಕ್ಕೆ ಸಾಕ್ಷಿ ಎಂಬಂತಿದೆ.[ಕೇರಳದಲ್ಲಿ ವಿಮಾನ ನಿಲ್ದಾಣ.. ಕೊಡಗಿನವರಿಗೆ ವರದಾನ..]
ಹಾಗೆ ನೋಡಿದರೆ ವೀರಾಜಪೇಟೆ ತಾಲೂಕಿನಲ್ಲಿ ಮೂರು ಸಮುದಾಯ ಆರೋಗ್ಯ ಕೇಂದ್ರ, ಒಂದು ತಾಲೂಕು ಆರೋಗ್ಯ ಕೇಂದ್ರವಿದೆ. ಆದರೆ ಇವುಗಳಲ್ಲಿ ಒಂದರಲ್ಲೂ ತೀರ ಅಗತ್ಯವಿರುವ ಎಕ್ಸ್ ರೇ ಟೆಕ್ನಿಷಿಯನ್ ಇಲ್ಲ. ಗೋಣಿಕೊಪ್ಪಲು ಆರೋಗ್ಯ ಕೇಂದ್ರದಲ್ಲಿ ಸುಮಾರು 30 ವರ್ಷ ಎಕ್ಸರೇ ಟೆಕ್ನಿಷಿಯನ್ ಆಗಿ ಕರ್ತವ್ಯ ನಿರ್ವಹಿಸಿದ್ದ ಶಿವನಂಜಯ್ಯ ಕಳೆದ ವರ್ಷ ತೀರಿಕೊಂಡ ಬಳಿಕ ಮತ್ತೆ ಎಕ್ಸರೇ ಕೊಠಡಿಯ ಬಾಗಿಲು ತೆರೆದಂತೆ ಕಾಣುತ್ತಿಲ್ಲ.
ಸರ್ಕಾರವು ಈ ಹುದ್ದೆಗೆ ಮತ್ತೊಬ್ಬರನ್ನು ನೇಮಿಸದ ಕಾರಣ ಕೊಠಡಿ ಧೂಳು ತಿನ್ನುತ್ತಾ ಎಕ್ಸ್ ರೇ ಯಂತ್ರ ಬಿದ್ದಿದೆ. ಲಕ್ಷಾಂತರ ರುಪಾಯಿ ಖರ್ಚು ಮಾಡಿ, ಖರೀದಿಸಿದ ಯಂತ್ರಗಳು ಕೂಡ ತುಕ್ಕು ಹಿಡಿಯುತ್ತಿವೆ. ಇದರಿಂದ ಬಡವರು ಕೂಡ ಖಾಸಗಿ ಲ್ಯಾಬ್ ಗೆ ತೆರಳಬೇಕಾಗಿದ್ದು, ದುಪ್ಪಟ್ಟು ಹಣ ನೀಡಬೇಕಾಗಿದೆ.[ಕೊಡಗಿನಲ್ಲೂ ತಮಿಳು, ಮಲಯಾಳಂ ಶಾಲೆ ಇದೆ ಕಣ್ರೀ...]
ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಎಕ್ಸ್ ರೇ ತೆಗೆಸಿಕೊಳ್ಳುತ್ತಿದ್ದ ಕಾರ್ಮಿಕರು ಪರದಾಡುವಂತಾಗಿದೆ. ಕಾರ್ಮಿಕರು ತೋಟದಲ್ಲಿ ಕೆಲಸ ಮಾಡುವಾಗ ಕೈ-ಕಾಲು, ದೇಹದ ಇತರ ಭಾಗಕ್ಕೆ ಪೆಟ್ಟು ಬೀಳುವುದು ಇನ್ನಿತರ ಸಮಸ್ಯೆಗಳು ಎದುರಾಗುವುದು ಸಹಜ. ಅದನ್ನು ಕಂಡು ಹಿಡಿಯಲು ಎಕ್ಸ್ ರೇ ಅನಿವಾರ್ಯ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಎಕ್ಸ್ ರೇ ಯಂತ್ರ ಇದ್ದರೂ ಸಿಬ್ಬಂದಿಯಿಲ್ಲದೆ ಪರದಾಡುವಂತಾಗಿದೆ.












Click it and Unblock the Notifications