ಕೊಡಗಿನಲ್ಲಿ ಮಳೆಗಾಗಿ ಪ್ರಾರ್ಥಿಸಿ ಮಾರ್ಚ್ 20ಕ್ಕೆ ರುದ್ರಾಭಿಷೇಕ
ಮಡಿಕೇರಿ, ಮಾರ್ಚ್ 16: ಕಾವೇರಿ ತವರೂರು ಕೊಡಗಿನಲ್ಲಿ ಮಳೆ ಬಾರದೆ ಬರ ಉಂಟಾಗಿರುವ ಕಾರಣದಿಂದಾಗಿ ಉತ್ತಮ ಮಳೆಯಾಗಿ, ರಾಜ್ಯ ಸುಭಿಕ್ಷವಾಗಿರುವಂತೆ ದೇವರ ಮೊರೆ ಹೋಗಲು ಮೂರ್ನಾಡಿನ ಧನ್ವಂತ್ರಿ ಯೋಗ ಸೇವಾ ಪ್ರತಿಷ್ಠಾನ ಹಾಗೂ ಗಾಯತ್ರಿ ಚಾರಿಟೇಬಲ್ ಟ್ರಸ್ಟ್ ತೀರ್ಮಾಸಿದೆ. ಅದಕ್ಕಾಗಿ ರುದ್ರಾಭಿಷೇಕ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಬಲಮುರಿಯ ಕಣ್ವ ಮುನೀಶ್ವರ ದೇಗುಲದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮಾರ್ಚ್ 20ರಂದು ರುದ್ರಾಭಿಷೇಕವನ್ನು ನಡೆಸಲು ನಿರ್ಧರಿಸಲಾಗಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಯೋಗ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಮಹಾಬಲೇಶ್ವರ ಭಟ್, ರುದ್ರಾಭಿಷೇಕದ ಸಂದರ್ಭದಲ್ಲಿ ಸಾವಿರಕ್ಕೂ ಅಧಿಕ ರುದ್ರ ಪಠಣದೊಂದಿಗೆ ಮಳೆಗಾಗಿ ಶಿವನನ್ನು ಪ್ರಾರ್ಥಿಸಲಾಗುವುದು ಎಂದು ತಿಳಿಸಿದ್ದಾರೆ.[ಬರ ಬಂದು ಬಾಗಿಲಲಿ ನಿಂತಿಹುದು ಬದುಕು ಹೇಗೆ ಪ್ರಭುವೆ?]
ಕರ್ನಾಟಕಕ್ಕೆ ಮಾತ್ರವಲ್ಲದೆ, ಇಡೀ ದೇಶಕ್ಕೆ ಕೊಡಗು ಜಿಲ್ಲೆ ದೊಡ್ಡ ಸಂಪತ್ತು. ಇಂತಹ ಜಿಲ್ಲೆಯಲ್ಲಿ ಬರ ಎದುರಾದರೆ ಅಭಿವೃದ್ಧಿ ಕುಂಠಿತವಾಗುತ್ತದೆ. ಕಾಫಿ, ಕಾಳುಮೆಣಸು ಸೇರಿದಂತೆ ಇನ್ನಿತರ ಕೃಷಿ ಚಟುವಟಿಕೆಗಳಿಗೆ ನೀರಿನ ಕೊರತೆ ಎದುರಾಗಿದೆ. ಕಾವೇರಿ ನದಿ ಬತ್ತುತ್ತಿದ್ದು, ಈ ದುಃಸ್ಥಿತಿ ಕೊಡಗು ಜಿಲ್ಲೆಗೆ ಬಂದಿರುವುದು ದುರದೃಷ್ಟಕರ.[ಕಾವೇರಿ ಜನಿಸುವ ಕೊಡಗಿನ ಜನರು ನೀರಿಗಾಗಿ ಪಡುವ ಪಾಡಿದು]
ಕೊಡಗಿನಲ್ಲಿಯೇ ಮಳೆಯಾಗಿಲ್ಲ ಎಂದ ಮೇಲೆ ಕಾವೇರಿ ಕಣಿವೆಯಲ್ಲಿರುವ ಇತರ ಜಿಲ್ಲೆಗಳಿಗೂ ತೊಂದರೆಯುಂಟಾಗಲಿದೆ. ಇದರಿಂದ ರಾಜ್ಯದ ಜನ ಸಂಕಷ್ಟಕ್ಕೀಡಾಗಲಿದ್ದು, ಇದನ್ನು ತಪ್ಪಿಸಬೇಕಾದರೆ ದೇವರ ಮೊರೆ ಹೋಗುವುದು ಅನಿವಾರ್ಯ ಎಂದು ಅವರು ತಿಳಿಸಿದ್ದಾರೆ.
ಕಣ್ವ ಮಹಾಮುನಿ ಪ್ರತಿಷ್ಠಾಪಿಸಿದ ಬಲಮುರಿಯ ಕಣ್ವ ಮುನೀಶ್ವರ ಕ್ಷೇತ್ರದಲ್ಲಿ ಮಾರ್ಚ್ 20ರಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ರುದ್ರ ಪಠಣದೊಂದಿಗೆ ರುದ್ರಾಭಿಷೇಕ ನಡೆಯಲಿದೆ. ರುದ್ರಾಭಿಷೇಕದ ಸಂದರ್ಭ ಜಿಲ್ಲೆಯ ಎಲ್ಲ ಜಾತಿ, ಜನಾಂಗ, ಪಕ್ಷ- ಪಂಗಡದ ಸಮಸ್ತರು ಸೇರಿ, ಮಳೆಗಾಗಿ ಪ್ರಾರ್ಥಿಸಬೇಕೆಂದು ಮನವಿ ಮಾಡಿದರು.[ಕೊಡಗಿಗೆ ರೈಲು, ನದಿತಿರುವು, ರೆಸಾರ್ಟ್ ಬೇಡವೇಬೇಡ!]
ಅಲ್ಲದೆ ಕನಿಷ್ಠ ಒಂದು ಬಟ್ಟಿ ಭತ್ತವನ್ನಾದರೂ ಬೆಳೆದು, ಕನಿಷ್ಠ ಪ್ರಮಾಣದ ಅಕ್ಕಿಯನ್ನು ಜಿಲ್ಲೆಯ ಮಳೆ ದೈವವಾದ ಇಗ್ಗುತ್ತಪ್ಪನಿಗೆ ಅರ್ಪಿಸುವ ಮೂಲಕ ಬರವನ್ನು ನಿವಾರಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಈ ಕುರಿತು ಜಾಗೃತಿ ಮೂಡಿಸುವ ಅಭಿಯಾನವನ್ನು ಜಿಲ್ಲೆಯಾದ್ಯಂತ ನಡೆಸಲಾಗುವುದೆಂದು ತಿಳಿಸಿದರು.