18 ದಿನಗಳ ದಿಡ್ಡಳ್ಳಿ ನಿರಾಶ್ರಿತರ ಹೋರಾಟ ಅಂತ್ಯ!
ಮಡಿಕೇರಿ, ಡಿಸೆಂಬರ್ 24: ರಾಜ್ಯ ಮಾತ್ರವಲ್ಲ ರಾಷ್ಟ್ರಮಟ್ಟದ ಸುದ್ದಿಯಾಗಿ ಗಮನಸೆಳೆದಿದ್ದ ಕೊಡಗಿನ ದಿಡ್ಡಳ್ಳಿ ಮೀಸಲು ಅರಣ್ಯ ಒತ್ತುವರಿ ಮಾಡಿ ಆಶ್ರಯ ಕಳೆದುಕೊಂಡಿದ್ದ ನಿರಾಶ್ರಿತರ ಹೋರಾಟಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿದ್ದು ಸದ್ಯ ಅಂತ್ಯ ಕಂಡಿದೆ.
ಸಮಾಜ ಕಲ್ಯಾಣ ಸಚಿವ ಎಚ್.ಆಂಜನೆಯ ನೇತೃತ್ವದಲ್ಲಿ ಶುಕ್ರವಾರ ನಡೆದ ಸಂಧಾನ ಸಭೆಯಲ್ಲಿ ನಿರಾಶ್ರಿತರಿಗೆ ಸೂರು ದೊರೆಯುವ ಭರವಸೆ ಸಿಕ್ಕಿದ ಬಳಿಕ ತಮ್ಮ 18 ದಿನಗಳ ಹೋರಾಟವನ್ನು ಆದಿವಾಸಿಗಳು ಅಂತ್ಯಗೊಳಿಸಿದ್ದಾರೆ. ದಿಡ್ಡಳ್ಳಿ ಕಾಡಿಗೆ ಭೇಟಿ ನೀಡಿ ನಿರಾಶ್ರಿತರ ಸಮಸ್ಯೆ ಆಲಿಸಿದ ಸಚಿವರು ಬಳಿಕ ಮಡಿಕೇರಿ ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ಮೂರು ಗಂಟೆಗಳ ಕಾಲ ಸಂಧಾನ ಸಭೆ ನಡೆಸಿ ಸರ್ಕಾರದ ಕಡೆಯಿಂದ ಪುನರ್ವಸತಿ ಕಲ್ಪಿಸುವ ಭರವಸೆ ನೀಡಿದ್ದಾರೆ ಅಲ್ಲದೆ ಒಂದು ಕೋಟಿ ಹಣವನ್ನು ಬಿಡುಗಡೆ ಮಾಡಿದ್ದಾರೆ.[ದಿಡ್ಡಳ್ಳಿ ಆದಿವಾಸಿಗಳಿಗೆ ಶೀಘ್ರ ಪುನರ್ವಸತಿ ವ್ಯವಸ್ಥೆ, ಸಿಎಂ]

ದಿಡ್ಡಳ್ಳಿಯಲ್ಲೇ ವಸತಿಗೆ ಪಟ್ಟು:
ಒಂದು ಹಂತದಲ್ಲಿ ಹೋರಾಟಗಾರರು ದಿಡ್ಡಳ್ಳಿಯಲ್ಲೇ ಪುನರ್ವಸತಿಗೆ ಪಟ್ಟು ಹಿಡಿದರು. ದೇವಮಚ್ಚಿ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಗೆ ಬರುವುದರಿಂದ ವಸತಿ ಕಲ್ಪಿಸಲು ಸಾಧ್ಯವಿಲ್ಲವೆಂದು ಮನವರಿಕೆ ಮಾಡಿದರೂ 'ಪೈಸಾರಿ' ಭೂಮಿ ಎಂದು ಸಾಬೀತು ಪಡಿಸುವುದಾಗಿ ಮುಖಂಡ ಎ.ಕೆ.ಸುಬ್ಬಯ್ಯ ಪಟ್ಟುಹಿಡಿದರು.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲು ತೀರ್ಮಾನಿಸಲಾಯಿತು. ಇದೇ ವೇಳೆ 577 ಕುಟುಂಬಗಳ ತಾತ್ಕಾಲಿಕ ಪುನರ್ವಸತಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ರೂ.1 ಕೋಟಿ ಚೆಕ್ನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸಲಾಯಿತು.
ಈ ಸಂಬಂಧ ಸಚಿವ ಆಂಜನೇಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ದಿಡ್ಡಳ್ಳಿಗೆ ಬಂದು ನೆಲೆಸಿದರು. ಕಂಪೆನಿ ಕಾಫಿ ಎಸ್ಟೇಟ್ಗಳಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರು, ಬಹಳ ದಿನಗಳ ಬಳಿಕ ಸ್ವಂತ ಸೂರಿಗೆ ಎಚ್ಚೆತ್ತುಕೊಂಡಿದ್ದಾರೆ. ಅವರ ಬೇಡಿಕೆ ನ್ಯಾಯಯುತವಾಗಿದೆ. ತಿಂಗಳೊಳಗೆ ಜಿಲ್ಲಾಡಳಿತ ಪೈಸಾರಿ ಜಮೀನು ಗುರುತಿಸಿ ನಿವೇಶನ ಹಂಚಿಕೆ ಮಾಡಲು ಕ್ರಮ ತೆಗೆದುಕೊಳ್ಳಲು ಆದೇಶಿಸಿದ್ದೇನೆ. ಹೀಗಾಗಿ ಆದಿವಾಸಿಗಳು ಕೆಲಸಕ್ಕೆ ತೆರಳಲಿದ್ದಾರೆ. ಆದಿವಾಸಿಗಳನ್ನು ಉತ್ತಮ ಪ್ರಜೆಗಳಾಗಿ ಮಾಡಿವುದು ಸರ್ಕಾರದ ಉದ್ದೇಶ. ಅವರ ಕಣ್ಣೀರು ಒರೆಸುವ ಕೆಲಸ ಮಾಡಲಿದ್ದೇವೆ ಎಂದು ಭರವಸೆ ನೀಡಿದರು.[ದಿಡ್ಡಳ್ಳಿ ಆದಿವಾಸಿಗಳ ಪುನರ್ವಸತಿಗೆ ಆಗ್ರಹಿಸಿ ಮಂಗಳೂರಿನಲ್ಲಿ ಪ್ರತಿಭಟನೆ]
ಅರಣ್ಯ ಪ್ರದೇಶದಲ್ಲಿ ನಿವೇಶನ ಕೊಡಿಸುತ್ತೇವೆ ಎಂದು ಅಧಿಕಾರಿಗಳು ಮುಖಂಡರು ಆದಿವಾಸಿಗಳ ಬಳಿಯಿಂದ ಹಣ ವಸೂಲಿ ಮಾಡಿದ್ದಾರೆ ಎಂಬ ಆರೋಪದ ಕುರಿತತಂತೆ ಪರಿಶೀಲನೆ ನಡೆಸಲಾಗುವುದು ಎಂದರು. ಚಳವಳಿಗಾರರು ತಾಳ್ಮೆಯಿಂದ ಇರಬೇಕು ನಿರಾಶ್ರಿತರ ಆಶ್ರಯಕ್ಕೆ ಟಾರ್ಪಲ್, ನೀರು, ತಾತ್ಕಾಲಿಕ ಶೆಡ್, ಶೌಚಾಲಯ ನಿರ್ಮಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದರು,












Click it and Unblock the Notifications