ಟಿಪ್ಪು ಜಯಂತಿ: ಕೊಡಗಿನಲ್ಲಿ ಖಾಕಿ ಸರ್ಪಗಾವಲು
ಮಡಿಕೇರಿ, ನವೆಂಬರ್ 16 : ನವೆಂಬರ್ ಬಂತೆಂದರೆ ಕೊಡಗಿನಲ್ಲಿ ಆತಂಕ ಶುರುವಾಗುತ್ತದೆ. ಅದರಲ್ಲೂ ಕಳೆದ ನವೆಂಬರ್ 10ರಂದು ನಡೆದ ಗಲಭೆಯನ್ನು ಇಲ್ಲಿನ ಜನ ಮರೆಯುವಂತೆಯೇ ಇಲ್ಲ.
ರಾಜ್ಯ ಸರ್ಕಾರ ಆಚರಿಸುತ್ತಿರುವ ಟಿಪ್ಪು ಜಯಂತಿಗೆ ಕೊಡಗಿನಲ್ಲಿ ಭಾರೀ ವಿರೋಧವಿದೆ. ಅದರ ನಡುವೆಯೂ ಸರ್ಕಾರ ಆಚರಣೆ ಮಾಡಿಯೇ ತೀರಬೇಕೆಂಬ ಹಠಕ್ಕೆ ಬಿದ್ದಿರುವ ಕಾರಣದಿಂದಾಗಿ ಜಿಲ್ಲಾಡಳಿತ ಈ ಬಾರಿ ಟಿಪ್ಪು ಜಯಂತಿಯನ್ನು ಪೊಲೀಸ್ ಬಂದೋಬಸ್ತ್ ನಲ್ಲಿ ಆಚರಿಸಲು ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲೆಡೆ ಬಿಗಿಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಚೆಕ್ ಪೋಸ್ಟ್ಗಳಲ್ಲಿ ಹದ್ದಿನ ಕಣ್ಣಿಡುವಂತೆ ಹೊರಗಿನಿಂದ ಒಳಕ್ಕೆ ನುಸುಳುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.
2015ರಲ್ಲಿ ಕೊಡಗಿನಲ್ಲಿ ನಡೆದ ಕೋಮುಗಲಭೆ ಇನ್ನೂ ಕಣ್ಣಮುಂದೆಯೇ ಇರುವುದರಿಂದ ಇದುವರೆಗೆ ಸಹಬಾಳ್ವೆಯಿಂದ ಇದ್ದವರಿಗೆ ಏನಾಗುತ್ತದೆಯೋ ಎಂಬ ಆತಂಕವೂ ಆರಂಭವಾಗಿದೆ.
ಈಗಾಗಲೇ ಕೆಲವು ಹಿಂದೂಪರ ಸಂಘಟನೆಗಳು ಹಾಗೂ ಕೊಡವ ಸಂಘಟನೆಗಳು ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಟಿಪ್ಪು ಜಯಂತಿ ಆಚರಣೆ ಮಾಡಿ ಎಂಬ ಪರ ಕೂಗು ಕೂಡ ಕೇಳಿ ಬಂದಿದೆ. ಹೀಗಾಗಿ ಬೇಕು ಬೇಡಗಳ ನಡುವೆ ಜಿಲ್ಲಾಡಳಿತ ಟಿಪ್ಪು ಜಯಂತಿ ಆಚರಣೆ ಮಾಡಲಿದೆ.

ಬಿಗಿಪೊಲೀಸ್ ಬಂದೋಬಸ್ತ್
ಈ ಹಿಂದೆ ಟಿಪ್ಪು ಜಯಂತಿ ಆಚರಣೆ ಸಂದರ್ಭ ಹೊರ ಜಿಲ್ಲೆ ಮತ್ತು ರಾಜ್ಯದಿಂದ ನುಸುಳಿ ಬಂದ ಜನ ಗಲಾಟೆ ಮಾಡಿದ್ದಾರೆ ಎಂಬ ಆರೋಪವಿದೆ. ಹೀಗಾಗಿ ಈಗಿನಿಂದಲೇ ಎಲ್ಲೆಡೆ ಗಡಿಭಾಗದ ತನಿಖಾ ಠಾಣೆಗಳಲ್ಲಿ ಎಚ್ಚರಿಕೆ ವಹಿಸಲಾಗಿದೆ. ಜತೆಗೆ ಯಾವುದೇ ಗಲಾಟೆ ಮಾಡಿದರೆ ಬಂಧಿಸುವ ಎಚ್ಚರಿಕೆಯನ್ನು ಜಿಲ್ಲಾಡಳಿತ ನೀಡಿದೆ. ಅಷ್ಟೇ ಅಲ್ಲದೆ ಅಹಿತಕರ ಘಟನೆ ನಡೆಯದಂತೆ ಬಿಗಿಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಐಜಿಪಿ ವಿಫುಲ್ ಕುಮಾರ್ ಮಡಿಕೇರಿಗೆ ಭೇಟಿ
ಈಗಾಗಲೇ ದಕ್ಷಿಣ ವಲಯದ ಐಜಿಪಿ ವಿಫುಲ್ ಕುಮಾರ್ ಅವರು ಮಡಿಕೇರಿಗೆ ಭೇಟಿ ನೀಡಿದ್ದು, ಎಸ್ಪಿ ಕಚೇರಿಯಲ್ಲಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆಗಳನ್ನು ನೀಡಿದ್ದಾರೆ. ಅಲ್ಲದೆ ಟಿಪ್ಪು ಜಯಂತಿ ಆಚರಣೆ ಸಂದರ್ಭ ಅಶಾಂತಿ ಮೂಡಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲೆಯೊಳಗೆ ಪ್ರವೇಶಿಸುವವರ ಮೇಲೆ ನಿಗಾ
ಎಸ್ಪಿ ರಾಜೇಂದ್ರಪ್ರಸಾದ್ ಅವರು ಕೇರಳ ರಾಜ್ಯದ ಕಣ್ಣೂರು, ವಯನಾಡ್, ಕಾಸರಗೋಡು ಹಾಗೂ ಹಾಸನ, ಮೈಸೂರು ಜಿಲ್ಲೆಗೆ ಹೊಂದಿಕೊಂಡಂತಹ 10 ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ ಜಿಲ್ಲೆಯೊಳಗೆ ಪ್ರವೇಶಿಸುವವರ ಮೇಲೆ ನಿಗಾವಹಿಸುವಂತೆಯೂ ಸೂಚಿಸಿದ್ದಾರೆ.

ಪೊಲೀಸರಿಂದ ಪಥಸಂಚಲನ
ಇನ್ನು ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಪೊಲೀಸರು ಪಥಸಂಚಲನ ನಡೆಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಕುಟ್ಟಪ್ಪ ಜಯಂತಿ ಆಚರಣೆಗೆ ನಿರ್ಧಾರ
ಜಿಲ್ಲಾಡಳಿತ ಟಿಪ್ಪು ಜಯಂತಿ ಮಾಡಿದರೆ ಮತ್ತೊಂದೆಡೆ ಹಿಂದೂಪರ ಸಂಘಟನೆಗಳು ಹುತಾತ್ಮ ಕುಟ್ಟಪ್ಪ ಜಯಂತಿಯನ್ನು ಆಚರಿಸಿಕೊಳ್ಳುವುದಾಗಿ ಹೇಳಿಕೊಂಡಿವೆ. ಒಟ್ಟಾರೆ ಕೊಡಗಿನಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದ್ದು, ಜಿಲ್ಲಾಡಳಿತ ಎಲ್ಲವನ್ನೂ ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.












Click it and Unblock the Notifications