ಈ ಬಾರಿ ಅಕ್ಟೋಬರ್ 18ಕ್ಕೆ ತಲಕಾವೇರಿಯಲ್ಲಿ ತೀರ್ಥೋದ್ಭವ
ಮಡಿಕೇರಿ, ಸೆಪ್ಟೆಂಬರ್ 14: ಕರ್ನಾಟಕದ ಸಿರಿದೇವಿ... ತಮಿಳುನಾಡಿನ ಭಾಗ್ಯಲಕ್ಷ್ಮಿ... ಕೊಡಗಿನ ಕುಲದೇವಿಯಾದ ಮಾತೆ ಕಾವೇರಿ ವರ್ಷಕ್ಕೊಮ್ಮೆ ತುಲಾ ಸಂಕ್ರಮಣದಂದು ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಅವಿರ್ಭವಿಸಿ ಭಕ್ತರಿಗೆ ದರ್ಶನ ನೀಡುತ್ತಾ ಬಂದಿದ್ದು, ಅದರಂತೆ ಈ ಬಾರಿ ಅಕ್ಟೋಬರ್ 18ರ ಶುಕ್ರವಾರ ಮುಂಜಾನೆ 12 ಗಂಟೆ 59 ನಿಮಿಷಕ್ಕೆ ಸಲ್ಲುವ ಕರ್ಕಾಟಕ ಲಗ್ನದಲ್ಲಿ ತೀರ್ಥರೂಪಿಣಿಯಾಗಿ ಉದ್ಭವಿಸಿ ಭಕ್ತರನ್ನು ಪವಿತ್ರಗೊಳಿಸಲಿದ್ದಾಳೆ.
ವರ್ಷಕ್ಕೊಮ್ಮೆ ಸೂರ್ಯನು ತುಲಾ ರಾಶಿಗೆ ಪ್ರವೇಶಿಸುವ ಸಂಕ್ರಾಂತಿ ಮುಹೂರ್ತದಲ್ಲಿ ಕೊಡಗಿನ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಹಾಲು ಉಕ್ಕಿಬರುವಂತೆ ಮಾತೆ ಕಾವೇರಿ ತೀರ್ಥರೂಪಿಣಿಯಾಗಿ ಉದ್ಭವಿಸುತ್ತಿದ್ದು, ಈ ಬಾರಿ ನಡುರಾತ್ರಿಯಲ್ಲಿ ತೀರ್ಥೋದ್ಭವವಾಗುತ್ತಿರುವುದರಿಂದ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ.
ತಲಕಾವೇರಿಯಲ್ಲಿ ಬುಧವಾರ ಸಂಜೆ ಕಾವೇರಿ ತೀರ್ಥೋದ್ಭವ
ಪ್ರತಿ ವರ್ಷವೂ ತಿಂಗಳಿರುವಾಗಲೇ ಕಾವೇರಿಯ ಕ್ಷೇತ್ರದಲ್ಲಿ ತಕ್ಕ ಮುಖ್ಯಸ್ಥರು, ಊರಿನ ಪ್ರಮುಖರು, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಪ್ರಮುಖರ ಸಮ್ಮುಖದಲ್ಲಿ ತೀರ್ಥೋದ್ಭವದ ಸಮಯ ನಿರ್ಣಯ ಮಾಡಲಾಗುತ್ತದೆ. ಈ ವೇಳೆ ತುಲಾ ಸಂಕ್ರಮಣ ಜಾತ್ರೆಯಲ್ಲಿ ನಡೆಯಲಿರುವ ಕಾರ್ಯಕ್ರಮಗಳು ಮತ್ತು ಅವುಗಳ ಸಮಯವನ್ನು ನಿಗದಿಪಡಿಸಲಾಗುತ್ತದೆ.
ಇನ್ನು ಕಾವೇರಿ ತೀರ್ಥೋದ್ಭವ ಸಂಬಂಧ ಹಲವು ದೈವಿಕ ಕಾರ್ಯಗಳು ನಡೆಯಲಿದ್ದು, ಸಂಗಮಕ್ಷೇತ್ರ ಭಾಗಮಂಡಲದಿಂದಲೇ ಕೆಲವೊಂದು ಸಂಪ್ರದಾಯ ಆರಂಭವಾಗಲಿದೆ. ಅದರಂತೆ ಭಾಗಮಂಡಲದಲ್ಲಿ ಸೆ.27 ರಂದು ಬೆ.9.15 ಗಂಟೆಗೆ ಸಲ್ಲುವ ತುಲಾ ಲಗ್ನದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವ ಮೂಲಕ ಜಾತ್ರಾ ಕಾರ್ಯಕ್ರಮಗಳು ಆರಂಭವಾಗಲಿವೆ.
ತಲಕಾವೇರಿಯಲ್ಲಿ ನಿವಾರಣೆಯಾಗದ ದೋಷ, ಬತ್ತಿ ಹೋಗುತ್ತಾ ಕಾವೇರಿ?
ಅ.5ರಂದು ಬೆ.8.45ಕ್ಕೆ ಸಲ್ಲುವ ತುಲಾ ಲಗ್ನದಲ್ಲಿ ಆಜ್ಞಾ ಮುಹೂರ್ತ, ಅ.15ರಂದು 12.೦5 ಗಂಟೆಗೆ ಧನುರ್ ಲಗ್ನದಲ್ಲಿ ಅಕ್ಷಯಪಾತ್ರೆ ಹಾಗೂ ಸಂಜೆ 4.31 ಗಂಟೆಗೆ ಕುಂಭ ಲಗ್ನದಲ್ಲಿ ಕಾಣಿಕೆ ಡಬ್ಬಿಯನ್ನು ಇಡಲಾಗುತ್ತದೆ. ಆ ನಂತರ ಅ 18ರಂದು ತೀರ್ಥೋದ್ಭವವಾಗುವುದರಿಂದ ಹಲವು ಧಾರ್ಮಿಕ ಕಾರ್ಯಗಳು ಭಾಗಮಂಡಲ ಮತ್ತು ತಲಕಾವೇರಿ ಕ್ಷೇತ್ರದಲ್ಲಿ ನಡೆಯಲಿದೆ.