ಟಿಪ್ಪು ಜಯಂತಿ ಗುಂಡೇಟು: ಆರೋಪಿಗಳು ಖುಲಾಸೆ
ಮಡಿಕೇರಿ, ಆಗಸ್ಟ್ 16: ಮಡಿಕೇರಿಯಲ್ಲಿ ಟಿಪ್ಪು ಜಯಂತಿ ಸಂದರ್ಭ ನಡೆದ ಗಲಭೆ ಪ್ರಕರಣದಲ್ಲಿ ಗುಂಡು ಹಾರಿಸಿ ಹತ್ಯೆಗೈದ ಆರೋಪ ಎದುರಿಸುತ್ತಿದ್ದ ಮೂವರನ್ನು ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
ಮಡಿಕೇರಿಯಲ್ಲಿ ಮೊಬೈಲ್ ಶಾಪ್ ನಡೆಸುತ್ತಿದ್ದ ಪಾಣತ್ತಲೆ ಕಾವೇರಪ್ಪ ಅಲಿಯಾಸ್ ಕವನ್ (33) ಮಡಿಕೇರಿ ನಿವಾಸಿಗಳಾದ ಸೂದನ ಭೀಷ್ಮ ಅಲಿಯಾಸ್ ನಂದ (38) ಹಾಗೂ ಟ್ಯಾಕ್ಷಿ ಚಾಲಕ ಕೆ.ಆರ್. ರಮೇಶ್ (47) ದೋಷಮುಕ್ತರಾದವರು.

2015ರ ನ. 10ರಂದು ಕೊಡಗು ಜಿಲ್ಲೆಯಲ್ಲಿ ಆಯೋಜಿಸಿದ ಟಿಪ್ಪು ಜಯಂತಿಯಲ್ಲಿ ಗಲಭೆಗಳಾದಾಗ ವಿಶ್ವಹಿಂದೂ ಪರಿಷತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿದ್ದ ದೇವಪ್ಪಂಡ ಕುಟ್ಟಪ್ಪ ಸಾವನ್ನಪ್ಪಿದ್ದರು.
ಆ ನಂತರ ಮಡಿಕೇರಿ ಕಾರ್ಯಕ್ರಮ ಮುಗಿಸಿ ಸಿದ್ದಾಪುರದತ್ತ ಲಾರಿಯಲ್ಲಿ ತೆರಳುತ್ತಿದ್ದ ಗುಹ್ಯ ಗ್ರಾಮದ ಸಾಹುಲ್ ಹಮೀದ್ (22)ಎಂಬ ಯುವಕನ ಮೇಲೆ ನೀರುಕೊಲ್ಲಿ ಸನಿಹ ಅಪರಿಚಿತರು ಗುಂಡು ಹಾರಿಸಿದ್ದು, ಜೀವನ್ಮರಣ ಸ್ಥಿತಿಯಲ್ಲಿ ಗಾಯಾಳು ಮೈಸೂರಿನ ಆಸ್ಪತ್ರೆಗೆ ದಾಖಲಾಗಿ ಅಂದು ರಾತ್ರಿ ಸಾವಿಗೀಡಾದರು.
ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರ ವಿಶೇಷ ತಂಡ 2015ರ ಡಿ. 14 ರಂದು ಮಡಿಕೇರಿಯಲ್ಲಿ ಮೊಬೈಲ್ ಶಾಪೊಂದನ್ನು ನಡೆಸುತ್ತಿದ್ದ ಪಾಣತ್ತಲೆ ಕವನ್ ಕಾವೇರಿಯಪ್ಪ, ಮಡಿಕೇರಿ ನಗರದ ನಿವಾಸಿಗಳಾದ ಬೆಳೆಗಾರರಾದ ಸೂದನ ಭೀಷ್ಮ ಹಾಗೂ ಚಾಲಕ ಕೆ.ಆರ್. ರಮೇಶ್ ಎಂಬವರನ್ನು ಬಂಧಿಸಿ ಐಪಿಸಿ ಸೆಕ್ಷನ್ 120 ಬಿ, 307, 302, 34 ಹಾಗೂ ಭಾರತೀಯ ಆಯುಧ ಕಾಯಿದೆಯಂತೆ 3, 5, 25, 27, 30 ಸೆಕ್ಷನ್ ನಡಿ ಪ್ರಕರಣ ದಾಖಲಿಸಿ ಕೊಂಡು ದೋಷಾರೋಪಣಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಡಿ. ಪವನೇಶ್ ಅವರು ಸೂಕ್ತ ಸಾಕ್ಷ್ಯಾಧಾರ ದೊರೆಯದ ಹಿನ್ನೆಲೆಯಲ್ಲಿ ಮೂವರು ಆರೋಪಿಗಳ ವಿರುದ್ಧದ ಆರೋಪವನ್ನು ದೋಷ ಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ. ಆರೋಪಿಗಳ ಪರವಾಗಿ ವಕೀಲರಾದ ಪಿ. ಕೃಷ್ಣ ಮೂರ್ತಿ ವಾದ ಮಂಡಿಸಿದ್ದರು.












Click it and Unblock the Notifications