ಕೊಡಗಿನಲ್ಲಿ ಮಾಂಸ ಮಾರಾಟಕ್ಕೆ ನೋ ಎಂದ ಸಚಿವ ಸೋಮಣ್ಣ
ಮಡಿಕೇರಿ, ಮಾರ್ಚ್ 31: ಕೊಡಗು ಜಿಲ್ಲೆಯಲ್ಲಿ ಮೀನು ಸೇರಿದಂತೆ ಯಾವುದೇ ರೀತಿಯ ಮಾಂಸ ಮಾರಾಟಕ್ಕೆ ಅವಕಾಶವಿಲ್ಲ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಘೋಷಿಸಿದ್ದಾರೆ.
ಮಡಿಕೇರಿ ಜಿಲ್ಲಾ ಪಂಚಾಯತಿ ಭವನದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಈ ಮುನ್ನ, ಸೋಮವಾರ, ಬುಧವಾರ, ಶುಕ್ರವಾರ ಮಾಂಸ ಮಾರಾಟಕ್ಕೆ ಅವಕಾಶವಿದೆ. ಚಿಕನ್, ಮಟನ್ ಮಾರಾಟಕ್ಕೆ ಮಾತ್ರ ಅವಕಾಶವಿದೆ. ಮೀನು ಮಾರಾಟ ಮಾಡುವಂತಿಲ್ಲ ಎನ್ನಲಾಗಿತ್ತು. ಇದೀಗ ಮೀನು ಸೇರಿದಂತೆ ಯಾವುದೇ ರೀತಿಯ ಮಾಂಸ ಮಾರಾಟಕ್ಕೆ ಜಿಲ್ಲೆಯಲ್ಲಿ ಅವಕಾಶ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿ ಒಟ್ಟು 12 ಮಂದಿಗೆ ಕೊರೊನಾ: ಸಚಿವ ಸೋಮಣ್ಣ
ಇದೇ ವೇಳೆ, ಕೊಡಗಿನ ಲಾಕ್ ಡೌನ್ ಸ್ಥಿತಿಗತಿಯ ಕುರಿತು ಮಾತನಾಡಿ, "ಕೊಡಗಿನಲ್ಲಿ ಆರೋಗ್ಯ ಸ್ಥಿತಿ ಯೋಗ್ಯವಾಗಿದೆ. ಯಾವುದೇ ಆತಂಕ ಇಲ್ಲ. ಎಲ್ಲವೂ ನಿಯಂತ್ರಣದಲ್ಲಿದೆ. ವಾರದ ಎಲ್ಲಾ ದಿನಗಳಲ್ಲಿ ಬೆಳಗ್ಗೆ 6ರಿಂದ 8ರವರೆಗೆ ಹಾಲು ಪತ್ರಿಕೆ ವಿತರಣೆಗೆ ಅವಕಾಶವೊದೆ. ಸೋಮವಾರ, ಬುಧವಾರ ಮತ್ತು ಶುಕ್ರವಾರ ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ದಿನಸಿ ಮತ್ತು ತರಕಾರಿ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ" ಎಂದರು.
"ಮನೆಯಲ್ಲಿ ಕಾಫಿ ಶೇಖರಿಸಿಟ್ಟ ಬೆಳಗಾರರಿಗೆ ಕಾಫಿ ಮಾರಲು ಅನುಕೂಲ ಕಲ್ಪಿಸಲು ಸರ್ಕಾರ ಮುಂದಾಗಿದೆ. 1900 ಮಂದಿ ಜಿಲ್ಲೆಯ ಕೂಲಿ ಕಾರ್ಮಿಕರಿಗೆ ಪಡಿತರ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಸ್ಪತ್ರೆಗೆ 10 ವೆಂಟಿಲೇಟರ್ ವ್ಯವಸ್ಥೆ ಮಾಡಲಾಗುತ್ತದೆ. ಗ್ರಾಮ ಮಟ್ಟದಲ್ಲಿ ತರಕಾರಿ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ" ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭ ಶಿಕ್ಷಣ ಇಲಾಖೆ ಮೂಲಕ 21 ದಿನಗಳ ಕಾಲ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೂಲಕ ಮಕ್ಕಳಿಗೆ ಬಿಸಿ ಊಟ ವಿತರಣೆಗೆ ತಲಾ 2 ಕೆ.ಜಿ ಅಕ್ಕಿ ವಿತರಣೆಗೆ ಕ್ರಮಕೈಗೊಳ್ಳಲಾಗುವುದು ಎಂದರು.
ಲಾಕ್ ಡೌನ್ ಟೈಮಲ್ಲಿ ಸಿಗೋ ಮದ್ಯವೆಲ್ಲಾ ವಿಷಪೂರಿತವಂತೆ...
ಸುದ್ದಿಗೋಷ್ಠಿಯಲ್ಲಿ ಸಂಸದ ಪ್ರತಾಪ್ ಸಿಂಹ, ಕೊಡಗು ಜಿಲ್ಲೆಯ ಶಾಸಕರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ. ಜಿಲ್ಲಾ ಪಂಚಾಯತಿ ಅಧ್ಯಕ್ಷ ಕೆ ಜಿ ಹರೀಶ್, ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ನೇಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮಿ ಪ್ರಿಯ ಇದ್ದರು.