ಪ್ರವಾಹ ಪೀಡಿತ ಮಡಿಕೇರಿಯಲ್ಲಿ ವಿಶೇಷ ಅನ್ನಭಾಗ್ಯ ಯೋಜನೆ ಜಾರಿ
ಮಡಿಕೇರಿ, ಆಗಸ್ಟ್ 26 : ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಸಂತ್ರಸ್ತರಾಗಿರುವ 50 ಸಾವಿರ ಕುಟುಂಬಗಳಿಗೆ 'ವಿಶೇಷ ಅನ್ನಭಾಗ್ಯ ಯೋಜನೆಯಡಿ ಆಹಾರ ಕಿಟ್'ಗಳನ್ನು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಜಮೀರ್ ಅಹಮದ್ ಖಾನ್ ವಿತರಣೆ ಮಾಡಿದರು.
ಮಡಿಕೇರಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮಿನಲ್ಲಿ 'ಆಹಾರ ಕಿಟ್' ವಿತರಿಸಿ ಮಾತನಾಡಿದ ಸಚಿವರು, 'ನೆರೆಗೆ ಸಿಲುಕಿ ಸಂತ್ರಸ್ತರಾಗಿರುವ ಕುಟುಂಬಗಳಿಗೆ 15 ದಿನದಲ್ಲಿ ತಾತ್ಕಾಲಿಕ ಪಡಿತರ ಚೀಟಿ ವಿತರಿಸಲಾಗುವುದು' ಎಂದು ತಿಳಿಸಿದರು.
ಆಹಾರ ಕಿಟ್ನಲ್ಲಿ 10 ಕೆ.ಜಿ ಅಕ್ಕಿ, ತಲಾ 1 ಕೆ.ಜಿ ತೊಗರಿ ಬೇಳೆ, ಉಪ್ಪು, ಸಕ್ಕರೆ, 1 ಲೀ. ಅಡುಗೆ ಎಣ್ಣೆ, 5 ಲೀ.ಸೀಮೆಎಣ್ಣೆ ಒಳಗೊಂಡಿದ್ದು, ನ್ಯಾಯಬೆಲೆ ಅಂಗಡಿ ಮೂಲಕ ವಿತರಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಸುಮಾರು 50 ಕ್ಕಿಂತ ಹೆಚ್ಚಿನ ಪರಿಹಾರ ಕೇಂದ್ರ ತೆರೆಯಲಾಗಿದ್ದು, ಈ ಕೇಂದ್ರಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಅಕ್ಕಿ ಮತ್ತು ತೊಗರಿ ಬೇಳೆಯನ್ನು ವಿತರಿಸಲಾಗುತ್ತಿದೆ. ಆಗಸ್ಟ್ 24ರವರೆಗೆ 486 ಕ್ವಿಂಟಾಲ್ ಅಕ್ಕಿ ಮತ್ತು 18.71 ಕ್ವಿಂಟಾಲ್ ತೊಗರಿಬೇಳೆ ವಿತರಿಸಲಾಗಿದೆ.
ಪರಿಹಾರ ಕೇಂದ್ರಗಳಿಗೆ ಇಂಧನವಾಗಿ ಅಡುಗೆ ಅನಿಲವನ್ನು ಪೂರೈಕೆ ಮಾಡಲಾಗುತ್ತಿದ್ದು, ಈವರೆಗೆ 153 ಸಿಲಿಂಡರ್ಗಳನ್ನು ಪೂರೈಕೆ ಮಾಡಲಾಗಿದೆ. ಇದರೊಂದಿಗೆ ಕೇಂದ್ರಗಳಲ್ಲಿನ ಚಿಕ್ಕ ಮಕ್ಕಳ ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ ಮಾಡಲು ಪ್ರತಿ ದಿನ ಪ್ರತಿ ಕೇಂದ್ರಕ್ಕೆ ತಲಾ 2 ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದೆ.
ಜಿಲ್ಲೆಯ ಪ್ರಕೃತಿ ವಿಕೋಪಕ್ಕೊಳಗಾದವರಿಗಾಗಿ ಸ್ಥಾಪಿಸಿದ ಆಶ್ರಯ ಕೇಂದ್ರಗಳಿಗೆ ಸರಬರಾಜು ಮಾಡಲು 200 ಕ್ವಿಂಟಾಲ್ ಸಕ್ಕರೆಯನ್ನು ಸ್ವೀಕರಿಸಲಾಗಿದೆ. ಪ್ರತಿ ಆಶ್ರಯ ಕೇಂದ್ರಕ್ಕೆ 50 ಕೆ.ಜಿಯಂತೆ ಸಕ್ಕರೆಯನ್ನು ವಿತರಿಸಲಾಗುತ್ತಿದೆ. ಬಾಕಿ ಉಳಿದ ಸಕ್ಕರೆಯನ್ನು ತುರ್ತು ಪರಿಸ್ಥಿತಿಯಲ್ಲಿ ಉಪಯೋಗಿಸಲು ಬಳಸಿಕೊಳ್ಳಲಾಗುತ್ತದೆ.
ಮುಖ್ಯಮಂತ್ರಿ ಅವರು ಪ್ರಕಟಿಸಿರುವಂತೆ ವಿಪತ್ತು ಪೀಡಿತ ಫಲಾನುಭವಿಗಳಿಗೆ 50 ಸಾವಿರ ವಿಶೇಷ ಆಹಾರ ಕಿಟ್ಗಳನ್ನು ಉಚಿತವಾಗಿ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಹಾರ ಕಿಟ್ ಜೊತೆಗೆ ಬಕೆಟ್ ಮತ್ತು ಮಗ್ನ್ನು ನೀಡಲಾಗುತ್ತದೆ.
ಪ್ರಕೃತಿ ವಿಕೋಪದಿಂದ ತೀವ್ರವಾಗಿ ಭಾದಿತವಾದ 34 ಗ್ರಾಮ ಪಂಚಾಯಿತಿಗಳ ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ 35 ಕೆ.ಜಿ ಅಕ್ಕಿ ಹಾಗೂ 1 ಕೆ.ಜಿ ತೊಗರಿ ಬೇಳೆಯನ್ನು ವಿಶೇಷ ಆಹಾರ ಪ್ಯಾಕೇಜ್ನಡಿ ಉಚಿತವಾಗಿ ವಿತರಿಸಲಾಗುತ್ತಿದೆ.
ಇಲಾಖೆಯು ಪರ್ಯಾಯವಾಗಿ ಪ್ರತಿ ಕುಟುಂಬಕ್ಕೆ 35 ಕೆ.ಜಿ ಅಕ್ಕಿ ಮತ್ತು 1 ಕೆ.ಜಿ ತೊಗರಿ ಬೇಳೆಯನ್ನು ನ್ಯಾಯಬೆಲೆ ಅಂಗಡಿಗಳನ್ನು ಹೊರತುಪಡಿಸಿ ಗ್ರಾಮ ಪಂಚಾಯತ್ಗಳ ಮೂಲಕವೇ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.