ಮಡಿಕೇರಿಯಲ್ಲಿ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದ ಕಾಡಾನೆಗಳು
ಮಡಿಕೇರಿ, ಸೆಪ್ಟೆಂಬರ್ 2: ಅರಣ್ಯದಿಂದ ಕಾಫಿ ತೋಟಗಳತ್ತ ನುಗ್ಗುವ ಕಾಡಾನೆಗಳು ಕಾರ್ಮಿಕರು ಸೇರಿದಂತೆ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿವೆ.
ಮಡಿಕೇರಿಯ ಸಿದ್ದಾಪುರದ ಬೀಟಿಕಾಡು ಎಂಬ ತೋಟದಲ್ಲಿ ದಿಢೀರ್ ಆಗಿ ಮರಿ ಸೇರಿದಂತೆ 30 ಆನೆಗಳ ಹಿಂಡು ಕಾರ್ಮಿಕರನ್ನು ಅಟ್ಟಾಡಿಸಿವೆ. ಆನೆ ಕಂಡು ಕಾರ್ಮಿಕರು ಜೀವಭಯದಲ್ಲಿ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ.
8 ಮರಿ ಆನೆಗಳು ಸೇರಿದಂತೆ ಸುಮಾರು 30 ಕಾಡಾನೆಗಳು ಏಕ ಕಾಲಕ್ಕೆ ಕಾಫಿ ತೋಟಕ್ಕೆ ನುಗ್ಗಿದ್ದು, ಈ ವೇಳೆ ತೋಟ ಕೆಲಸ ಮಾಡುತ್ತಿದ್ದ ಕಾರ್ಮಿಕರು ಬೆದರಿ ದಿಕ್ಕಾ ಪಾಲಾಗಿ ಓಡಿದ್ದಾರೆ. ಓಡುವ ಸಂದರ್ಭದಲ್ಲಿ ಕೆಲ ಕಾರ್ಮಿಕರು ಬಿದ್ದು ಗಾಯ ಮಾಡಿಕೊಂಡಿದ್ದಾರೆ.

ಆ ನಂತರ ಆ ತೋಟದಿಂದ ಮತ್ತೊಂದು ತೋಟದತ್ತ ಆನೆಗಳು ತೆರಳಿವೆ. ಈ ವ್ಯಾಪ್ತಿಯ ಕಾಫಿ ತೋಟಗಳಲ್ಲೇ ಈ ಆನೆಗಳ ಹಿಂಡು ನೆಲೆ ನಿಂತಿದ್ದರಿಂದ ಜನ ಭಯ ಪಡುವಂತಾಗಿದೆ. ತೋಟದ ಕೆಲಸ ಮಾಡಲು ಕಾರ್ಮಿಕರೇ ಬಾರದಂತದಾಗಿದೆ.
ಕಳೆದ ಕೆಲ ವರ್ಷಗಳಿಂದ ಅರಣ್ಯದಿಂದ ನೇರವಾಗಿಯೇ ತೋಟಗಳಿಗೆ ಕಾಡಾನೆಗಳು ಹಿಂಡು ಹಿಂಡಾಗಿ ನುಗ್ಗುತ್ತಿದ್ದು ಜನ ಭಯದಿಂದ ಕಾಲ ಕಳೆಯುವಂತಾಗಿದೆ. ಜತೆಗೆ ಹಿಂಡು ಹಿಂಡಾಗಿ ಹೋಗುವುದರಿಂದ ಕಾಫಿ ಗಿಡಗಳು ಅವುಗಳಿಗೆ ಸಿಕ್ಕಿ ನಾಶವಾಗುತ್ತಿವೆ.
ಅರಣ್ಯದ ಸುತ್ತ ಆನೆ ಕಂದಕಗಳು ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ ಎಂಬುದು ಸ್ಥಳೀಯರ ಆರೋಪವಾಗಿದೆ. ಸದ್ಯ ತೋಟಗಳಲ್ಲಿ ಬೀಡು ಬಿಟ್ಟಿರುವ ಆನೆಗಳನ್ನು ಮರಳಿ ಕಾಡಿಗೆ ಅಟ್ಟುವ ಕೆಲಸವಾಗಬೇಕಿದೆ. ಇಲ್ಲದೆ ಹೋದರೆ ಅಪಾಯ ತಪ್ಪಿದಲ್ಲ.












Click it and Unblock the Notifications