ಮಡಿಕೇರಿಯಲ್ಲಿ ಕಾರು ಸಮೇತ ಇಬ್ಬರು ದೆಹಲಿ ವ್ಯಕ್ತಿಗಳ ಬಂಧನ
ಮಡಿಕೇರಿ, ಏಪ್ರಿಲ್ 13: ಕೊಡಗು ಮತ್ತು ದಕ್ಷಿಣ ಕನ್ನಡ ಸೇರಿದಂತೆ ದೇಶದ ಹಲವೆಡೆ ಲಾಕ್ ಡೌನ್ ನಿಯಮ ಉಲ್ಲಂಘಿಸಿ ಕಾರೊಂದರಲ್ಲಿ ಸುತ್ತಾಡುತ್ತಿದ್ದ ಇಬ್ಬರು ದೆಹಲಿ ಮೂಲದ ವ್ಯಕ್ತಿಗಳನ್ನು ಪೊಲೀಸರು ಕಾರು ಸಹಿತ ವಶಕ್ಕೆ ಪಡೆದುಕೊಂಡಿದ್ದಾರೆ.
ಕಳೆದ ಮಾರ್ಚ್ 21 ರಂದು ದೆಹಲಿ ಮೂಲದ ತ್ರಿದೇಬ್ ನಂದಿ ಎಂಬ ವ್ಯಕ್ತಿ ವಿಮಾನದಲ್ಲಿ ಮಂಗಳೂರಿಗೆ ಬಂದಿದ್ದಾನೆ. ಮಲ್ಪೆಯ ಸಮುದ್ರ ತೀರದ ವಸತಿಯೊಂದರಲ್ಲಿ ಹತ್ತು ದಿನ ತಂಗಿದ್ದಾನೆ. ಈ ನಡುವೆ ಏ.2 ರಂದು ಅನಿಲ್ಕುಮಾರ್ ಪ್ರತೀಜಾ ಎಂದು ಹೇಳಿಕೊಂಡಿರುವ ಮತ್ತೋರ್ವ ತನ್ನ ಫೋರ್ಡ್ ಕಾರಿನಲ್ಲಿ (ಡಿಎಲ್ 2 ಸಿಎಎಕ್ಸ್ 3136)ರಲ್ಲಿ ಬೇರೆ ಬೇರೆ ರಾಜ್ಯಗಳ ಮೂಲಕ ಕರ್ನಾಟಕಕ್ಕೆ ಬಂದಿದ್ದು, ಬಳಿಕ ಇಬ್ಬರು ಕೂಡಿಕೊಂಡು ಕಾರಿನಲ್ಲಿ ಕೊಡಗು ಜಿಲ್ಲೆಗೆ ಆಗಮಿಸಿದ್ದಾರೆ.
ಅಲ್ಲದೇ ಮೊದಲಿಗೆ ಭಾಗಮಂಡಲ ವ್ಯಾಪ್ತಿಯಲ್ಲಿ ಸುತ್ತಾಡಿದ್ದಾರೆ. ಅಲ್ಲಿನ ಪೊಲೀಸರು ವಿಚಾರಿಸುವಷ್ಟರಲ್ಲಿ ಈ ವ್ಯಕ್ತಿಗಳು ಕಾರು ಸಹಿತ ಪರಾರಿಯಾಗಿದ್ದಾರೆ. ಬಳಿಕ ಸಂಬಂಧಿಸಿದ ವಾಹನದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಅವರು ಎಲ್ಲೆಡೆ ನಿಗಾವಹಿಸುವಂತೆ ವಯರ್ ಲೆಸ್ ಸಂದೇಶ ರವಾನಿಸಿ, ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡುವಂತೆ ಇಲಾಖಾ ಠಾಣೆಗಳಿಗೆ ಸೂಚಿಸಿದ್ದಾರೆ.

ಈ ನಡುವೆ ಸಂಬಂಧಿಸಿದ ಕಾರು ಸಹಿತ ಆ ಇಬ್ಬರು ವ್ಯಕ್ತಿಗಳು ಹೊಟೇಲ್ ಉದ್ಯಮಿಯೊಬ್ಬರ ಪುತ್ರನ ಮನೆಯಲ್ಲಿ ತಂಗಿರುವ ಸುಳಿವು ಲಭಿಸಿದೆ. ಆ ಮೇರೆಗೆ ಗೋಣಿಕೊಪ್ಪಲು ಠಾಣಾಧಿಕಾರಿ ಸುರೇಶ್ ಬೋಪಣ್ಣ ಹಾಗೂ ಸಿಬ್ಬಂದಿ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಕಾನೂನು ಕ್ರಮ ಜರುಗಿಸಿದ್ದಾರೆ.
ಈ ವ್ಯಕ್ತಿಗಳ ವಿರುದ್ಧ ಪೊಲೀಸ್ ಕಾಯ್ದೆ 188 ಹಾಗೂ 270 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಇಬ್ಬರನ್ನು ವೀರಾಜಪೇಟೆ ತಹಶೀಲ್ದಾರ್ ಸಮ್ಮುಖ ಹಾಜರುಪಡಿಸಿ ಅವರ ನಿರ್ದೇಶನದಂತೆ, ಸರಕಾರಿ ಆಸ್ಪತ್ರೆಯ ಕ್ವಾರಂಟೈನ್ ನಲ್ಲಿ 14 ದಿನಗಳ ಇರುವಿಕೆಗೆ ಕ್ರಮ ಕೈಗೊಳ್ಳಲಾಗಿದೆ. ದೆಹಲಿಯಿಂದ ಕೊಡಗಿನ ತನಕವೂ ನಕಲಿ ಪಾಸ್ ನೊಂದಿಗೆ ಕಾರಿನಲ್ಲಿ ಸುತ್ತಾಡುತ್ತಿದ್ದುದಾಗಿ ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ.












Click it and Unblock the Notifications